ಉಡುಪಿ: ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ಗೆ ನಾಮ ನಿರ್ದೇಶನ ಮಾಡಿರುವುದು ವೈಯಕ್ತಿಕವಾಗಿ ಸಂತಸವಾಗಿದೆ. ರಾಮಮಂದಿರ ಸ್ಥಾಪನೆ ವಿಚಾರವಾಗಿ ವಿಶ್ವೇಶತೀರ್ಥರ ಹೋರಾಟಕ್ಕೆ ಸಂದ ಗೌರವ ಇದಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟರು.
ಪೇಜಾವರ ಮಠದಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,ದಕ್ಷಿಣ ಭಾರತದಿಂದ ಟ್ರಸ್ಟ್ಗೆ ಆಯ್ಕೆಯಾದ ಏಕೈಕ ಸಂತ ಎಂಬುದು ಹೆಮ್ಮೆಯ ವಿಚಾರ. ಬಹುದೊಡ್ಡ ಜವಾಬ್ದಾರಿ ಹೆಗಲೇರಿದ್ದು, ಭಕ್ತರ ಸಹಕಾರದಿಂದ ನಿಭಾಯಿಸುತ್ತೇನೆ ಎಂದರು.
ನೇಮಕಾತಿ ಪತ್ರಕ್ಕೆ ಪ್ರತಿಯಾಗಿ ಸ್ವೀಕೃತಿ ಪತ್ರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಳಿಕ ಟ್ರಸ್ಟ್ ಅಧಿಕೃತವಾಗಿ ಅಸ್ತಿತ್ವಕ್ಕೆ ಬರಲಿದ್ದು, ಮುಂದಿನ ಸಭೆಗಳಲ್ಲಿ ರಾಮಮಂದಿರ ನಿರ್ಮಾಣದ ಕಾರ್ಯಯೋಜನೆಯ ಕುರಿತು ಚರ್ಚೆಗಳು ನಡೆಯಲಿವೆ ಎಂದರು.
‘ಹಿಂದೆ, ವಿಶ್ವಹಿಂದೂ ಪರಿಷತ್ನ ಸಭೆಯಲ್ಲಿ ಟ್ರಸ್ಟ್ ರಚನೆ ವಿಚಾರವಾಗಿ ಚರ್ಚೆ ನಡೆದು ವಿಶ್ವೇಶ ಶ್ರೀಗಳ ಹೆಸರು ಸೂಚಿತವಾಗಿತ್ತು. ಆದರೆ, ಹಿರಿಯ ಶ್ರೀಗಳು ವಯಸ್ಸಿನ ಕಾರಣ ನೀಡಿ, ಸ್ಥಾನವನ್ನು ನನಗೆ ಬಿಟ್ಟುಕೊಟ್ಟಿದ್ದರು. ಈಗ ಅಧಿಕೃತ ಆದೇಶ ಹೊರಬಿದ್ದಿದೆ’ ಎಂದು ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ರಾಮಮಂದಿರ ನಿರ್ಮಾಣ ವಿಚಾರವಾಗಿ ಉತ್ತರ ಭಾರತದಲ್ಲಿ ನಡೆದ ಸಭೆಗಳಲ್ಲಿ ಹಿರಿಯ ಗುರುಗಳ ಜತೆ ಭಾಗಿಯಾಗಿದ್ದೇನೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಬೇಕು, ಯಾತ್ರಾತ್ರಿಗಳಿಗೆ ವಾಸ್ತವ್ಯ ಸೇರಿದಂತೆ ಅಗತ್ಯ ಅನುಕೂಲಗಳಿರಬೇಕು ಎಂಬ ಅಭಿಪ್ರಾಯಗಳಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.