ಬ್ರಹ್ಮಾವರ: ‘ಯಕ್ಷಗಾನ ಕಲಾವಿದರನ್ನು ಗುರುತಿಸುವ ಮತ್ತು ಅವರ ನೋವಿಗೆ ಸ್ಪಂದಿಸುತ್ತಿರುವ ಯಕ್ಷಧ್ರುವ ಪಟ್ಲ ಫೌಂಡೇಷನ್ ಸರ್ಕಾರ ಮಾಡುವ ಕೆಲಸಕ್ಕೆ ಸಹಕಾರಿಯಾಗಿದೆ’ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬ್ರಹ್ಮಾವರ ಬಂಟರ ಭವನದಲ್ಲಿ ಮಂಗಳವಾರ ಯಕ್ಷಧ್ರುವ ಪಟ್ಲ ಫೌಂಡೇಷನ್ ವತಿಯಿಂದ ಯಕ್ಷಗಾನ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೋವಿಡ್ನಿಂದಾಗಿ ಜೀವನದಲ್ಲಿ ಪಾಠ ಕಲಿತ್ತಿದ್ದು, ಆರ್ಥಿಕ ಸ್ಥಿತಿ ಕುಗ್ಗಿದೆ. ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿರುವ ಯಕ್ಷಗಾನ ಮೇಳಗಳ ಕಲಾವಿದರಿಗೆ ಪೂರ್ಣ ಸಂಬಳ ನೀಡಲು ಈಗಾಗಲೇ ಆದೇಶ ನೀಡಲಾಗಿದೆ. ಇದೇ ರೀತಿ ಇತರೆ ಮೇಳಗಳಲ್ಲಿರುವ ಕಲಾವಿದರಿಗೂ ಮುಂದಿನ ದಿನಗಳಲ್ಲಿ ಸಂಬಳ ನೀಡುವ ಬಗ್ಗೆ ಚಿಂತನೆ ಮಾಡಲಾಗುವುದು. ಹರಕೆ ಆಟಗಳನ್ನು ಮಳೆಗಾಲದಲ್ಲಿ ಮಾಡುವ ಬಗ್ಗೆಯೂ ಚಿಂತಿಸಲಾಗುವುದು ಎಂದು ಹೇಳಿದರು.
ಬಡಗುತಿಟ್ಟಿನ 100 ಯಕ್ಷ ಕಲಾವಿದರು, ನಾಟಕ ಕಲಾವಿದರು ಮತ್ತು ಭೂತಾರಾಧನಾ ಕಲಾವಿದರಿಗೆ ಆಹಾರ ಸಾಮಗ್ರಿಗಳ ಕಿಟ್ಗಳನ್ನು ವಿತರಿಸಿದರು.
ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ, ಬ್ರಹ್ಮಾವರ ಬಂಟರ ಸಂಘದ ಮಾಜಿ ಅಧ್ಯಕ್ಷ ಬಿ.ಭುಜಂಗ ಶೆಟ್ಟಿ, ಯಕ್ಷಧ್ರುವ ಕೇಂದ್ರ ಸಮಿತಿಯ ಉದಯ ಶೆಟ್ಟಿ ಕೆರೆಕಟ್ಟೆ, ವಸಂತ್ ಗಿಳಿಯಾರ್, ಡಾ.ವಿಟ್ಲ ಹರೀಶ್ ಜೋಷಿ, ಯಕ್ಷಗಾನ ಸಂಘಟಕ ಸುಧಾಕರ ಆಚಾರ್ಯ ಉಡುಪಿ, ಹರೀಶ್ ಶೆಟ್ಟಿ ಚೇರ್ಕಾಡಿ, ಭಾಗವತ ಸದಾಶಿವ ಅಮೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.