ಬ್ರಹ್ಮಾವರ: ತಾಲ್ಲೂಕಿನಾದ್ಯಾಂತ ಮಂಗಳವಾರ ಸುರಿದ ಭಾರೀ ಗಾಳಿ ಮಳೆಗೆ ಹಲವೆಡೆ ರಸ್ತೆ ಸಂಚಾರದಲ್ಲಿ ವ್ಯತ್ಯಯ, ಮನೆ ಮತ್ತು ವಿದ್ಯುತ್ ಕಂಬಗಳ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ.
ಕೇವಲ 7 ಗಂಟೆಯಲ್ಲಿ 14.5 ಸೆಂ.ಮೀ ಮಳೆಯಾಗಿದ್ದು, ಗಾಳಿಯೂ ರಭಸವಾಗಿತ್ತು. ಬ್ರಹ್ಮಾವರ– ಹೆಬ್ರಿ ರಾಜ್ಯ ಹೆದ್ದಾರಿಯ ಚಾಂತಾರಿನಲ್ಲಿ ರೈಲ್ವೇ ಸೇತುವೆ ಕೆಳಗೆ ರಸ್ತೆಯಲ್ಲಿ 2 ಅಡಿಗಿಂತಲೂ ಹೆಚ್ಚು ನೀರು ನಿಂತಿದ್ದರಿಂದ ಕೆಲಕಾಲ ವಾಹನ ಸವಾರರು ಪರದಾಡಿದರು. ಕೆಲವು ಬೈಕ್ಗಳು ನೀರಿನಲ್ಲಿಯೇ ಸಾಗಿದ್ದರಿಂದ ಹಾಳಾಗಿರುವ ಬಗ್ಗೆಯೂ ವರದಿಯಾಗಿದೆ. ಪರಿಸರದ ಕುಂಜಾಲು, ಚಾಂತಾರು, ಪೇತ್ರಿ, ಚೇರ್ಕಾಡಿ, ಆರೂರು, ಹಾವಂಜೆ ಪರಿಸರದಲ್ಲಿ ಬೀಸಿದ ಗಾಳಿಗೆ ಅನೇಕ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು 25ಕ್ಕೂ ಹೆಚ್ಚು ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿತ್ತು. ಮಳೆಯಲ್ಲೆ ಮೆಸ್ಕಾಂ ಸಿಬ್ಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಬಾರ್ಕೂರು ಹನೆಹಳ್ಳಿ ಗ್ರಾಮದ ರಂಗನಕೆರೆಯ ಬಿಲ್ಲ ಪಾಣ ಎಂಬುವರ ಮನೆಯ ಚಾವಣಿ ಹಾರಿ ಹಾನಿಯಾಗಿದೆ. ಬಟ್ಟೆ, ಅಗತ್ಯ ಸಾಮಗ್ರಿ ಮಳೆ ಪಾಲಾಗಿವೆ. ಮನೆಯಲ್ಲಿದ್ದ ವ್ಯಕ್ತಿಗೆ ಅಲ್ಪ ಸ್ವಲ್ಪ ಗಾಯವಾಗಿದೆ. ಗ್ರಾ.ಪಂ. ಕಾರ್ಯದರ್ಶಿ ಉಮೇಶ ಕಲ್ಯಾಣಪುರ, ಗ್ರಾಮ ಆಡಳಿತಾಧಿಕಾರಿ ವಿಶ್ವಾಸ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸಾಲಿಗ್ರಾಮ, ಕಾರ್ಕಡ, ಹಾವಂಜೆಯಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ. ಕೋಟ, ಸಾಸ್ತಾನದಲ್ಲಿ ಮಳೆ ಅರ್ಭಟ ಜೋರಿತ್ತು.
ಸೂಚನೆ:
ಬ್ರಹ್ಮಾವರ ಕೃಷಿ ಕೇಂದ್ರದ ಜಿಲ್ಲಾ ಕೃಷಿ ಹವಾಮಾನ ಘಟಕದ ತಾಂತ್ರಿಕ ಅಧಿಕಾರಿ ಪ್ರವೀಣ್ ಕೆ.ಎಂ. ಸೂಚನೆಯಂತೆ ಜಿಲ್ಲೆಯಲ್ಲಿ ಬುಧವಾರ ರೆಡ್ ಅಲರ್ಟ್, ಗುರುವಾರ ಆರೆಂಜ್ ಅಲರ್ಟ್ ಇದ್ದು ಭಾರಿ ಮಳೆಯೊಂದಿಗೆ 15 ಕಿ.ಮೀ.– 30 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಕೃಷಿಕರು ಕೃಷಿಗೆ ಗೊಬ್ಬರ, ರಾಸಾಯನಿಕ ಸಿಂಪರಣೆಯನ್ನು ನಾಲ್ಕೈದು ದಿನದ ಬಳಿಕ ಮಾಡಿದರೆ ಉತ್ತಮ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.