ADVERTISEMENT

ನೀರಿನ ಸಮಸ್ಯೆ: ಸದಸ್ಯರ ಆಕ್ರೋಶ

ನಗರಸಭೆ ಸಾಮಾನ್ಯ ಸಭೆಯಲ್ಲಿ ಬೀದಿ ದೀಪ, ಕೊಳಚೆ ನೀರಿನ ಸಮಸ್ಯೆ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2025, 4:03 IST
Last Updated 29 ಅಕ್ಟೋಬರ್ 2025, 4:03 IST
ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು
ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿದರು   

ಉಡುಪಿ: ನಗರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ನಿರ್ವಹಣೆಯನ್ನು ವಾರಾಹಿ ಯೋಜನೆಯ ಅಧೀನದ ಸುಯೇಜ್‌ ಪ್ರಾಜೆಕ್ಟ್ ಸಂಸ್ಥೆಗೆ ಪ್ರಾಯೋಗಿಕವಾಗಿ ಹಸ್ತಾಂತರಿಸಿದ ಬಳಿಕ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ ಎಂದು ನಗರಸಭೆಯ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ನೀರಿನ ಬವಣೆಯನ್ನು ತೆರೆದಿಟ್ಟರು. ನೀರು ನಿರ್ವಹಣೆಯ ಜವಾಬ್ದಾರಿಯನ್ನು ಮತ್ತೆ ನಗರಸಭೆಯೇ ನಿರ್ವಹಿಸಬೇಕು ಎಂದು ಒತ್ತಾಯಿಸಿದರು.

ಸದಸ್ಯೆ ಸುಮಿತ್ರಾ ನಾಯಕ್‌ ಮಾತನಾಡಿ, ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾದ ಕಾರಣ ಟ್ಯಾಂಕರ್‌ ನೀರು ತರಿಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಸುಯೇಜ್‌ ಸಂಸ್ಥೆಗೆ ಹಸ್ತಾಂತರಿಸಿದ ಬಳಿಕ ನೀರಿನ ಪೂರೈಕೆಯಲ್ಲಿ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿದೆ ಎಂದರು.

ADVERTISEMENT

ನಗರಸಭೆಯ ವಿರೋಧ ಪಕ್ಷದ ನಾಯಕ ರಮೇಶ್‌ ಕಾಂಚನ್‌ ಮಾತನಾಡಿ, ನೀರು ನಿರ್ವಹಣೆಯನ್ನು ವಾರಾಹಿಯವರಿಗೆ ಹಸ್ತಾಂತರಿಸಿದರೂ ಜನರಿಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವುದು ನಗರಸಭೆಯ ಜವಾಬ್ದಾರಿ ಎಂದು ಹೇಳಿದರು.

ನಗರಕ್ಕೆ ನೀರು ಪೂರೈಕೆಯಾಗುವ ಬಜೆ ಅಣೆಕಟ್ಟೆಯಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ಆದರೆ, ನಿರ್ವಹಣೆ ಕೊರತೆಯಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ. ನಗರಸಭೆಯ ಅಧಿಕಾರಿಗಳು ಮತ್ತು ವಾರಾಹಿ ಯೋಜನೆಯ ಅಧಿಕಾರಿಗಳ ನಡುವೆ ಸಮನ್ವಯದ ಕೊರತೆ ಇದೆ ಎಂದರು.

ಸದಸ್ಯ ಸುಂದರ್‌ ಜೆ. ಕಲ್ಮಾಡಿ ಮಾತನಾಡಿ, ದೀಪಾವಳಿ ಹಬ್ಬದ ವೇಳೆ ಐದು ವಾರ್ಡ್‌ಗಳಿಗೆ ಕುಡಿಯುವ ನೀರು ಪೂರೈಕೆಯಾಗಿಲ್ಲ. ಹೆಚ್ಚಿನ ವಾರ್ಡ್‌ಗಳಲ್ಲಿ ಬೋರ್‌ವೆಲ್‌ಗಳು ಕೆಟ್ಟುಹೋಗಿವೆ ಎಂದರು.

