ಯಲ್ಲಾಪುರ: ತಾಲ್ಲೂಕಿನ ಕಿರವತ್ತಿ ವಲಯದ ಸುತ್ತಮುತ್ತಲಿನ ಪ್ರದೇಶಗಳಿಗೆ ಕಳೆದ ಮೂರ್ನಾಲ್ಕು ದಿನಗಳಿಂದ ಕಾಡಾನೆಗಳು ದಾಳಿ ಮಾಡುತ್ತಿದ್ದು, ಮದನೂರು, ಕಿರವತ್ತಿ ಭಾಗದಲ್ಲಿ ಬೆಳೆ ನಾಶವಾಗಿದೆ. ಅರಣ್ಯ ಇಲಾಖೆ ಮಾತ್ರ ಆನೆ ಹಾವಳಿ ತಡೆಗಟ್ಟಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಅರಣ್ಯ ಇಲಾಖೆಯ ವಿರುದ್ಧ ಆರೋಪಿಸುತ್ತಿದ್ದಾರೆ.
ಕಿರವತ್ತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋಮಾಪುರ, ಅಲ್ಕೇರಿ, ಹುಣಶೆಟ್ಟಿಕೊಪ್ಪದ ಮದನೂರು ಭಾಗದಲ್ಲಿ 6 ಆನೆಗಳಿರುವ 3 ಗುಂಪು ಕಳೆದ ನಾಲ್ಕೈದು ದಿನಗಳಿಂದ ಓಡಾಡುತ್ತಿದ್ದು, ಸುಮಾರು ನಾಲ್ಕೈದು ಎಕರೆ ಭತ್ತ, ಕಬ್ಬು ಬೆಳೆಗಳು ನಾಶಮಾಡಿದೆ. ಸುಮಾರು ಎಲ್ಲ ಭಾಗಗಳಲ್ಲಿಯೂ ಬೆಳೆ ಕಟಾವಿಗೆ ಬರುತ್ತಿದ್ದು, ಈ ವೇಳೆಯೇ ಕಷ್ಟ ಪಟ್ಟು ಬೆಳೆದ ಬೆಳೆಗಳು ರೈತರ ಕೈಗೆ ಸಿಗದೆ ನಿರಾಶೆಗೊಳ್ಳುತ್ತಿದ್ದಾರೆ.
‘ಕಾಡಾನೆ ದಾಳಿಯಿಂದ ರೈತರ ಬೆಳೆಗಳು ಸಂಪೂರ್ಣ ನಾಶವಾಗುತ್ತಿದೆ ಎಂದು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ಇದೂವರೆಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ನಾಶವಾದ ಬೆಳೆಯನ್ನು ಪರಿಶೀಲಿಸಿ ರೈತರಿಗೆ ಪರಿಹಾರ ನೀಡಬೇಕು’ ಎನ್ನುತ್ತಾರೆ ಸ್ಥಳೀಯ ಮುಖಂಡ ವಿಠ್ಠಲ ಪಾಂಡ್ರಮೀಸೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.