ADVERTISEMENT

ಖಾಸಗಿ ಸಹಭಾಗಿತ್ವದಿಂದ ಆರ್ಥಿಕತೆ ಬಲಿಷ್ಠ

ಬಯೋ ಇನ್‌ಕ್ಯುಬೇಟರ್‌ ಕೇಂದ್ರ ಉದ್ಘಾಟಿಸಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ್‌

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2019, 14:09 IST
Last Updated 25 ಅಕ್ಟೋಬರ್ 2019, 14:09 IST
ಮಣಿಪಾಲದ ಫಾರ್ಚುನ್‌ ವ್ಯಾಲಿವ್ಯೂ ಹೋಟೆಲ್‌ನ ಚೈತನ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಯೋ ಇನ್‌ಕ್ಯುಬೇಟರ್‌ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ
ಮಣಿಪಾಲದ ಫಾರ್ಚುನ್‌ ವ್ಯಾಲಿವ್ಯೂ ಹೋಟೆಲ್‌ನ ಚೈತನ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ಬಯೋ ಇನ್‌ಕ್ಯುಬೇಟರ್‌ ಕೇಂದ್ರ ಉದ್ಘಾಟನಾ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌ ಮಾತನಾಡಿದರು.ಪ್ರಜಾವಾಣಿ ಚಿತ್ರ   

ಉಡುಪಿ: ‘ಸರ್ಕಾರವು ಖಾಸಗಿ ಸಹಭಾಗಿತ್ವದೊಂದಿಗೆ ಹಮ್ಮಿಕೊಳ್ಳುವ ಯೋಜನೆಗಳಿಂದ ಆರ್ಥಿಕ ಭದ್ರತೆಯನ್ನು ಬಲಿಷ್ಠಗೊಳಿಸುವುದರ ಜತೆಗೆ ದೇಶದಲ್ಲಿ ಮಹತ್ತರ ಬದಲಾವಣೆಗಳನ್ನು ತರಲು ಸಾಧ್ಯವಿದೆ’ ಎಂದು ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ ನಾರಾಯಣ್‌ ಹೇಳಿದರು.

ರಾಜ್ಯ ಸರ್ಕಾರ ಹಾಗೂ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ)ಯ ಸಹಭಾಗಿತ್ವದಲ್ಲಿ ಆರಂಭಿಸಿರುವ ಬಯೋ ಇನ್‌ಕ್ಯುಬೇಟರ್‌ ಕೇಂದ್ರವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕರ್ನಾಟಕ ವಿಜ್ಞಾನ, ಮಾಹಿತಿ ತಂತ್ರಜ್ಞಾನ, ರಕ್ಷಣಾ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಸಂಶೋಧನಾ ಕೇಂದ್ರಗಳನ್ನು ರಾಜ್ಯದ ಇತರೆ ಪ್ರದೇಶಗಳಿಗೂ ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕದ ಕರಾವಳಿ ಭಾಗವನ್ನು ಆಯ್ದುಕೊಳ್ಳಲಾಗಿದೆ. ಮಣಿಪಾಲದ ಮಾಹೆ ಜೈವಿಕ ಔಷಧಿ ತಂತ್ರಜ್ಞಾನದಲ್ಲಿ ಇನ್ನಷ್ಟು ಸಾಧನೆ ಮಾಡುವ ನಿರೀಕ್ಷೆಯಿದೆ. ಇದು ದೇಶದ ಇತರ ಸಂಸ್ಥೆಗಳಿಗೆ ಮಾದರಿಯಾಗಿದೆ’ ಎಂದು ಬಣ್ಣಿಸಿದರು.

ADVERTISEMENT

‘ಜನರಲ್ಲಿ ಅವಕಾಶ ವಂಚಿತ ಭಾವನೆ ಬರಬಾರದು. ಬೇರೆ ದೇಶಗಳೊಂದಿಗೆ ಸ್ಪರ್ಧೆ ಮಾಡುವಾಗ ಹಿಂಜರಿಕೆ ಉಂಟಾಗಬಾರದು ಎಂಬ ಇತ್ಯಾದಿ ಕಾರಣಗಳಿಂದ ಸರ್ಕಾರ ಖಾಸಗಿ ಸಹಭಾಗಿತ್ವ ಕಾರ್ಯಕ್ರಮಗಳ ಕಡೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ ಸಾಕಷ್ಟು ಹಣ ವ್ಯಯ ಮಾಡಿದರೂ ಜಾಗತಿಕ ಮಟ್ಟಕ್ಕೆ ನಿರೀಕ್ಷಿತ ಸ್ಪರ್ಧೆ ಒಡ್ಡಲು ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್‌, ಮಣಿಪಾಲ ಸಮೂಹ ಸಂಸ್ಥೆಗಳ ಅಧ್ಯಕ್ಷ ರಂಜನ್‌ ಪೈ, ಮಾಹೆ ಸಹಕುಲಾಧಿಪತಿ ಡಾ.ಎಚ್‌.ಎಸ್‌. ಬಲ್ಲಾಳ್‌, ಉಪ ಕುಲಪತಿ ಡಾ. ವಿನೋದ್‌ ಭಟ್‌, ಪಶ್ಚಿಮ ವಲಯದ ಪೊಲೀಸ್‌ ಮಹಾ ನಿರೀಕ್ಷಕ ಅರುಣ್‌ ಚಕ್ರವರ್ತಿ, ಎಸ್ಪಿ ನಿಶಾ ಜೇಮ್ಸ್‌, ಐಟಿಬಿಟಿ ಕಾರ್ಯದರ್ಶಿ ಪ್ರಶಾಂತ್‌ ಮಿಶ್ರ, ಬಯೋ ಇನ್‌ಕ್ಯುಬೇಟರ್‌ ಕೇಂದ್ರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಮನೀಷ್‌ ಥಾಮಸ್‌ ಉಪಸ್ಥಿತರಿದ್ದರು. ಮಣಿಪಾಲ ಹೆಲ್ತ್‌ ಸೈನ್ಸ್‌ ವಿಭಾಗದ ಮುಖ್ಯಸ್ಥ ಸತ್ಯಮೂರ್ತಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.