ಉಡುಪಿ: ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡು ಸಂಸ್ಥೆಯಿಂದ ಅ.27ರಂದು ಸಂಜೆ 4.30ಕ್ಕೆ ಮಥುರಾ ಛತ್ರದಲ್ಲಿ ‘ಯಕ್ಷಾರಾಧನೆ’ ರಂಗ ಮಹೋತ್ಸವ ಹಾಗೂ ‘ಕಣ್ಣಿ’ ‘ಅಭಿನೇತ್ರಿ’ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂಸ್ಥೆಯ ನೀಲ್ಕೋಡ ಶಂಕರ ಹೆಗಡೆ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿಯಮಾನುಸಾರ ಸೀಮಿತ ಸಂಖ್ಯೆಯಲ್ಲಿ ಮಾತ್ರ ಕಾರ್ಯಕ್ರಮಕ್ಕೆ ಪ್ರವೇಶವಿದ್ದು, ಮುಕ್ತ ವಾಹಿನಿ, ಫೇಸ್ಬುಕ್, ಯೂಟ್ಯೂಬ್ನಲ್ಲಿ ನೇರವಾಗಿ ಕಾರ್ಯಕ್ರಮ ವೀಕ್ಷಿಸಬಹುದು ಎಂದರು.
5 ದಶಕಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿರುವ ಗೋಪಾಲ ಆಚಾರ್ ತೀರ್ಥಹಳ್ಳಿ ಅವರಿಗೆ ಕಣ್ಣಿ ಪ್ರಶಸ್ತಿ ಹಾಗೂ ಎಂ.ಕೆ.ರಮೇಶ್ ಆಚಾರ್ ಕಟ್ಟೆಹಕ್ಲು ಅವರಿಗೆ ಅಭಿನೇತ್ರಿ ಪ್ರಶಸ್ತಿ ನೀಡಲಾಗುವುದು. ಪ್ರಸಂಗಕರ್ತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಿಗೆ ಗೌರವಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸಲಿದ್ದಾರೆ. ಮಾಹೆ ಕುಲಸಚಿವ ಡಾ.ನಾರಾಯಣ ಸಭಾಹಿತ್ ಅಧ್ಯಕ್ಷತೆ ವಹಿಸಲಿದದಾರೆ. ದಕ್ಷಿಣ ಕನ್ನಡ, ಉಡುಪಿ ಮೀನು ಮಾರಾಟ ಫೆಡರೇಷನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಯಕ್ಷಗಾನ ಮೇಳದ ಯಜಮಾನರಾದ ಕಿಶನ್ ಕುಮಾರ್ ಹೆಗಡೆ, ಕಲಾರಂಗ ಉಡುಪಿಯ ಅಧ್ಯಕ್ಷ ಎಂ.ಗಂಗಾಧರ ರಾವ್, ಕನ್ನಾರ್ಪಾಡಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ ಉಪಸ್ಥಿತರಿರಲಿದ್ದಾರೆ. ಪ್ರಸಾದ್ ಮೊಗೆಬೆಟ್ಟು ರಚಿತ ಹಾಸ್ಯರತ್ನ ತೆನಾಲಿ ರಾಮಕೃಷ್ಣ ಯಕ್ಷಗಾನ ಪ್ರಸಂಗ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಿತ್ಯಾನಂದ ನರಸಿಂಗೆ, ಶಂಕರ ಬಡಗಬೆಟ್ಟು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.