ಸಾಯಿಬ್ರಕಟ್ಟೆ(ಬ್ರಹ್ಮಾವರ): ಯಡ್ತಾಡಿ ಪರಿಸರದಲ್ಲಿ ಭಾನುವಾರ ತಿನಿಸುಗಳ ಪರಿಮಳ ಎಲ್ಲೆಲ್ಲೂ ಹರಡಿತ್ತು. ಮಕ್ಕಳಿಗೆ ಹೊಸ ತಿಂಡಿ ರುಚಿಯ ಸಂಭ್ರಮ, ಹಿರಿಯರಿಗೆ ಹಳೆ ಕಾಲದಲ್ಲಿ ತಾವು ತಿನ್ನುತ್ತಿದ್ದ ತಿಂಡಿಗಳ ನೆನಪು. ಈ ಸಂಭ್ರಮ ಕಂಡು ಬಂದಿದ್ದು ಯುವವಾಹಿನಿ ಯಡ್ತಾಡಿ ಘಟಕದ ‘ಆಸಾಡಿಯಂಗ್ ಒಂದ್ ದಿನ ಹಳಿ ಹಂಬ್ಲ್’ ಎನ್ನುವ ಕಾರ್ಯಕ್ರಮದಲ್ಲಿ.
ಹಿರಿಯರು ಕೂಡಿ ಆಚರಿಸುತ್ತಿದ್ದ ರೀತಿ–ರಿವಾಜು, ಸಂಸ್ಕೃತಿಯನ್ನು ಯುವಜನರಿಗೆ ತಿಳಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
64 ಖಾದ್ಯಗಳು: ಯುವ ವಾಹಿನಿ ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದ ಒಟ್ಟು 64 ತಿನಿಸುಗಳು ಗಮನ ಸೆಳೆದವು. ದಾಸನ್ ಸಪ್ಪಿನ್ ಹಿಟ್, ಪತ್ರೋಡಿ, ಹೊರಳಿ ಬಜ್ಜಿ, ಕ್ಯಾನಿಗೆಂಡಿ ಹಿಟ್, ನುಗ್ಗಿ ಸೊಪ್ಪಿನ್ ಒಗ್ರಣಿ, ಬಾಳಿ ದಿಂಡಿನ್ ಪಲ್ಯ, ಶುಂಠಿ ಉಂಡಿ, ಮಳಿ ಪಲ್ಯ, ಗೆಣ್ಗ ಒಗ್ಗರಿಸಿದ್, ಮೆತ್ತಿ ಗಂಜಿಹೊರಳಿ ಸಾರ್ ಹೀಗೆ ವಿವಿಧ ಬಗೆಯ ಚಟ್ನಿ, ಪಲ್ಯ, ಸಾರು, ಪಾಯಸ, ವಿವಿಧ ಕಷಾಯಗಳು ಅಲ್ಲಿದ್ದವು. ಮಹಿಳೆಯರು ಮತ್ತು ಮಕ್ಕಳಿಗೆ ಹಳ್ಳಿಯ ಆಟೋಟಗಳನ್ನು ಏರ್ಪಡಿಸಲಾಗಿತ್ತು.
ಉದ್ಘಾಟನೆ: ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಎಲ್ಲರೂ ಪ್ರೋತ್ಸಾಹ ಮಾಡಬೇಕು. ಅವರಲ್ಲಿರುವ ಪ್ರತಿಭೆ ಮುಖ್ಯವಾಹಿನಿಗೆ ಬರಬೇಕು. ಒಗ್ಗಟ್ಟು ಸಂಘಟನೆಯ ಮೂಲ ಧ್ಯೇಯವಾಗಬೇಕು. ಎಂದು ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಬಾಬು ಶಿವ ಪೂಜಾರಿ ಹೇಳಿದರು.
ಯುವವಾಹಿನಿ ಘಟಕದ ಅಧ್ಯಕ್ಷ ರಾಜು ಪೂಜಾರಿ, ಸಾಹಿತಿ ಶಿಕ್ಷಕ ನರೇಂದ್ರ ಕುಮಾರ್ ಕೋಟ, ಕನ್ನಡ ಸಾಹಿತ್ಯ ಪರಿಷತ್ ಕೋಟ ಹೋಬಳಿಯ ಅಧ್ಯಕ್ಷ ಸತೀಶ್ ವಡ್ಡರ್ಸೆ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಿತೇಶ್ ಕುಮಾರ್ ಕಟಪಾಡಿ ಪೂಜಾರಿ, ಶಿಕ್ಷಕ ಅಲ್ತಾರು ನಾಗರಾಜ, ಸ್ವಾಗತ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಎನ್. ಪೂಜಾರಿ, ಬಾರ್ಕೂರು ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಜಯನಂದ ಎಂ ಪೂಜಾರಿ, ಘಟಕದ ಕಾರ್ಯದರ್ಶಿ ಅಜಿತ್ ಕುಮಾರ್, ಮಾಜಿ ಅಧ್ಯಕ್ಷ ಅಣ್ಣಪ್ಪ ಪೂಜಾರಿ, ಪ್ರತಿಮಾ ರಮೇಶ್ ಪೂಜಾರಿ, ಅನುಷಾ ಯಡ್ತಾಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.