ADVERTISEMENT

ಉಡುಪಿ: ವಿಟ್ಲಪಿಂಡಿ ಉತ್ಸವ ಸಂಪನ್ನ; ಕೃಷ್ಣನ ಸ್ಮರಣೆ

ಸುವರ್ಣ ರಥದಲ್ಲಿ ಕೃಷ್ಣನ ಮೃಣ್ಮಯ ಮೂರ್ತಿಯ ಮೆರವಣಿಗೆ: ಮಧ್ವ ಸರೋವರದಲ್ಲಿ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 16:43 IST
Last Updated 31 ಆಗಸ್ಟ್ 2021, 16:43 IST
ಕೃಷ್ಣಮಠದ ರಥಬೀದಿಯಲ್ಲಿ ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಿತು
ಕೃಷ್ಣಮಠದ ರಥಬೀದಿಯಲ್ಲಿ ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಿತು   

ಉಡುಪಿ: ಪ್ರತಿವರ್ಷ ಕಿಕ್ಕಿರಿದು ತುಂಬಿರುತ್ತಿದ್ದ ಭಕ್ತರ ಮಧ್ಯೆ ನಡೆಯುತ್ತಿದ್ದ ವಿಟ್ಲಪಿಂಡಿ ಉತ್ಸವ ಈ ವರ್ಷ ಕೋವಿಡ್‌ನಿಂದಾಗಿ ಸೀಮಿತ ಸಂಖ್ಯೆಯ ಭಕ್ತರು, ಮಠದ ಸಿಬ್ಬಂದಿ ಹಾಗೂ ಪೊಲೀಸ್ ಸರ್ಪಗಾವಲಿನಲ್ಲಿ ನಡೆಯಿತು. ಕಾಲಿಡಲು ಜಾಗ ಇಲ್ಲದಷ್ಟು ಭರ್ತಿಯಾಗಿರುತ್ತಿದ್ದ ರಥಬೀದಿಯಲ್ಲಿ ಹೆಚ್ಚು ಜನಸಂದಣಿ ಕಂಡುಬರಲಿಲ್ಲ. ಸಂಪ್ರದಾಯದಂತೆ ಧಾರ್ಮಿಕ ಆಚರಣೆಗಳು ನಡೆದವು.

ಮಧ್ಯಾಹ್ನ ಕೃಷ್ಣಮಠದಲ್ಲಿ ದೇವರಿಗೆ ಮಹಾಪೂಜೆ ನೆರವೇರಿಸಿದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಕೃಷ್ಣನ ಮೃಣ್ಮಯ ಮೂರ್ತಿಯನ್ನು ರಥಬೀದಿಗೆ ತಂದು ಸುವರ್ಣ ರಥದಲ್ಲಿ ಪ್ರತಿಷ್ಠಾಪಿಸಿದರು. ಚಿನ್ನದ ರಥದಲ್ಲಿ ಕಂಗೊಳಿಸುತ್ತಿದ್ದ ಕೃಷ್ಣನಿಗೆ ಶ್ರೀಗಳು ಪೂಜೆ ಸಲ್ಲಿಸಿ, ಮಹಾ ಮಂಗಳಾರತಿ ಮಾಡಿ ಸುವರ್ಣ ರಥೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಭಕ್ತರ ಜಯಘೋಷ ಮುಗಿಲು ಮುಟ್ಟಿತು.

ಮತ್ತೊಂದೆಡೆ, ಕನಕ ನವರತ್ನ ರಥದಲ್ಲಿ ಚಂದ್ರಮೌಳೀಶ್ವರ ಹಾಗೂ ಅನಂತೇಶ್ವರ ದೇವರನ್ನು ಪ್ರತಿಷ್ಠಾಪಿಸಲಾಗಿತ್ತು. ಎರಡೂ ರಥಗಳನ್ನು ಭಕ್ತರು ರಥಬೀದಿಯಲ್ಲಿ ಒಂದು ಸುತ್ತು ಮೆರವಣಿಗೆ ಹಾಕಿಸಿದರು. ಮೆರವಣಿಗೆ ಸಾಗುವ ದಾರಿಯುದ್ದಕ್ಕೂ ಕೃಷ್ಣನ ಸ್ಮರಣೆ ನಡೆಯಿತು.

