ADVERTISEMENT

ಕಿಷ್ಕಿಂಧೆ ಜಾಗದಲ್ಲಿ ಅಂಗನವಾಡಿ ಕೇಂದ್ರ

ಪಿ.ಕೆ.ರವಿಕುಮಾರ
Published 7 ಸೆಪ್ಟೆಂಬರ್ 2013, 6:46 IST
Last Updated 7 ಸೆಪ್ಟೆಂಬರ್ 2013, 6:46 IST
ಕಾರವಾರದ ಬಿಣಗಾದಲ್ಲಿರುವ ಅಂಗನವಾಡಿ ಕೇಂದ್ರದ ಒಳನೋಟ.
ಕಾರವಾರದ ಬಿಣಗಾದಲ್ಲಿರುವ ಅಂಗನವಾಡಿ ಕೇಂದ್ರದ ಒಳನೋಟ.   

ಕಾರವಾರ: ಮಳೆ ಬಂದರೆ ಸೋರುವ ಕೊಠಡಿ. ಕಿಷ್ಕೆಂಧೆ ಜಾಗದಲ್ಲಿಯೇ ಮಕ್ಕಳ ಆಟ- ಪಾಠ. ಇದೇ ಕೊಠಡಿಯಲ್ಲಿ ಬಿಸಿಯೂಟ ತಯಾರಿಕೆ. ಮೂಲಸೌಕರ್ಯಗಳಿಂದ ವಂಚಿತವಾದ ಕೇಂದ್ರ.

ಇದು ನಗರದ ಬಿಣಗಾದಲ್ಲಿರುವ ಅಂಗನವಾಡಿ ಕೇಂದ್ರದ ದುಃಸ್ಥಿತಿ. ಇಲ್ಲಿ ಕೇಂದ್ರಕ್ಕೆ ಬೇಕಾದ ಯೋಗ್ಯ ಕಟ್ಟಡವಿಲ್ಲ. ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಕುಡಿಯುವ ನೀರು ಹಾಗೂ ಶೌಚಾಲಯದ ಸೌಕರ್ಯವಿಲ್ಲ. ಬಿಸಿಯೂಟ ತಯಾರಿಸಲು ಪ್ರತ್ಯೇಕ ಕೊಠಡಿಯಿಲ್ಲ. ಒಟ್ಟಿನಲ್ಲಿ ಈ ಕೇಂದ್ರ ಸಮಸ್ಯೆಗಳ ಆಗರವಾಗಿ ಮಾರ್ಪಟ್ಟಿದೆ.

ಕೇಂದ್ರದಲ್ಲಿ ಒಟ್ಟು 22 ಮಕ್ಕಳಿದ್ದು, ಒಬ್ಬರು ಶಿಕ್ಷಕಿ ಹಾಗೂ ಸಹಾಯಕಿ ಇದ್ದಾರೆ. ನಗರಸಭೆಯ 30ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಈ ಕಟ್ಟಡದ ಒಂದು ಭಾಗದಲ್ಲಿ ಕಂದಾಯ ಇಲಾಖೆ ಕಚೇರಿಯಿದ್ದು, ಇನ್ನೊಂದು ಭಾಗದಲ್ಲಿ ಸಾರ್ವಜನಿಕ ಗ್ರಂಥಾಲಯ ಇದೆ. ಇವೆರಡರ ಮಧ್ಯದಲ್ಲಿರುವ ಒಂದು ಚಿಕ್ಕ ಕೊಠಡಿಯಲ್ಲಿ ಈ ಅಂಗವನಾಡಿ ಕೇಂದ್ರ ನಡೆಯುತ್ತಿದೆ.

