ADVERTISEMENT

ಅಪಾಯಕಾರಿ ತಿರುವು: ಆತಂಕ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2011, 10:35 IST
Last Updated 27 ಅಕ್ಟೋಬರ್ 2011, 10:35 IST

ಕಾರವಾರ: ರಾಷ್ಟ್ರೀಯ ಹೆದ್ದಾರಿ 17ರಲ್ಲಿ ತಾಲ್ಲೂಕಿನ ಬಿಣಗಾ ಮತ್ತು ಸಂಕ್ರುಭಾಗ ಸಮೀಪ ಅಪಾಯಕಾರಿ `ಯು~ ತಿರುವು ಗಳಿರುವ ಕಡೆಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಹತ್ತೇ ದಿನದ ಅವಧಿಯಲ್ಲಿ ಎರಡು ಅಪಘಾತಗಳು ನಡೆದಿರುವುದೇ ಇದಕ್ಕೆ ಸಾಕ್ಷಿ.

ಕಾರವಾರ ನಗರದ ದಾಟಿದ ನಂತರ ರಾಷ್ಟ್ರೀಯ ಹೆದ್ದಾರಿ -17 ಬಿಣಗಾ ಮತ್ತು ಸಂಕ್ರುಭಾಗದಲ್ಲಿ ಘಟ್ಟ ಪ್ರದೇಶದಿಂದ ಹಾದು ಹೋಗಿದೆ. ಸುಮಾರು ಎಂಟು ಕಿಲೋ ಮೀಟರ್ ರಸ್ತೆಯಲ್ಲಿಯು ತಿರುವುಗಳೇ ಹೆಚ್ಚು.

ಈ ತಿರುವುಗಳು ಎಷ್ಟು ಅಪಾಯಕಾರಿಯಾಗಿವೆ ಎಂದರೆ ಎದುರಿನಿಂದ ವಾಹನ ಬರುವುದು ಗೊತ್ತೇ ಆಗುವುದಿಲ್ಲ. ರಸ್ತೆ ಬದಿಯಲ್ಲಿ ಬೆಳೆದಿರುವ ಗಿಡ-ಕಂಟಿಗಳನ್ನು ಕಡಿದು ಹಾಕದಿರುವುದು ಮತ್ತು ಸೀಬರ್ಡ್ ನೌಕಾನೆಲೆ ಆವರಣ ಗೋಡೆ ಇದಕ್ಕೆಪ್ರಮುಖ ಕಾರಣವಾಗಿದೆ.

ತಾಲ್ಲೂಕಿನಲ್ಲಿ 2009ರಲ್ಲಿ ನೆರಹಾವಳಿ ಬಂದಾಗ ಬಿಣಗಾ ಮತ್ತು ಸಂಕ್ರುಭಾಗ ಘಟ್ಟದಲ್ಲಿ ಅನೇಕ ಕಡೆಗಳಲ್ಲಿ ಸೀಬರ್ಡ್ ನೌಕಾನೆಲೆಯ ಆವರಣ ಗೋಡೆಗಳು ಕುಸಿದು ಬಿದ್ದಿತ್ತು. ಇದಕ್ಕೆ ಶಾಶ್ವತ ಪರಿಹಾರ ಎನ್ನುವಂತೆ ಸೀಬರ್ಡ್ ನೌಕಾನೆಲೆಯವರು ಕೆಲವು ಕಡೆಗಳಲ್ಲಿ ಆವರಣ ಗೋಡೆಗೆ ಕೆಲವು ಕಡೆಗಳಲ್ಲಿ ತಗಡಿನ ಸೀಟು ಬಳಸಿದ್ದಾರೆ.

ಈ ಅಪಾಯಕಾರಿ ತಿರುವುಗಳಲ್ಲಿ ಆವರಣ ಗೋಡೆಯ ಎತ್ತರ ಜಾಸ್ತಿಯಾಗಿರುವುದರಿಂದ `ಯು~ ತಿರುವುಗಳಿರುವ ಕಡೆಗಳಲ್ಲಿ ಎದುರಿನಿಂದ ಬರುವ ವಾಹನಗಳ ಸೂಚನೆ ಸಿಗದೆ ಮುಖಾಮುಖಿ ಡಿಕ್ಕಿ ಸಂಭವಿಸುತ್ತಿವೆ.

ಸೀಬರ್ಡ್ ನೌಕಾನೆಲೆಯ ಆವರಣ ಗೋಡೆಯಿಂದಾಗಿ ಬಿಣಗಾ ಮತ್ತು ಸಂಕ್ರುಭಾಗ ತಿರುವುಗಳಲ್ಲಿ ಪದೇಪದೇ ಅಪಘಾತಗಳು ಸಂಭವಿಸುತ್ತಿದ್ದು ಈ ಕುರಿತು ನೌಕಾನೆಲೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿ ಗಳೊಂದಿಗೆ ಮಾತುಕತೆ ನಡೆಸಬೇಕು ಎಂದು ಬಿಣಗಾ ನಾಗರಿಕ ವೇದಿಕೆ ಜಿಲ್ಲಾಧಿಕಾರಿಗಳಿಗೆ ಬಹಳ ಹಿಂದೆಯೇ ಮನವಿ ನೀಡಿದೆ.

ಈ ಕುರಿತು ಜಿಲ್ಲಾಡಳಿತವಾಗಲಿ, ರಾಷ್ಟ್ರೀಯ ಹೆದ್ದಾರಿ ಇಲಾಖೆಯಾಗಲಿ ಕ್ರಮಕೈಗೊಂಡಿರುವುದು ಕಂಡುಬಂದಿಲ್ಲ. ಅಪಘಾತಗಳು ನಡೆಯುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.