ADVERTISEMENT

ರಥಬೀದಿಯಲ್ಲಿ ಅರ್ಧ ದೂರ ಕ್ರಮಿಸುತ್ತಿದ್ದಂತೆ ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯ ತೀರ್ಥರು, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು,ಪಲಿಮಾರು ಮಠದ ವಿದ್ಯಾಧೀಶ ತೀರ್ಥರು, ವಿದ್ಯಾರಾಜೇಶ್ವರ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥರು ಭಕ್ತರತ್ತ ಚಕ್ಕುಲಿ, ಉಂಡೆಗಳನ್ನು ತೂರಿದರು. ದೇವರ ಪ್ರಸಾದವನ್ನು ಪಡೆಯಲು ಭಕ್ತರು ಮುಗಿಬಿದ್ದ ದೃಶ್ಯ ಕಂಡುಬಂತು.

ಮೊಸರು ಕುಡಿಕೆ ಒಡೆದ ಗೊಲ್ಲರು:ಕೃಷ್ಣನ ಲೀಲೋತ್ಸವಗಳಲ್ಲಿ ಪ್ರಮುಖ ಆಕರ್ಷಣೆಯಾದ ಮೊಸರು ಕುಡಿಕೆ ಒಡೆಯುವ ಆಚರಣೆ ಗಮನ ಸೆಳೆಯಿತು. ಕೃಷ್ಣಮಠದ ಗೋಶಾಲೆಯಲ್ಲಿರುವ ಗೊಲ್ಲರು ರಥಬೀದಿಯ 14 ಕಡೆಗಳಲ್ಲಿ ಕಟ್ಟಿದ್ದ ಮೊಸರು, ಕುಂಕುಮ ಹಾಗೂ ಹರಳಿನ ಕುಡಿಕೆಗಳನ್ನು ಒಡೆದರು. ಮೈತುಂಬ ಬಣ್ಣ ಬಳಿದುಕೊಂಡು, ತಲೆಗೆ ಹುಲ್ಲಿನ ಟೊಪ್ಪಿ ಧರಿಸಿ, ಕೈಲಿ ಉದ್ದನೆಯ ಕೋಲು ಹಿಡಿದಿದ್ದ ಗೊಲ್ಲರು ಮೊಸರಿನ ಮಡಕೆ ಒಡೆಯಲು ಮುಗಿಬೀಳುತ್ತಿದ್ದ ದೃಶ್ಯ ಕಣ್ಮನ ಸೆಳೆಯಿತು. ಮೊಸರಿನ ಕುಡಿಕೆ ಒಡೆಯುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಹೆಚ್ಚಾಗುತ್ತಿತ್ತು.

ರಥೋತ್ಸವ ರಥಬೀದಿಯಲ್ಲಿ ಒಂದು ಸುತ್ತು ಪೂರ್ಣಗೊಂಡು ಮರಳಿ ಕೃಷ್ಣನ ಮುಖ್ಯ ಪ್ರವೇಶದ್ವಾರದ ಬಳಿ ಬಂದಾಗ, ಸುವರ್ಣ ರಥದಲ್ಲಿದ್ದ ಮೃಣ್ಮಯ ಮೂರ್ತಿಯನ್ನು ರಥದಿಂದ ಇಳಿಸಿದ ಅದಮಾರು ಶ್ರೀಗಳು ಮಧ್ವಸರೋವರದಲ್ಲಿ ವಿಸರ್ಜಿಸಿದರು. ಶ್ರೀಗಳು ಹಾಗೂ ಭಕ್ತರು ಮಧ್ವಸರೋವರದಲ್ಲಿ ಮಿಂದೆದ್ದರು. ಈ ಮೂಲಕ ಸರಳ ವಿಟ್ಲಪಿಂಡಿ ಉತ್ಸವ ಸಂಪನ್ನವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.