ADVERTISEMENT

22ರಂದು ಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ

2,500 ಮಂದಿ ವಿಪ್ರರು ಭಾಗಿ; ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 5:27 IST
Last Updated 20 ಸೆಪ್ಟೆಂಬರ್ 2019, 5:27 IST
ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಗುರುವಾರ ಕೃಷ್ಣಮಠದಲ್ಲಿ ಸುದ್ದಿಗೋಷ್ಠಿ ನಡೆಸಿದರು.
ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಗುರುವಾರ ಕೃಷ್ಣಮಠದಲ್ಲಿ ಸುದ್ದಿಗೋಷ್ಠಿ ನಡೆಸಿದರು.   

ಉಡುಪಿ: ಲೋಕ ಕಲ್ಯಾಣಾರ್ಥವಾಗಿ ಸೆ.22ರಂದು ಬೆಳಿಗ್ಗೆ 7ರಿಂದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಶ್ರೀಕೃಷ್ಣನಿಗೆ ಕೋಟಿ ತುಳಸಿ ಅರ್ಚನೆ ನಡೆಯಲಿದೆ ಎಂದು ಪಲಿಮಾರು ಪರ್ಯಾಯ ಮಠದ ವಿದ್ಯಾಧೀಶ ಶ್ರೀಗಳು ತಿಳಿಸಿದರು.

ಗುರುವಾರ ಮಠದಲ್ಲಿ ಸುದ್ದಿಗೋಷ್ಠಿ ನಡೆಸಿದ ಸ್ವಾಮೀಜಿ, ಕೋಟಿ ತುಳಸಿ ಅರ್ಚನೆಗೆ 2,500 ಮಂದಿ ಪಾಲ್ಗೊಳ್ಳಲಿದ್ದು, ತಲಾ ಸಾವಿರ ಬಾರಿ ದೇವರ ನಾಮಗಳನ್ನು ನಾಲ್ಕು ಹಂತಗಳಲ್ಲಿ ಜಪಿಸಲಿದ್ದಾರೆ. ಪ್ರತಿಬಾರಿ ನಾಮಾವಳಿ ನಡೆದಾಗಲೂ ಸ್ವಾಮೀಜಿಗಳು ತುಳಸಿ ದಳವನ್ನು ದೇವರಿಗೆ ಅರ್ಪಿಸಲಿದ್ದಾರೆ ಎಂದು ಶ್ರೀಗಳು ವಿವರ ನೀಡಿದರು.

ಪೇಜಾವರ ಮಠದ ವಿಶ್ವೇಶತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು, ಅದಮಾರು ಮಠದ ವಿಶ್ವಪ್ರಿಯ ತೀರ್ಥರು, ಪೇಜಾವರ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು, ಸೋದೆ ಮಠದ ವಿದ್ಯಾವಲ್ಲಭ ತೀರ್ಥರು, ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ತೀರ್ಥರು ಕೋಟಿ ತುಳಸಿ ಅರ್ಚನೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

ADVERTISEMENT

ಬೆಳಿಗ್ಗೆ 7.30ಕ್ಕೆ ಆರಂಭವಾಗಿ 8.15ಕ್ಕೆ ಮೊದಲ ಹಂತ, 8.15ರಿಂದ 9ರವರೆಗೆ 2ನೇ ಹಂತ, ಬಳಿಕ ಅರ್ಧತಾಸು ವಿಶ್ರಾಂತಿ, 9.30ರಿಂದ 10.15ರವರೆಗೆ ಮೂರನೇ ಹಂತ, 10.15ರಿಂದ 11ರವರೆಗೆ 4ನೇ ಹಂತದ ತುಳಸಿ ಅರ್ಚನೆ ನಡೆಯಲಿದೆ. ನಂತರ ಮಹಾಮಂಗಳಾರತಿ, ಸಂದೇಶ ಕಾರ್ಯಕ್ರಮಗಳು ಇರಲಿವೆ ಎಂದರು.

ಈಗಾಗಲೇ ತುಳಸಿ ದಳಗಳ ಸಂಗ್ರಹಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರಾಕೃತಿಕ ವಿಕೋಪಗಳು ಎದುರಾಗದಿರಲಿ, ಅತಿವೃಷ್ಟಿಯಿಂದ ಸಮಸ್ಯೆಗೆ ಸಿಲುಕಿದವರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಕೋಟಿ ತುಳಸಿ ಅರ್ಚನೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.