ADVERTISEMENT

ಗ್ರಂಥಗಳು ಜೀವನ ಮಂದಿರದ ಗವಾಕ್ಷಿಗಳು

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2011, 9:00 IST
Last Updated 12 ಮಾರ್ಚ್ 2011, 9:00 IST

ಜಮಖಂಡಿ: ‘ಗ್ರಂಥಗಳು ಜೀವನ ಮಂದಿರದ ಗವಾಕ್ಷಿಗಳು ಇದ್ದಂತೆ. ಗವಾಕ್ಷಿಗಳು ಇಲ್ಲದಿದ್ದರೆ ಕತ್ತಲೆ ಆವರಿಸುತ್ತದೆ. ಕತ್ತಲೆಯಿಂದ ಮನುಷ್ಯನ ಜೀವನ ಸುಮುಧುರ, ಸುಂದರ ಆಗಲಾರದು’ ಎಂದು ವಿಜಾಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಹೇಳಿದರು. ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಶತಮಾನೋತ್ಸವ ಸವಿನೆನಪಿಗಾಗಿ ನಿರ್ಮಿಸಿದ ಸ್ಥಳೀಯ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ವಾಣಿಜ್ಯ, ಬಿಎಚ್‌ಎಸ್ ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ನೂತನ ಗ್ರಂಥಾಲಯ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

‘ಬಾಹ್ಯ ಜಗತ್ತಿನ ಜ್ಞಾನಕ್ಕೆ ವಿಜ್ಞಾನ ಎನ್ನುತ್ತಾರೆ. ಆಂತರಿಕ ಜ್ಞಾನವನ್ನು ಆತ್ಮಜ್ಞಾನ ಎನ್ನುತ್ತಾರೆ. ಈ ಎರಡು ಜ್ಞಾನ ಇದ್ದರೆ ಜೀವನ ಅದ್ಭುತ ಎನಿಸುತ್ತದೆ ಆದ್ದರಿಂದ ತೃಪ್ತಿಯಿಂದ ಬದುಕಲು ಜ್ಞಾನ ಸಂಪಾದನೆ ಮಾಡಬೇಕು. ಒಂದು ಸಣ್ಣ ಪುಸ್ತಕ ಒಬ್ಬ ಶ್ರೇಷ್ಠ ಜ್ಞಾನಿಯನ್ನು ರೂಪಿಸಬಹುದು’ ಎಂದರು.ಮಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಎಂ.ಐ. ಸವದತ್ತಿ, ‘ಕಾಲೇಜಿನ ಗ್ರಂಥಾಲಯ ಎಂದರೆ ದೇಹಕ್ಕೆ ಮೆದುಳು ಇದ್ದಂತೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯವನ್ನು ಉಪಯೋಗಿಸುವ ಮೂಲಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಬಾಬುರಡ್ಡಿ ತುಂಗಳ, ಮಾಜಿ ಶಾಸಕ ಆರ್.ಎಂ.ಕಲೂತಿ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಗದೀಶ ಗುಡಗುಂಟಿ ವೇದಿಕೆಯಲ್ಲಿದ್ದರು.ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಎಂ.ಬಿ.ಪಾಟೀಲ, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಜಿ.ಡಿ.ಭದ್ರನ್ನವರ ನಿಧನಕ್ಕೆ ಸಂತಾಪ ಸೂಚಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಅರುಣಕುಮಾರ ಶಹಾ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಎಸ್.ಎಸ್. ಸುವರ್ಣಖಂಡಿ ವಂದಿಸಿದರು. ಡಾ.ಬಿ.ಬಿ.ಶಿರಡೋಣಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.