ADVERTISEMENT

ಅಂಕೋಲಾ: ಗಮನಸೆಳೆದ ಹೊಂಡೆಯಾಟ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 10:15 IST
Last Updated 28 ಅಕ್ಟೋಬರ್ 2011, 10:15 IST

ಅಂಕೋಲಾ: ತಾಲ್ಲೂಕಿನಾದ್ಯಂತ ದೀಪಾವಳಿ ಹಬ್ಬ ಮತ್ತು ಹಿಂಡಲ ಕಾಯಿಗಳಿಗೆ ಅನ್ಯೋನ್ಯ ಸಂಬಂಧವಿದೆ.  ನೀರು ತುಂಬಿಸುವ ದಿನದಂದು ಒಲೆಯ ಮೇಲೆ ಇಡುವ ಹಂಡೆಯ ಕಂಠಕ್ಕೆ ಹಿಂಡಲಕಾಯಿಗಳ ಸರವನ್ನು ಕಟ್ಟಲಾಗುತ್ತದೆ. 

ಮರುದಿನ ಸ್ನಾನ ಮಾಡಿ ಸೋದರಿಯರಿಂದ ಆರತಿ ಸ್ವೀಕರಿಸಿ ಒಳಗೆ ಬರುವ ಪುರುಷರು ಹಿಂಡಲಕಾಯಿಗಳನ್ನು ಕಾಲಿನಿಂದ ತುಳಿಯುವುದು ವಾಡಿಕೆ ಯಾಗಿದೆ.  ಇದಕ್ಕಿಂತ ಮುಖ್ಯವಾಗಿ ಕ್ಷತ್ರಿಯ ಕೋಮಾರಪಂಥ ಸಮು ದಾಯದ ಯುವಕರು ಬಲಿ ಪಾಡ್ಯಮಿಯ ದಿನದಂದು ಆಚರಿಸುವ ಹೊಂಡೆಯಾಟ ಇಲ್ಲಿನ ದೀಪಾವಳಿಯ ವಿಶೇಷತೆಯಾಗಿದೆ.  

 ಗುರುವಾರ ಸಾಯಂಕಾಲ ಈ ಸಮುದಾಯದ ಎರಡು ತಂಡಗಳು ಕವಣೆಗಳಲ್ಲಿ ಹಿಂಡಲಕಾಯಿಗಳನ್ನು ಇಟ್ಟುಕೊಂಡು ಪರಸ್ಪರ ಎದುರಾಳಿ ಗಳಂತೆ ಬೀಸುವುದನ್ನು ಮತ್ತು ಏಟುಗಳು ಬೀಳುವುದನ್ನು ಜಾಣ್ಮೆ ಯಿಂದ ತಪ್ಪಿಸಿಕೊಳ್ಳುವುದನ್ನು ನಗರ ದಲ್ಲಿ ಸಹಸ್ರಾರು ಜನರು ನೋಡಿ ಸಂಭ್ರಮಿಸಿದರು. 

ಇಲ್ಲಿನ ಭೂಮಿ ದೇವತೆಯೆಂದೇ ಖ್ಯಾತಳಾಗಿರುವ ಶಾಂತಾದುರ್ಗಾ ದೇವಸ್ಥಾನದಿಂದ ಹೊನ್ನಿಕೇರಿ ತಂಡ ದವರು ಕವಣೆಗಳನ್ನು ಬೀಸುತ್ತ ಸಾಗಿ ಬಂದರೆ, ಎದುರಾಳಿಗಳಾಗಿ ಕುಂಬಾರ ಕೇರಿ ತಂಡದವರು ಕಳಸ ದೇವಸ್ಥಾನ ದಿಂದ ಬರುತ್ತಾರೆ.  ಬಂಡಿಬಜಾರದ ಬೀದಿಯುದ್ದಕ್ಕೂ ಕವಣೆಗಳಿಂದ ಬೀಸಿ ಬರುವ ಹಿಂಡಲಕಾಯಿಗಳ ಸದ್ದು ಕೋವಿಯ ಸದ್ದನ್ನು ನೆನಪಿಸುತ್ತದೆ. 

ಹೊಂಡೆಯಾಟವಾಡಿದ ನಂತರ ಸ್ನೇಹದಿಂದ ಮನೆಗೆ ಹೋಗುವ ಯುವಕರನ್ನು ಆರತಿ ಎತ್ತಿ ಸೋದರಿ ಯರು ಬರಮಾಡಿ ಕೊಳ್ಳುತ್ತಾರೆ.  ಕ್ಷಾತ್ರ ಸಂಪ್ರದಾಯದ ಒಂದು ಜನಪದ ಪಳೆಯುಳಿಕೆಯಂತೆ ಕಂಡುಬರುವ ಹೊಂಡೆಯಾಟದ ಕುರಿತು ಸಾರ್ವ ಜನಿಕರಲ್ಲಿ ಕುತೂಹಲ ಕಂಡುಬರುತ್ತದೆ.     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.