
ಉಡುಪಿ: ಬೀಚ್ ಮತ್ತು ದೇಗುಲ ಪ್ರವಾಸೋದ್ಯಮ ಪ್ರಮುಖವಾಗಿರುವ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಇದೀಗ ಹೊಸದಾಗಿ 22 ಪ್ರವಾಸಿ ತಾಣಗಳು ಪ್ರವಾಸೋದ್ಯಮ ಇಲಾಖೆಗೆ ಸೇರ್ಪಡೆಯಾಗಿವೆ.
ಹೊಸ ಪ್ರವಾಸಿ ತಾಣಗಳ ಕುರಿತು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಸರ್ಕಾರವು ಅವುಗಳಿಗೆ ಅನುಮೋದನೆ ನೀಡಿದೆ. ಈ ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅಧೀನದಲ್ಲಿ ಬರುವ ಪ್ರವಾಸಿ ತಾಣಗಳ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.
ಪ್ರತಿ ವರ್ಷ ಮಳೆಗಾಲ ಕಳೆದ ಕೂಡಲೇ ದೇಶದ ವಿವಿಧೆಡೆಗಳಿಂದ ಪ್ರವಾಸಿಗರ ದಂಡು ಜಿಲ್ಲೆಯ ಬೀಚ್ಗಳಿಗೆ ದಾಂಗುಡಿ ಇಡುತ್ತವೆ. ದಸರಾ, ದೀಪಾವಳಿ ರಜೆಯ ಸಂದರ್ಭದಲ್ಲಿ ಇಲ್ಲಿನ ಬಹುತೇಕ ಬೀಚ್ಗಳಿಗೆ ಪ್ರತಿದಿನ ಸಾವಿರಾರು ಮಂದಿ ಭೇಟಿ ನೀಡಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ ಜನರು ಇಲ್ಲಿನ ಪ್ರಮುಖ ದೇವಾಲಯಗಳಾದ ಶ್ರೀ ಕೃಷ್ಣ ಮಠ, ಕೊಲ್ಲೂರು ಮೊದಲಾದ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೀಗೆ ಬೇಟಿ ನೀಡುವ ಪ್ರವಾಸಿಗರು ಊರಿಗೆ ಮರಳುವುದಕ್ಕೂ ಮುನ್ನ ಕಡಲತಡಿಯ ಸೌಂದರ್ಯ ಸವಿದೇ ಮರಳುತ್ತಾರೆ.
ಮಲ್ಪೆ ಬೀಚ್ನಲ್ಲಿ ಜಲ ಕ್ರೀಡೆ ಇರುವುದರಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಇದೀಗ ಪ್ರವಾಸಿ ತಾಣಗಳ ಸಂಖ್ಯೆ ಜಾಸ್ತಿಯಾಗಿರುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಜಿಲ್ಲೆಗೆ ಸೆಳೆಯುವ ಗುರಿಯನ್ನು ಪ್ರವಾಸೋದ್ಯಮ ಇಲಾಖೆ ಹೊಂದಿದೆ.
ದರಿಯಾ ಬಹದ್ದೂರಗಡ ದ್ವೀಪ, ಅಜ್ಜರಕಾಡು ಭುಜಂಗ ಪಾರ್ಕ್ (ರೇಡಿಯೊ ಪಾರ್ಕ್), ಕಡಿಯಾಳಿ ಮಹಿಷ ಮರ್ದಿನಿ ದೇವಸ್ಥಾನ, ಜಾಮಿಯಾ ಮಸೀದಿ, ಆಸರೆ ಬೀಚ್ (ಕದಿಕೆ ಬೀಚ್) ಇವುಗಳು ಉಡುಪಿ ತಾಲ್ಲೂಕು ವ್ಯಾಪ್ತಿಯಲ್ಲಿ ಗುರುತಿರುವ ಹೊಸ ಪ್ರವಾಸಿ ತಾಣಗಳಾಗಿವೆ.
