ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲದಲ್ಲಿ ಸರ್ವಿಸ್ ರಸ್ತೆಯ ಅಪೂರ್ಣ ಕಾಮಗಾರಿಯಿಂದ ಬುಧವಾರ ಬೆಳಗ್ಗೆಯಿಂದ ಸುರಿದ ಭಾರೀ ಮಳೆಗೆ ಕೃತಕ ನೆರೆ ಉಂಟಾಗಿ ಸಮೀಪದ ಮನೆಯವರು ಸಮಸ್ಯೆ ಎದುರಿಸಿದರು.
ಉಚ್ಚಿಲ ಪೆಟ್ರೋಲ್ ಬಂಕ್ನಿಂದ ಪೋಸ್ಟ್ ಆಫೀಸ್ವರೆಗೆ ಎರಡು ಕಿಲೋಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಾಣ ಆಗುತ್ತಿದೆ. ಕಳೆದ ಒಂದು ವರ್ಷದಿಂದ ಕಾಮಗಾರಿ ನಡೆಯುತ್ತಿದ್ದು ರಸ್ತೆ ಪೂರ್ಣಗೊಂಡಿಲ್ಲ. ಗುತ್ತಿಗೆದಾರರು ಹೆದ್ದಾರಿಯ ಇಕ್ಕೆಲಗಳಲ್ಲಿ ಅಗೆದಿದ್ದು, ಮಳೆ ನೀರು ಸಾಗುವ ಹಾದಿಯನ್ನು ಮುಚ್ಚಿದ್ದಾರೆ. ಇದರಿಂದ ಹೆದ್ದಾರಿ ಪಕ್ಕದ ನಿವಾಸಿ ಪ್ರಕಾಶ್ ದೇವಾಡಿಗ ಅವರ ಮನೆಗೆ ಮಳೆ ನೀರು ನುಗ್ಗಿದೆ.
ಕಾಮಗಾರಿ ಪೂರ್ಣಗೊಳಿಸದ ಕಾರಣ ಹೆದ್ದಾರಿ ಪಕ್ಕದಲ್ಲಿ ಸಂಚರಿಸುವವರಿಗೆ ಅಪಾಯ ಕಾದಿದೆ. ಈ ಬಗ್ಗೆ ಹೆದ್ದಾರಿ ಇಲಾಖೆಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದು, ತುರ್ತಾಗಿ ಜೆಸಿಬಿ ಮೂಲಕ ರಸ್ತೆ ನಿರ್ಮಿಸಿ ನೀರು ಹೋಗುವಂತೆ ಮಾಡುವ ವ್ಯವಸ್ಥೆ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಪಡುಬಿದ್ರಿಯಲ್ಲಿ ಸರ್ವಿಸ್ ರಸ್ತೆಯಲ್ಲಿ ನೀರು: ಪಡುಬಿದ್ರಿ ಪೇಟೆಯ ಸರ್ವಿಸ್ ರಸ್ತೆಯಲ್ಲಿಯೇ ಮಳೆ ನೀರು ಹರಿಯುವುದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸಿದರು.
ಇಲ್ಲಿನ ಪೇಟೆಯಿಂದ ಕೆಳಗಿನ ಪೇಟೆಯವರೆಗೆ ಇರುವ ರಸ್ತೆಯ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ವೇಳೆ ಚರಂಡಿ ನಿರ್ಮಿಸಿದರು. ಆದರೂ ಚರಂಡಿಯಲ್ಲಿ ನೀರು ಹೋಗಲು ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿಯೇ ಮಳೆ ನೀರು ಹೋಗುವಂತಾಯಿತು. ಇದರಿಂದ ಸಾರ್ವಜನಿಕರು ನಡೆದಾಡಲು ಹರಸಾಹಸ ಪಡಬೇಕಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.