ADVERTISEMENT

ಅಭಿವೃದ್ಧಿಗೆ ಕಲ್ಪನೆಯೂ ಬೇಕು: ಶಶಿಭೂಷಣ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 8:30 IST
Last Updated 24 ಏಪ್ರಿಲ್ 2013, 8:30 IST

ಸಿದ್ದಾಪುರ: `ಯಾವುದೇ ಪ್ರದೇಶ ಅಭಿವೃದ್ಧಿ ಹೊಂದಲು ಕೋಟಿಗಟ್ಟಲೆ ಅನುದಾನ ಬಂದರೆ ಸಾಲದು; ವ್ಯವಸ್ಥಿತ ಸೌಕರ್ಯ ಕಲ್ಪಿಸುವ ಕಲ್ಪನೆಯೂ ಇರಬೇಕು' ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಪರೋಕ್ಷವಾಗಿ ಬಿಜೆಪಿ ಆಡಳಿತವನ್ನು ಟೀಕಿಸಿದರು.

ಪಟ್ಟಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. `ಪಟ್ಟಣಕ್ಕೆ ಮಿನಿ ವಿಧಾನಸೌಧ ಮಂಜೂರಾಗಿತ್ತು. ಆದರೆ ಕಾರ್ಯರೂಪಕ್ಕೆ ಬರಲಿಲ್ಲ. ಬಸ್ ನಿಲ್ದಾಣ  ಹಾಗೆಯೇ ಇದೆ. ಡಿಪೊ ಕಾಮಗಾರಿ ಕಾರ್ಯಗತ ಆಗಿಲ್ಲ. ವಿಶ್ವವಿಖ್ಯಾತ ಜೋಗ ಜಲಪಾತಕ್ಕೆ ಪಟ್ಟಣದಿಂದ ಸಂಪರ್ಕ ವ್ಯವಸ್ಥೆ ಇಲ್ಲ. ನಾನು ಆಯ್ಕೆಯಾದಲ್ಲಿ ತಾಲ್ಲೂಕು ಎದುರಿಸುತ್ತಿರುವ ಕೊರತೆಗಳನ್ನು ನೀಗಿಸುವ ಪ್ರಯತ್ನ ಮಾಡಲಿದ್ದೇನೆ. ನನಗೆ ಪಕ್ಷಾತೀತವಾಗಿ ಬೆಂಬಲ ವ್ಯಕ್ತವಾಗುತ್ತಿದೆ' ಎಂದರು.

`ಇದು ನಿರ್ಣಾಯಕ ಚುನಾವಣೆಯಾಗಿದ್ದು, ರೈತಪರವಾರ, ಜನಪರವಾದ ಸರ್ಕಾರ ತರುವ ನಿಟ್ಟಿನಲ್ಲಿ  ಈ ಚುನಾವಣೆಗೆ ಮಹತ್ವವಿದೆ. ಜನರು ಭ್ರಷ್ಟಾಚಾರ ರಹಿತ ಆಡಳಿತ ಬಯಸುತ್ತಿದ್ದಾರೆ. ಆಡಳಿತ ಯಂತ್ರವನ್ನು ನಿಯಂತ್ರಿಸುವ ಸರ್ಕಾರ ತರುವ ಸವಾಲು ಜನರ ಮುಂದಿದೆ' ಎಂದರು.

ಮಾಜಿ ಸಚಿವ ಪಿ.ಎಸ್.ಜೈವಂತ್ ಮಾತನಾಡಿ, `ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜಿಲ್ಲೆಯಲ್ಲಿಯೂ 1983ರಲ್ಲಿ ನಡೆದ ಚುನಾವಣೆಯ ಫಲಿತಾಂಶ ಮರುಕಳಿಸಲಿದೆ. ಬಿಜೆಪಿಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಬಹಳಷ್ಟು ಕಾಮಗಾರಿಗಳು ಪೂರ್ಣವಾಗಿಲ್ಲ. ಇದರಿಂದ ಜನರಿಗೆ ಕಾಮಗಾರಿಯ ಉಪಯೋಗ ದೊರೆತಿಲ್ಲ' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ವಿವೇಕಾನಂದ ವೈದ್ಯ, ಜೆಡಿಎಸ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಬಿ.ಆರ್.ನಾಯ್ಕ ಹೆಗ್ಗಾರಕೈ, ಎನ್.ಎಲ್.ಗೌಡ, ಗಜಾನನ ನಾಯ್ಕ, ಎಸ್.ಕೆ.ನಾಯ್ಕ, ಜಿ.ಐ.ನಾಯ್ಕ, ಶ್ರೀಧರ ಭಟ್ಟ ಗಡಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.