ಇಲ್ಲಿನ ಕೊಠಡಿ ಚಿಕ್ಕದಾಗಿರುವುದರಿಂದ ಮಕ್ಕಳು ಒತ್ತೊಟ್ಟಿಗೆ ಕೂರಬೇಕಾದ ಅನಿವಾರ್ಯತೆ ಇದೆ. ಕೊಠಡಿಯ ಅರ್ಧ ಭಾಗಕ್ಕೆ ಒಂದು ಸೀರೆಯ ಪರದೆಯನ್ನು ಕಟ್ಟಲಾಗಿದೆ. ಇದನ್ನು ಸರಿಸಿದರೆ ಅದುವೇ ಬಿಸಿಯೂಟದ ಕೊಠಡಿ. ಇಲ್ಲಿ ಅಡುಗೆ ಬೇಕಾದ ಸಿದ್ಧಪಡಿಸಲು ಅಗತ್ಯ ಪದಾರ್ಥಗಳನ್ನು ಜೋಡಿಸಲಾಗಿದೆ. ಈ ಕೇಂದ್ರ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿರುವುದರಿಂದ ಮಕ್ಕಳ ಕಲಿಕೆಗೆ ಯಾವುದೇ ರೀತಿಯ ಪೂರಕ ವಾತಾವರಣ ಇಲ್ಲದಂತಾಗಿದೆ

ಸ್ಥಳಾವಕಾಶದ ಕೊರತೆಯಿಂದ ಮಕ್ಕಳನ್ನು ಬೇರೆಡೆ ಕರೆತಂದು ಪಾಠ ಮಾಡಬೇಕಾಗಿದೆ. ಅದಕ್ಕಾಗಿ ಪಕ್ಕದಲ್ಲಿ ಪಾಳು ಬಿದ್ದ ಕಟ್ಟಡವನ್ನು ಸ್ವಚ್ಛಗೊಳಿಸಲಾಗಿದೆ. ಮಕ್ಕಳಿಗೆ ಅಕ್ಷರ ಕಲಿಸಲು ಹಾಗೂ ಅವರಿಗೆ ಬಿಸಿಯೂಟ ಬಡಿಸಲು ಈ ಕಟ್ಟಡವನ್ನು ಬಳಸಿಕೊಳ್ಳಲಾಗುತ್ತಿದೆ.

`ಈ ಅಂಗನವಾಡಿ ಕೇಂದ್ರ ಹಿಂದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿತ್ತು. ಅಲ್ಲಿ ಸರಿಯಾಗಿ ಬಾಡಿಗೆ ಕಟ್ಟದ ಕಾರಣ ಈ ಕೇಂದ್ರ ನಗರಸಭೆಗೆ ಸೇರಿದ ಈ ಜಾಗಕ್ಕೆ ಸ್ಥಳಾಂತರಗೊಂಡಿದೆ. ಆದರೆ, ಇಲ್ಲಿ ಮಕ್ಕಳಿಗೆ ಯಾವುದೇ ಮೂಲಸೌಕರ್ಯಗಳಿಲ್ಲ. ಇಲ್ಲಿನ ಅವ್ಯವಸ್ಥೆ ಸರಿಪಡಿಸುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ' ಎನ್ನುತ್ತಾರೆ ಇಲ್ಲಿನ ಶಿಕ್ಷಕಿ ಸುರೇಖಾ ವೆಂಕಟೇಶ್ ಶಿರಸಾಟ್.

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ನಾಳೆ
ಕಾರವಾರ:
ಉತ್ತರ ಕನ್ನಡ ಜಿಲ್ಲಾ ಪಂಚಾಯ್ತಿ, ಜಿಲ್ಲಾ ಸಾಕ್ಷರತಾ ಸಮಿತಿ, ಜನಶಿಕ್ಷಣ ಸಂಸ್ಥಾನದ ಸಂಯುಕ್ತ ಆಶ್ರಯದಲ್ಲಿ ಸೆ. 8ರಂದು ಬೆಳಿಗ್ಗೆ 10.30ಕ್ಕೆ ಕಾರವಾರ ಬಸ್ ಸ್ಟ್ಯಾಂಡ್ ಹತ್ತಿರವಿರುವ ಕೊಡಿಬೀರ ಸಭಾಭವನದಲ್ಲಿ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾಸಕ ಸತೀಶ ಸೈಲ್ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೃಷ್ಣ ನಾರಾಯಣ ಗೌಡ, ಸಂಸದ ಅನಂತಕುಮಾರ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತಿತರರು ಭಾಗವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.