ಹೆಬ್ರಿ: ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ ಮಿತ್ರ ಬಾಡಿಗೆ ಟ್ರ್ಯಾಕ್ಟರ್ ಯೋಜನೆಯನ್ನು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘವು ಜಾರಿಗೆ ತಂದಿರುವುದು ಮಾದರಿ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಗುರುವಾರ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಜಾರಿಗೆ ತಂದಿರುವ ರೈತ ಮಿತ್ರ ಬಾಡಿಗೆ ಟ್ರ್ಯಾಕ್ಟರ್ ವಿನೂತನ ಯೋಜನೆಗೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಂಘದ ರೈತ ಸದಸ್ಯರಿಗೆ ಯೋಜನೆಯಿಂದಾಗಿ ಹೆಚ್ಚಿನ ಅನುಕೂಲವಾಗಲಿದೆ. ಮುಂದೆ ಜಿಲ್ಲೆಯಾದ್ಯಂತ ಸಹಕಾರಿ ಸಂಘಗಳು ಈ ಯೋಜನೆ ಜಾರಿಗೆ ತಂದರೆ ಎಲ್ಲರಿಗೂ ಪ್ರಯೋಜನವಾಗಲಿದ್ದು, ಕೃಷಿ ಕಾರ್ಯಗಳು ಮತ್ತೆ ಆರಂಭವಾಗಲಿದೆ. ಯುವಕರು ಕೂಡ ಭತ್ತದ ಬೇಸಾಯದಲ್ಲಿ ತೊಡಗಿಕೊಳ್ಳಲು ಪ್ರೇರಣೆ ದೊರೆಯುತ್ತದೆ ಎಂದು ಶಾಸಕ ಸುನಿಲ್ ಕುಮಾರ್ ಹೇಳಿದರು.
ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ನವೀನ್ ಕೆ ಅಡ್ಯಂತಾಯ ಅವರು ಮಾತನಾಡಿ, ರೈತ ಸದಸ್ಯರಿಗೆ ವಿಶೇಷ ಸೇವೆ ನೀಡಬೇಕು ಎನ್ನುವ ಕಲ್ಪನೆಯಿಂದ ಲಾಭದ ದೃಷ್ಟಿ ನೋಡದೆ ರೈತ ಮಿತ್ರ ಯೋಜನೆ ಮಾಡಿದ್ದೇವೆ. ಯುವಕರು 5 ಜನರ ತಂಡದಲ್ಲಿ ಭತ್ತದ ಬೇಸಾಯ ಮಾಡಲು ಮುಂದೆ ಬಂದರೆ ಪ್ರವೀಣ್ ಬಲ್ಲಾಳ್ ಅವರ ನೇತೃತ್ವದಲ್ಲಿ ಜಮೀನು ಒದಗಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಈ ಅವಕಾಶದ ಸದುಪಯೋಗವನ್ನು ಪಡೆದುಕೊಂಡು ಕೃಷಿಯತ್ತ ಗಮನ ಕೊಡಿ ಎಂದು ಮನವಿ ಮಾಡಿದರು.
ಹೆಬ್ರಿಯ ಮುಖಂಡ ಎಚ್. ಪ್ರವೀಣ್ ಬಲ್ಲಾಳ್, ಹೆಬ್ರಿ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ ಕುಮಾರ್ ಶಿವಪುರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಹೆಬ್ರಿ ಪಂಚಾಯಿತಿ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್ ಜರ್ವತ್ತು, ಉದ್ಯಮಿ ಎಚ್.ಸತೀಶ ಪೈ, ಸಂಘದ ಉಪಾಧ್ಯಕ್ಷ ಪುಟ್ಟಣ್ಣ ಭಟ್, ಕಾರ್ಯನಿರ್ವಾಹಕ ಅಧಿಕಾರಿ ಶೀನ ನಾಯ್ಕ್, ನಿರ್ದೇಶಕರಾದ ಭೂತುಗುಂಡಿ ಕರುಣಾಕರ ಶೆಟ್ಟಿ, ಸುಧಾ ಗಣೇಶ್ ನಾಯಕ್, ಸುಧಾಕರ ಹೆಗ್ಡೆ, ವಿವಿಧ ಗಣ್ಯರು, ನಿರ್ದೇಶಕರು, ಪಂಚಾಯಿತಿ ಸದಸ್ಯರು, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.