ಸಾಲಿಗ್ರಾಮ ಬ್ಯಾಕ್ ವಾಟರ್ ಮ್ಯಾಂಗ್ರೋವ್ಸ್, ಕೋಡಿಕನ್ಯಾನ ಬೀಚ್, ಎಸ್.ಎಚ್. ಆರ್. ಎಫ್ ಯೋಗಬನದ ಅತಿ ಎತ್ತರದ ಸ್ವಾಮಿ ವಿವೇಕಾನಂದ ಮೂರ್ತಿ, ಕೋಟ ಅಮೃತೇಶ್ವರಿ ದೇವಸ್ಥಾನ ಇವುಗಳು ಬ್ರಹ್ಮಾವರ ತಾಲ್ಲೂಕಿನ ಹೊಸ ಪ್ರವಾಸಿ ತಾಣಗಳಾದರೆ, ಕಾಪು ಮಾರಿಗುಡಿ ದೇವಸ್ಥಾನ, ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನ, ಕುಂಜಾರುಗಿರಿ ಶ್ರೀ ದುರ್ಗಾದೇವಿ ದೇವಸ್ಥಾನ ಮತ್ತು ರಾಕ್ ದ್ವೀಪವು ಕಾಪು ತಾಲ್ಲೂಕಿನಲ್ಲಿ ಗುರುತಿಸಿರುವ ಹೊಸ ತಾಣಗಳಾಗಿವೆ.
ಕಾರ್ಕಳ ತಾಲ್ಲೂಕಿನ ಅತ್ತೂರು ಸಂತ ಲಾರೆನ್ಸ್ ಚರ್ಚ್, ಕಾರ್ಕಳ ಅನಂತಶಯನ ದೇವಸ್ಥಾನ, ಬೈಂದೂರು ತಾಲ್ಲೂಕಿನ ಕ್ಷಿತಿಜ ನೇಸರ ಧಾಮ, ಹೆಬ್ರಿ ತಾಲ್ಲೂಕು ವ್ಯಾಪ್ತಿಯ ವರಂಗ ಕೆರೆ ಬಸದಿ, ಕಬ್ಬಿನಾಲೆಯ ಮತ್ತಾವು ಜಲಪಾತ ಹಾಗೂ ಕುಂದಾಪುರ ತಾಲ್ಲೂಕಿನ ಕೊಡಿ ಕುಂದಾಪುರ ಬೀಚ್, ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡ ವಿನಾಯಕ ದೇವಸ್ಥಾನ, ಪ್ರಸನ್ನ ಆಂಜನೇಯ ದೇವಸ್ಥಾನಗಳು ಹೊಸ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಮಲ್ಪೆ ಬೀಚ್ ಸೇರಿದಂತೆ ವಿವಿಧ ಪ್ರವಾಸಿ ತಾಣಗಳಲ್ಲಿ ನಿರ್ವಹಣೆ ಕೊರತೆ ಇದೆ. ಅದನ್ನು ಸರಿಪಡಿಸಬೇಕು. ಮಲ್ಪೆ ಬೀಚ್ನಲ್ಲಿ ಸ್ವಚ್ಛತೆ ಹಾಗೂ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕುನಿತ್ಯಾನಂದ ಒಳಕಾಡು ಸಾಮಾಜಿಕ ಕಾರ್ಯಕರ್ತ
‘ಇನ್ನಷ್ಟೇ ಅಭಿವೃದ್ಧಿಯಾಗಬೇಕಿದೆ’ ‘
ಹೊಸದಾಗಿ ಗುರುತಿಸುವ ಕೆಲವು ಪ್ರವಾಸಿ ತಾಣಗಳಲ್ಲಿ ಇನ್ನಷ್ಟೇ ಅಭಿವೃದ್ಧಿ ಕಾರ್ಯಗಳು ನಡೆಯಬೇಕಿವೆ. ಅದಕ್ಕಾಗಿ ಕ್ರಮ ವಹಿಸಲಾಗುವುದು’ ಎಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕಿ ವಿಂಧ್ಯಾ ಎನ್.ಎಂ. ತಿಳಿಸಿದರು ‘ಈ ಬಾರಿ ನಿರಂತರ ಮಳೆಯ ಪರಿಣಾಮವಾಗಿ ವಿಳಂಬವಾಗಿದ್ದ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳು ಮಲ್ಪೆ ಬೀಚ್ನಲ್ಲಿ ಮತ್ತೆ ಆರಂಭವಾಗಿದೆ. ಪ್ರವಾಸಿಗರ ಸುರಕ್ಷತೆಗಾಗಿ ಹೆಚ್ಚುವರಿ ಜೀವ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.