ADVERTISEMENT

ಬೀದಿನಾಯಿ ಆಶ್ರಯತಾಣ: ಹೋರಾಟಕ್ಕೆ ಸಿದ್ಧತೆ

ಉಪ್ಪೂರಿನಲ್ಲಿ ಆಶ್ರಯತಾಣ ನಿರ್ಮಾಣಕ್ಕೆ ನಿರ್ಧಾರ, ಉಪ್ಪೂರು, ಹಾವಂಜೆ, ಆರೂರು ಗ್ರಾಮಸ್ಥರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2026, 7:40 IST
Last Updated 1 ಫೆಬ್ರುವರಿ 2026, 7:40 IST
ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣ ಮಾಡುವುದರ ವಿರುದ್ಧ ಹೋರಾಟ ರೂಪಿಸಲು ಉಪ್ಪೂರು, ಹಾವಂಜೆ, ಆರೂರು ಗ್ರಾಮಸ್ಥರಿಂದ ಪೂರ್ವಭಾವಿ ನಡೆಯಿತು
ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣ ಮಾಡುವುದರ ವಿರುದ್ಧ ಹೋರಾಟ ರೂಪಿಸಲು ಉಪ್ಪೂರು, ಹಾವಂಜೆ, ಆರೂರು ಗ್ರಾಮಸ್ಥರಿಂದ ಪೂರ್ವಭಾವಿ ನಡೆಯಿತು   

ಬ್ರಹ್ಮಾವರ: ಉಪ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಆಶ್ರಯತಾಣ ನಿರ್ಮಾಣದ ವಿರುದ್ಧ ಹೋರಾಟಕ್ಕೆ ಉಪ್ಪೂರು, ಹಾವಂಜೆ, ಆರೂರು ಗ್ರಾಮಸ್ಥರು ಸಜ್ಜಾಗಿದ್ದು, ಪೂರ್ವಭಾವಿ ಸಭೆ ಉಪ್ಪೂರು ಸವಿನಯ ಫ್ರೆಂಡ್ಸ್ ನರ್ನಾಡುವಿನಲ್ಲಿ ಗುರುವಾರ ನಡೆಯಿತು.

ಸುತ್ತಮುತ್ತ ಜನವಸತಿ ಇರುವ, ಉಡುಪಿ ಜಿಲ್ಲಾ ಕೇಂದ್ರ ಮತ್ತು ಬ್ರಹ್ಮಾವರ ತಾಲ್ಲೂಕು ಕೇಂದ್ರಕ್ಕೆ ಸನಿಹವಿರುವ ಸುಮಾರು 9 ಎಕ್ರೆ ಪ್ರದೇಶದಲ್ಲಿ ಬೀದಿ ನಾಯಿಗಳ ಆಶ್ರಯತಾಣ ನಿರ್ಮಿಸಲು ಉದ್ದೇಶಿಸಲಾಗಿದೆ. ಇಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು, ತಾಲ್ಲೂಕು ಕ್ರೀಡಾಂಗಣ, ಸ್ನಾತಕೋತ್ತರ ಅಧ್ಯಯನ ಕೇಂದ್ರ, ವಸತಿ ರಹಿತರಿಗೆ ನಿವೇಶನ ವ್ಯವಸ್ಥೆ ಸೇರಿದಂತೆ ಜನೋಪಯೋಗಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲು ಸಾಧ್ಯವಿದೆ. ಇದು ವಿವೇಚನಾರಹಿತ ನಿರ್ಧಾರವಾಗಿದ್ದು, ಹಲವು ರೀತಿಯ ಹೋರಾಟ ನಡೆಸುವುದೆಂದು ತೀರ್ಮಾನ ಕೈಗೊಳ್ಳಲಾಯಿತು.

‘ಬೀದಿನಾಯಿ ಆಶ್ರಯತಾಣ ನಿರ್ಮಿಸಿ ಅಂದಾಜು ಸುಮಾರು 18 ಸಾವಿರ ಬೀದಿ ನಾಯಿಗಳನ್ನು ತಂದು, ನೆಮ್ಮದಿಯಿಂದ ಬದುಕು ಸಾಗಿಸುತ್ತಿರುವ ಜನರ ನಡುವೆ ಬಿಡುವ ಮೂಲಕ ಉಪ್ಪೂರು, ಹಾವಂಜೆ, ಆರೂರು ಗ್ರಾಮದ ಜನರ ನಾಗರಿಕ ಪ್ರಜ್ಞೆಗೆ ಸವಾಲಾಗಿದೆ’ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ಉಪ್ಪೂರು ಜನರ ಮೌನ ದೌರ್ಬಲ್ಯವಲ್ಲ ಎಂಬುದನ್ನು ಸಂಬಂಧಿಸಿದವರಿಗೆ ಅರ್ಥ ಮಾಡಿಸಬೇಕಿದೆ. ಬೀದಿನಾಯಿ ಆಶ್ರಯತಾಣ ನಿರ್ಮಾಣದಿಂದ ಉದ್ಭವಿಸಬಹುದಾದ ಸಮಸ್ಯೆಗಳ ಅರಿವು ಇಲ್ಲಿನ ಪ್ರಜ್ಞಾವಂತರಿಗಿದೆ. ಈ ಬಗ್ಗೆ ಚರ್ಚಿಸಲು, ಒಮ್ಮತದ ಪ್ರತಿಭಟನಾ ನಿರ್ಣಯ ಕೈಗೊಳ್ಳುವ ಅವಶ್ಯಕತೆಯಿದೆ’ ಎಂದು ಗ್ರಾಮಸ್ಥರು ಹೇಳಿದರು.

