ADVERTISEMENT

ಸರ್ವರ ಸಹಕಾರ: ಯಕ್ಷಗಾನ ಸಮ್ಮೇಳನ ಯಶಸ್ವಿ

ಕೃತಜ್ಞತಾ ಸಭೆಯಲ್ಲಿ ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್‌.ಹೆಗಡೆ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2023, 11:35 IST
Last Updated 22 ಫೆಬ್ರುವರಿ 2023, 11:35 IST
ಉಡುಪಿಯ ಕಡಿಯಾಳಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ ಯಕ್ಷಗಾನ ಸಮ್ಮೇಳನದ ಕೃತಜ್ಞತಾ ಸಭೆ ನಡೆಯಿತು.
ಉಡುಪಿಯ ಕಡಿಯಾಳಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ ಯಕ್ಷಗಾನ ಸಮ್ಮೇಳನದ ಕೃತಜ್ಞತಾ ಸಭೆ ನಡೆಯಿತು.   

ಉಡುಪಿ: ರಾಜ್ಯದ ಮೊದಲ ಸಮಗ್ರ ಯಕ್ಷಗಾನ ಸಮ್ಮೇಳನ ಉಡುಪಿಯಲ್ಲಿ ಯಶಸ್ವಿಯಾಗಿ ನೆರವೇರಿದ್ದು ಸಂತಸ ತಂದಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಡಾ.ಜಿ.ಎಲ್‌.ಹೆಗಡೆ ಸಂತಸ ವ್ಯಕ್ತಪಡಿಸಿದರು.

ನಗರದ ಕಡಿಯಾಳಿ ದೇವಾಲಯದ ಶರ್ವಾಣಿ ಸಭಾಂಗಣದಲ್ಲಿ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿ, ಯಕ್ಷಗಾನ ಸಮ್ಮೇಳನಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದರು.

ಶಾಸಕ ಕೆ. ರಘುಪತಿ ಭಟ್ ಮಾತನಾಡಿ ಸಭಾ ಕಾರ್ಯಕ್ರಮ, ಯಕ್ಷಗಾನ ಸಮ್ಮೇಳನದ ಗೋಷ್ಠಿಗಳು, ಕಲಾ ಪ್ರದರ್ಶನಗಳು, ಸಮ್ಮೇಳನ ಸನ್ಮಾನ, ಪ್ರದರ್ಶಿನಿ ಮಳಿಗೆ, ಊಟೋಪಚಾರ ಹೀಗೆ ಎಲ್ಲ ವಿಭಾಗಗಳಲ್ಲೂ ಅಚ್ಚುಕಟ್ಟುತನ ಕಾಣುತ್ತಿತ್ತು. ದೇಶ ವಿದೇಶಗಳಿಂದ ಬಂದಿರುವ ಯಕ್ಷಗಾನ ಅಭಿಮಾನಿಗಳು ಸಮ್ಮೇಳನದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ವೈಯಕ್ತಿಕವಾಗಿ ತೃಪ್ತಿ ತಂದಿದೆ ಎಂದರು.

ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ‌ಸಚಿವ ವಿ. ಸುನಿಲ್ ಕುಮಾರ್ ವಿಶೇಷ ಕಾಳಜಿ ವಹಿಸಿದ್ದರಿಂದ ಯಕ್ಷಗಾನ ಸಮ್ಮೇಳನ ಸಾಧ್ಯವಾಯಿತು. ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಶಿ ಅವರ ಸಹಕಾರ ಹಾಗೂ ಮಾರ್ಗದರ್ಶನವೂ ಯಶಸ್ಸಿನಲ್ಲಿ ಮಹತ್ತ್ವದ ಪಾತ್ರ ವಹಿಸಿದೆ ಎಂದರು.

ಕದ್ರಿ ನವನೀತ ಶೆಟ್ಟಿ ಮಾತನಾಡಿದರು. ಕಡಿಯಾಳಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ರವಿರಾಜ್ ಆಚಾರ್ಯ, ಪ್ರಧಾನ ಸಂಚಾಲಕ ಪಿ.ಕಿಶನ್ ಹೆಗ್ಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳಾದ ಶಿವರುದ್ರಪ್ಪ, ಪೂರ್ಣಿಮಾ, ರಾಘವೇಂದ್ರ ಕಿಣಿ, ಭುವನಪ್ರಸಾದ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಎಂ.ಹೆಗಡೆ ಧನ್ಯವಾದ ಸಲ್ಲಿಸಿದರು. ಈಚೆಗೆ ನಿಧನರಾದ ಅಂಬಾತನಯ ಮುದ್ರಾಡಿ ಅವರಿಗೆ ಪ್ರೊ.ಎಂ.ಎಲ್.ಸಾಮಗರು ನುಡಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.