ಕುಮಟಾ: ‘ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿದಂತೆ ಎನ್.ಡಿ.ಎ ಸರ್ಕಾರ ಜನರಿಗೆ ಉದ್ಯೋಗ ಸೃಷ್ಟಿ ಮಾಡುವಲ್ಲಿ ವಿಫಲವಾಗಿದೆ. ಇದು ಟೀಕೆಯಲ್ಲ ಇದರ ಬಗ್ಗೆ ಚರ್ಚೆ ಮಾಡಲು ಸಿದ್ಧ’ ಎಂದು ಕೈಗಾರಿಕೆ ಹಾಗೂ ಮೂಲ ಸೌಕರ್ಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಕುಮಟಾದಲ್ಲಿ ಶನಿವಾರ ದಿ. ಕುಮಟಾ ಅರ್ಬನ್ ಬ್ಯಾಂಕಿನ ಶತಮಾನೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ‘ಹಣಕಾಸು ಸಂಸ್ಥೆಗಳು ಹೆಚ್ಚು ಲಾಭ ಮಾಡುವ ಬದಲು ಆರೋಗ್ಯ ಕಾಪಾಡಿಕೊಂಡು ಉತ್ತಮ ಸೇವೆ ನೀಡಬೇಕು. ಕಷ್ಟಪಟ್ಟು ಗಳಿಸಿದ ತನ್ನ ಹಣ ಬ್ಯಾಂಕಿನಲ್ಲಿ ಸುರಕ್ಷಿತವಾಗಿರಬೇಕು ಎಂದು ಗ್ರಾಹಕ ಬಯಸುವುದು ಖಂಡಿತಾ ತಪ್ಪಲ್ಲ. ಅವರ ವಿಶ್ವಾಸ ಉಳಿಸಿಕೊಂಡು ಸೇವೆ ನೀಡುವುದು ಬ್ಯಾಂಕಿನ ಉದ್ದೇಶವಾಗಬೇಕು’ ಎಂದರು.
‘ಧೀರೂ ಶಾನಭಾಗ ಅವರು ಅಧ್ಯಕ್ಷರಾದ ನಂತರ ಕುಮಟಾ ಅರ್ಬನ್ ಬ್ಯಾಂಕ್ ಚೆನ್ನಾಗಿ ಬೆಳೆಯುತ್ತಿದೆ ಎನ್ನುವ ಮಾತು ಕೇಳಿದ್ದೇನೆ. ವಾಹನ, ಆಭರಣ, ಮನೆ ಸಾಲ ಹೊರತಾಗಿ ಬ್ಯಾಂಕು ಸಣ್ಣ ಕೈಗಾರಿಕೆಗಳಿಗೂ ಸಾಲ ನೀಡಲು ಮುಂದೆ ಬರಬೇಕು’ ಎಂದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿದರು. ಬ್ಯಾಂಕ್ನ ಅಧ್ಯಕ್ಷ ಧೀರು ಶಾನಭಾಗ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಮಧುಸೂದನ್ ಶೇಟ್, ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಪಿ.ಎನ್. ನಾಯ್ಕ, ಹಿರಿಯ ಸಹಕಾರಿ ಮುಖಂಡ ಆರ್.ಎಸ್. ಭಾಗ್ವತ, ಅಂಕೋಲಾ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಪ್ರದೀಪ ಪೈ ಉಪಸ್ಥಿತರಿದ್ದರು. ಶೇಷಗಿರಿ ಶಾನಭಾಗ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಕುಂದ ಶಾನಭಾಗ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.