ಜಿಲ್ಲೆಯ ಸುಮಾರು 18 ಸಾವಿರ ಬೀದಿನಾಯಿಗಳನ್ನು ಉಪ್ಪೂರಿನ ಚಕ್ಕುಲಿಕಟ್ಟೆ ಹತ್ತಿರ 9.9 ಎಕ್ರೆ ಜಾಗದಲ್ಲಿ ಆಶ್ರಯತಾಣ ನಿರ್ಮಾಣ ಮಾಡಲು ಸರ್ವೆ ಆಗಿದ್ದು, ಅದು ನಿರ್ಮಾಣವಾದಲ್ಲಿ ಸುತ್ತಮುತ್ತಲಿನ ಜಾಗದವರು, ಆರೂರು ಗ್ರಾಮದ ಬೆಳ್ಮಾರಿನ ಜನರಿಗೂ ಅನಾರೋಗ್ಯ ಕಟ್ಟಿಟ್ಟ ಬುತ್ತಿ ಎಂದು ಬಾಧಕಗಳ ಪಟ್ಟಿಮಾಡಿ ಸಭೆಯಲ್ಲಿ ವಾಚಿಸಲಾಯಿತು.

ಸಮಸ್ಯೆಗಳ ಆಗರ: ಇದೇ ಸರ್ವೆ ನಂಬರಿನ ಸುತ್ತಮುತ್ತಲಿನ ಭಾಗಕ್ಕೆ ಸುಮಾರು 200 ಜನವಸತಿ ಮನೆಗಳಿಗೆ ಹಕ್ಕುಪತ್ರ ಬಾಕಿ ಇದೆ. ಉಪ್ಪೂರು, ಹಾವಂಜೆ, ಆರೂರು ಈ ಮೂರು ಪಂಚಾಯಿತಿಗೆ ಆಟದ ಮೈದಾನವೇ ಇಲ್ಲ. ಇದಕ್ಕೆ ಸರ್ಕಾರ ಸ್ಥಳ ಮಂಜೂರು ಮಾಡಿಲ್ಲ. ಆಶ್ರಯತಾಣಕ್ಕೆ ಗುರುತು ಮಾಡಿದ ಸ್ಥಳದಿಂದ ರಾಷ್ಟ್ರೀಯ ಹೆದ್ದಾರಿ 3 ಕಿ.ಮೀ, ಮಣಿಪಾಲ ಭಾಗಕ್ಕೆ 5 ಕಿ.ಮೀ, ಉಡುಪಿ ಹೃದಯ ಭಾಗಕ್ಕೆ 10 ಕಿ.ಮೀ ದೂರದಲ್ಲಿ ಈ ಸರ್ಕಾರಿ ಜಾಗ ಇದೆ. ಮುಂದಿನ ದಿನಗಳಲ್ಲಿ ಉತ್ತಮ ಯೋಜನೆಯನ್ನು ಈ ಭಾಗದಲ್ಲಿ ತರಬಹುದು. ಸುತ್ತಲೂ ಜನವಸತಿ ಸ್ಥಳವಿದ್ದು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯವರು ವಾಸ್ತವ್ಯವಿದ್ದಾರೆ. ಇಲ್ಲಿ ಬೀದಿನಾಯಿ ಆಶ್ರಯತಾಣ ನಿರ್ಮಾಣವಾದರೆ ನಾಯಿಗಳ ಮಲಮೂತ್ರ ವಿಸರ್ಜನೆಯ ನೀರು ಬೆಳ್ಮಾರಿನ ತೋಡಿನ ಮೂಲಕ ಹೊಳೆಗೆ ಸೇರಿ ಬೆಳ್ಮಾರಿನ ಜನರಿಗೆ ಅನಾರೋಗ್ಯ ಕಾಡಬಹುದು. ಬಾವಿಯ ನೀರು ಕಲುಷಿತವಾಗಬಹುದು, ಚರ್ಮ ಕಾಯಿಲೆ ಭೀತಿ ಎದುರಾಗಬಹುದು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನ: ಈ ಎಲ್ಲಾ ಸಮಸ್ಯೆಗಳನ್ನು ಕೇಂದ್ರೀಕರಿಸಿ ಮೂರೂ ಗ್ರಾಮದ ಸುಮಾರು 2 ಸಾವಿರಕ್ಕೂ ಜನ ಜಿಲ್ಲಾಧಿಕಾರಿ ಕಚೇರಿ ಎದುರು ಫೆ. 10ರೊಳಗೆ ಪ್ರತಿಭಟನೆ ನಡೆಸುವುದೆಂದು ನಿಶ್ಚಯಿಸಲಾಯಿತು. ಸಭೆಯಲ್ಲಿ ಮೂರು ಗ್ರಾಮಗಳ ಪಂಚಾಯಿತಿ ಪ್ರತಿನಿಧಿಗಳು, ಸಮಾಜ ಸೇವಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು, ಸಮಾನ ಮನಸ್ಕರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.