ಶಾಸಕ ಯಶ್‌ಪಾಲ್‌ ಸುವರ್ಣ ಮಾತನಾಡಿ, ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ. ವಾರಾಹಿಯವರ ನೀರು ನಿರ್ವಹಣೆ ಸಂಪೂರ್ಣ ವಿಫಲವಾಗಿದೆ. ವಾರಾಹಿಯ ಯೋಜನೆಯ ಕಾಮಗಾರಿ ಪೂರ್ಣಗೊಳ್ಳದೆ ನೀರು ನಿರ್ವಹಣೆಯ ಜವಾಬ್ದಾರಿ ಹಸ್ತಾಂತರ ಆಗುವುದು ಬೇಡ ಎಂದರು.

ವಾರಾಹಿ ಯೋಜನೆಯಲ್ಲಿ ಇನ್ನೂ ಒಂದೆಡೆ ಭೂಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಜನರ ಬೇಡಿಕೆಗಳನ್ನು ಶೇ 100ರಷ್ಟು ಈಡೇರಿಸುತ್ತೇವೆ ಎಂದು ವಾರಾಹಿಯವರು ಬರೆದುಕೊಡಲಿ. ಅನಂತರ ಹಸ್ತಾಂತರ ಮಾಡುವ ಎಂದು ಹೇಳಿದರು.

ನಗರಸಭೆಯ ಪೌರಾಯುಕ್ತ ಮಹಾಂತೇಶ ಹಂಗರಗಿ, ವಾರಾಹಿ ಯೋಜನೆಯ ಅಧಿಕಾರಿಗಳ ಜೊತೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.

ನಗರದ ನೀರು ನಿರ್ವಹಣೆಯು ವಾರಾಹಿಯವರಿಗೆ ಹಸ್ತಾಂತರವಾದ ಬಳಿಕ ನಗರಸಭೆಯ ಅಧಿಕಾರಿಗಳು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಕೆಲವು ಸದಸ್ಯರು ಆರೋಪಿಸಿದರು.

ಉಡುಪಿ ನಗರದ ಕ್ಲಾಕ್‌ ಟವರ್‌ ಬಳಿ ರಾತ್ರಿ ವೇಳೆ ಬೆಂಗಳೂರಿಗೆ ಹೋಗುವ ಬಸ್‌ನವರಿಂದಾಗಿ ಜನರಿಗೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಗಮನಹರಿಸಬೇಕು ಎಂದು ರಮೇಶ್‌ ಕಾಂಚನ್‌ ತಿಳಿಸಿದರು.

ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್‌ ಉಪಸ್ಥಿತರಿದ್ದರು.

ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಸದಸ್ಯರು

‘ಬೀದಿನಾಯಿಗಳ ಹಾವಳಿ ಹೆಚ್ಚಿದೆ’

ನಗರದಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿದೆ. ಸಮಸ್ಯೆಯ ಬಗ್ಗೆ ಹಲವು ಬಾರಿ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸದಸ್ಯೆ ಅಮೃತಾ ಕೃಷ್ಣಮೂರ್ತಿ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಅಧಿಕಾರಿಗಳು ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಿ ಟೆಂಡರ್‌ ಕರೆದರೂ ಯಾರೂ ಅರ್ಜಿ ಹಾಕಿಲ್ಲ. ಶಸ್ತ್ರ ಚಿಕಿತ್ಸೆಗೆ ಸ್ಥಳ ಗುರುತಿಸಲು ಸಮಸ್ಯೆಯಾಗಿದೆ ಎಂದರು.

‘ಪ್ರವಾಸಿಗರಿಗೆ ಶೌಚಾಲಯ ಸಮಸ್ಯೆ’

ಮಲ್ಪೆ ಬೀಚ್‌ಗೆ ಸಾವಿರಾರು ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಅಲ್ಲಿ ಸಂಜೆ 6 ಗಂಟೆಗೆ ಶೌಚಾಲಯಕ್ಕೆ ಬೀಗ ಹಾಕಲಾಗುತ್ತದೆ. ಇದರಿಂದ ಪ್ರವಾಸಿಗರಿಗೆ ಸಮಸ್ಯೆಯಾಗುತ್ತಿದೆ ಎಂದು ರಮೇಶ್‌ ಕಾಂಚನ್‌ ಸಭೆಗೆ ತಿಳಿಸಿದರು. ರಾತ್ರಿ 10 ಗಂಟೆಯವರೆಗಾದರೂ ಶೌಚಾಲಯ ತೆರೆದಿರಬೇಕು. ಇಲ್ಲದಿದ್ದರೆ ಪ್ರವಾಸಿಗರಿಗೆ ತೊಂದರೆಯಾಗುತ್ತದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಬೇಕು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.