ಬ್ರಹ್ಮಾವರ: ಯಕ್ಷಗಾನದ ಹಿಂದಿನ ಸಂಪ್ರದಾಯ, ಪರಂಪರೆಯನ್ನು ಉಳಿಸಿಕೊಂಡು ಯಕ್ಷಗಾನ ಕಲೆಯನ್ನು ಬೆಳೆಸಬೇಕು ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶ್ಯಾಮ್ ಭಟ್ ಹೇಳಿದರು.
ಸಾಲಿಗ್ರಾಮ ಗುಂಡ್ಮಿಯ ಸದಾನಂದ ರಂಗಮಂಟಪದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ಐವತ್ತರ ಸಂಭ್ರಮದ ಪ್ರಯುಕ್ತ ನಡೆದ ಯಕ್ಷ ಸಪ್ತೋತ್ಸವ ಕುರುಕ್ಷೇತ್ರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಕ್ಷಗಾನ ಮೇಳಗಳಿಂದ ಇಂದು ಯಕ್ಷಗಾನದ ಸಂಪ್ರದಾಯ ಪ್ರಾಮಾಣಿಕವಾಗಿ ಉಳಿದಿಲ್ಲ. ಆದರೆ, ಕಲಾಕೇಂದ್ರದಂತಹ ಸಂಸ್ಥೆಗಳಿಂದ ಮಾತ್ರ ಹಿಂದಿನ ಸಂಪ್ರದಾಯ ಉಳಿದಿದೆ ಎಂದು ಹೇಳಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ಯಕ್ಷಗಾನ ಶಾಶ್ವತ ಕಲೆ. ಪ್ರೇಕ್ಷಕರ, ಅಭಿಮಾನಿಗಳ ಮೇಲೆ ಇದರ ಅಳಿವು ಉಳಿವು ನಿಂತಿದೆ ಎಂದರು.
ಗುಂಡ್ಮಿ ಶಂಕರನಾರಾಯಣ ಉಪಾಧ್ಯ ಸಂಸ್ಮರಣೆಯ ಪ್ರಯುಕ್ತ ಬೆಲ್ತೂರು ರಮೇಶ ಅವರಿಗೆ ಆರ್ಥಿಕ ಸಹಾಯ ಹಸ್ತಾಂತರ ಮಾಡಲಾಯಿತು. ರಾಜ್ಯೋತ್ಸವ ಪುರಸ್ಕೃತರಾದ ಯಕ್ಷಗಾನ ವಿಮರ್ಶಕ, ಕಲಾಕೇಂದ್ರದ ಸಲಹಾ ಸಮಿತಿಯ ಸದಸ್ಯ ಡಾ.ಎಂ.ಪ್ರಭಾಕರ ಜೋಷಿ ಮತ್ತು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರನ್ನು ಸನ್ಮಾನಿಸಲಾಯಿತು. ಸಪ್ತೋತ್ಸವಕ್ಕೆ ಸಹಕಾರ ನೀಡಿದ ಯಕ್ಷಗಾನ ಕಲಾವಿದ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರನ್ನು ಗೌರವಿಸಲಾಯಿತು.
ಕಲಾಕೇಂದ್ರದ ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಕರ್ಣಾಟಕ ಬ್ಯಾಂಕ್ನ ಕಾರ್ಯ ನಿರ್ವಹಣಾಧಿಕಾರಿ ಬಾಲಚಂದ್ರ ವೈ.ಸಿ, ಗುಂಡ್ಮಿ ರವೀಂದ್ರ ಉಪಾಧ್ಯ ಇದ್ದರು. ಕಲಾಕೇಂದ್ರದ ರಾಜಶೇಖರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಂಬರೀಷ್ ಭಟ್ ವಂದಿಸಿದರು. ಕಸಾಪ ಬ್ರಹ್ಮಾವರ ತಾಲ್ಲೂಕು ಅಧ್ಯಕ್ಷ ರಾಮಚಂದ್ರ ಐತಾಳ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.