ಉಡುಪಿ: ಉಡುಪಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಅಂಜಾರು ಅತ್ರಾಡಿ ಕ್ಷೇತ್ರದ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷರಾಗಿ ತೆಂಕನಿಡಿಯೂರು ಕ್ಷೇತ್ರದ ಶರತ್ ಕುಮಾರ್ ಬೈಲಕೆರೆ ಅವಿರೋಧವಾಗಿ ಆಯ್ಕೆಯಾದರು.
ಗುರುವಾರ ತಾಲ್ಲೂಕು ಪಂಚಾಯಿತಿ ಕಚೇರಿಯ ಸಭಾಭವನದಲ್ಲಿ ಉಪ ವಿಭಾಗಾಧಿಕಾರಿ ರಾಜು ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆಗಳು ನಡೆದವು. ಬೆಳಿಗ್ಗೆ 9ಕ್ಕೆ ನಾಮಪತ್ರ ಸಲ್ಲಿಸಲು ಸಮಯ ನಿಗದಿ ಮಾಡಲಾಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ಸಂಧ್ಯಾ ಕಾಮತ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಶರತ್ ಕುಮಾರ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಮಧ್ಯಾಹ್ನ 1ರ ನಂತರ ಉಪ ವಿಭಾಗಾಧಿಕಾರಿ ರಾಜು ಅವರು ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಮೊದಲ ಬಾರಿ ಅಧಿಕಾರ:ಸಂಧ್ಯಾ ಕಾಮತ್ ಹಾಗೂ ಶರತ್ ಕುಮಾರ್ ಮೊದಲ ಬಾರಿಗೆ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿದ್ದು, ಮೊದಲ ಗೆಲುವಿನಲ್ಲೇ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷ ಪಟ್ಟ ಸಿಕ್ಕಿದೆ. ಶರತ್ ಸಂಘಪರಿವಾರದ ಮೂಲಕ ರಾಜಕೀಯ ಪ್ರವೇಶ ಪಡೆದರೆ, ಸಂಧ್ಯಾ ಅವರು 10 ವರ್ಷಗಳ ಹಿಂದೆ ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಉಪಾಧ್ಯಕ್ಷೆಯಾದ ಅನುಭವ ಹೊಂದಿದ್ದಾರೆ.
13 ಕ್ಷೇತ್ರ:ಕಾಪು ಹಾಗೂ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿಗಳು ರಚನೆಯಾಗುವುದಕ್ಕೂ ಮುನ್ನ ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ 41 ಕ್ಷೇತ್ರಗಳಿದ್ದವು. ಹೊಸದಾಗಿ ಪಂಚಾಯಿತಿಗಳ ರಚನೆಯಾದ ಬಳಿಕ ಕಾಪುವಿಗೆ 12, ಬ್ರಹ್ಮಾವರಕ್ಕೆ 16 ಕ್ಷೇತ್ರಗಳು ಹಂಚಿಕೆಯಾಗಿ, ಉಡುಪಿಗೆ 13 ಕ್ಷೇತ್ರಗಳು ಮಾತ್ರ ಉಳಿದುಕೊಂಡಿವೆ.
13 ಸದಸ್ಯ ಬಲದ ಉಡುಪಿ ತಾಲ್ಲೂಕು ಪಂಚಾಯಿತಿಯಲ್ಲಿ 9 ಬಿಜೆಪಿ ಹಾಗೂ 4 ಕಾಂಗ್ರೆಸ್ ಸದಸ್ಯರಿದ್ದಾರೆ. ಹಾಗಾಗಿ, ಬಿಜೆಪಿಗೆ ಅನಾಯಾಸವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ದಕ್ಕಿದೆ.
ಕೆಲವೇ ತಿಂಗಳು ಮಾತ್ರ ಅಧಿಕಾರ:2016ರಲ್ಲಿ ಉಡುಪಿ ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆದಿದ್ದು, ಇನ್ನು ಕೆಲವೇ ತಿಂಗಳುಗಳು ಮಾತ್ರ ಅಧಿಕಾರಾವಧಿ ಬಾಕಿ ಇದೆ.
ಚುನಾವಣಾ ಪ್ರಕ್ರಿಯೆ ವೇಳೆಉಡುಪಿ ತಾಲ್ಲೂಕು ಪಂಚಾಯಿತಿ ಇಒ ಮೋಹನ್ ರಾಜ್ ಹಾಗೂ ಅವಿಭಜಿತ ಉಡುಪಿ, ಕಾಪು, ಹಾಗೂ ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.