ADVERTISEMENT

ಕ್ಷೀಣಗೊಂಡ ಮಳೆ; ಮೀನಿನ ಬೆಲೆ ಗಗನಕ್ಕೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 10:19 IST
Last Updated 20 ಜೂನ್ 2013, 10:19 IST
ಕಾರವಾರಕ್ಕೆ ಹೊಂದಿಕೊಂಡಿರುವ ಪಶ್ಚಿಮಘಟ್ಟದಲ್ಲಿ ಮೋಡಗಳು ಹರಡಿಕೊಂಡಿರುವ ದೃಶ್ಯ.
ಕಾರವಾರಕ್ಕೆ ಹೊಂದಿಕೊಂಡಿರುವ ಪಶ್ಚಿಮಘಟ್ಟದಲ್ಲಿ ಮೋಡಗಳು ಹರಡಿಕೊಂಡಿರುವ ದೃಶ್ಯ.   

ಕಾರವಾರ: ಜಿಲ್ಲೆಯ ಕರಾವಳಿಯ ತಾಲ್ಲೂಕುಗಳಲ್ಲಿ ಬೆಳಿಗ್ಗೆ ಬಿರುಸಿನಿಂದ ಸುರಿದ ಮಳೆ ಮಧ್ಯಾಹ್ನದ ನಂತರ ಬಿಡುವು ನೀಡಿತು. ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ.

ಬುಧವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡು ಜಿಲ್ಲೆಯಾದ್ಯಂತ 33.1 ಸೆಂ.ಮೀ. ಮಳೆಯಾಗಿದೆ. ಅಂಕೋಲಾ- 62.6, ಭಟ್ಕಳ 46, ಹಳಿಯಾಳ 1.6, ಹೊನ್ನಾವರ 69.8, ಕಾರವಾರ 72.2, ಕುಮಟಾ 58.3, ಮುಂಡಗೋಡ 4.4, ಸಿದ್ದಾಪುರ 13.6, ಶಿರಸಿ 11, ಜೋಯಿಡಾ 16 ಹಾಗೂ ಯಲ್ಲಾಪುರದಲ್ಲಿ 8.6 ಮಳೆಯಾಗಿದೆ. ಜೂ.1 ರಿಂದ 19ರ ವರೆಗೆ ಸರಾಸರಿ 514.7 ಮಿ.ಮೀ ಮಳೆಯಾಗಿದೆ.

`ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆ ಬುಧವಾರ ಸಂಜೆಯ ಹೊತ್ತಿಗೆ ಕ್ಷೀಣಗೊಂಡಿದೆ. ಗುರುವಾರವೂ ಮಳೆ ಬಿಡುವು ನೀಡಲಿದ್ದು ಆಗಾಗ ಬಿರುಸಿನಿಂದ ಕೂಡಿದ ಮಳೆಯಾಗುವ ಸಾಧ್ಯತೆ ಇದೆ' ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು `ಪ್ರಜಾವಾಣಿ'ಗೆ ತಿಳಿಸಿದರು.

ಯಾತ್ರಾರ್ಥಿಗಳು ಸುರಕ್ಷಿತ: ಕೇದಾರನಾಥ ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿರುವ ಜಿಲ್ಲೆಯ ಒಂಬತ್ತು ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ.
ಮನುಕಟಿಯಾರ್ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಮಾರು 200ಕ್ಕೂ ಹೆಚ್ಚು ಯಾತ್ರಾರ್ಥಿಗಳನ್ನು ಅಲ್ಲಿಂದ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.

ಮುಂಡಳ್ಳಿಯಲ್ಲಿ ಮನೆ ಕುಸಿತ
ಭಟ್ಕಳ: ಮಳೆ ಗಾಳಿಗೆ ತಾಲ್ಲೂಕಿನ ಮುಂಡಳ್ಳಿಯಲ್ಲಿ ಮಂಗಳವಾರ ಮತ್ತೊಂದು ಮನೆ ಕುಸಿದು ಬಿದ್ದು ಹಾನಿಯಾಗಿದೆ.

ಮುಂಡಳ್ಳಿಯ ತಿಮ್ಮಪ್ಪ ಮಂಜುನಾಥ ಮೊಗೇರ ಎಂಬುವರಿಗೆ ಸೇರಿದ ಮನೆ ಕುಸಿದು ಬಿದ್ದು ಸುಮಾರು 10 ಸಾವಿರ ರೂಪಾಯಿ ಹಾನಿಯನ್ನು ಅಂದಾಜಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಡಾ.ಮಧುಕೇಶ್ವರ್, ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಬುಧವಾರ ಬೆಳಿಗ್ಗೆ ಸ್ವಲ್ಪ ಹೊತ್ತು ಸುರಿದ ಮಳೆ ನಂತರ ಮಾಯವಾಗಿದೆ.

ಮೀನು ದುಬಾರಿ...
ಕಳೆದು ಒಂದುವಾರದಿಂದ ಅರಬ್ಬೀ ಸಮುದ್ರದಲ್ಲಿ ಗಾಳಿ, ಮಳೆ ಸುರಿಯುತ್ತಿದ್ದರಿಂದ ಮೀನುಗಾರಿಕೆ ಸ್ಥಗಿತಗೊಂಡಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೀನಿಗೆ ಬರ ಬಂದಿದ್ದು ಬೆಲೆ ಗಗನಕ್ಕೆ ಏರಿದೆ.

ಸಾಧಾರಣ ಗಾತ್ರದ ಎರಡು ಬಂಗಡೆ ಬೆಲೆ ರೂ. 100. ಮಧ್ಯಮ ಗಾತ್ರದ ನಾಲ್ಕು ಬಂಗಡೆಗೆ ರೂ. 100. 20 ವೈಟ್ ಸಿಗಡಿಯ ಬೆಲೆ ರೂ. 500. 15 ತಾರ‌್ಲೆ ಮೀನಿಗೆ ರೂ. 50. ಹತ್ತು ಏಡಿಗೆ 150 ರೂಪಾಯಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT