ADVERTISEMENT

ಗ್ರಾಮೀಣ ರಸ್ತೆ ದುಃಸ್ಥಿತಿ: ಸಂಚಾರ ಸಂಪರ್ಕ ಗೋಳು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 8:05 IST
Last Updated 13 ಫೆಬ್ರುವರಿ 2012, 8:05 IST
ಗ್ರಾಮೀಣ ರಸ್ತೆ ದುಃಸ್ಥಿತಿ: ಸಂಚಾರ ಸಂಪರ್ಕ ಗೋಳು
ಗ್ರಾಮೀಣ ರಸ್ತೆ ದುಃಸ್ಥಿತಿ: ಸಂಚಾರ ಸಂಪರ್ಕ ಗೋಳು   

ಕಳಸ: ಶಿಥಿಲಾವಸ್ಥೆಗೆ ತಲುಪಿರುವ ಕಳಸ- ಕಳಕೋಡು ರಸ್ತೆಯನ್ನು ಇದೇ 15ರ ಒಳಗೆ ದುರಸ್ತಿಗೊಳಿಸದಿದ್ದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಬ್ಲಾಕ್ ಕಾಂಗ್ರೆಸ್ ಎಚ್ಚರಿಸಿದೆ.

ಎಂಟು ವರ್ಷದ ಹಿಂದೆ ಮೋಟಮ್ಮನವರ ಆಸ ಕ್ತಿಯ ಫಲವಾಗಿ ನಿರ್ಮಾಣಗೊಂಡಿದ್ದ ಕಳಸ- ಕಳಕೋಡು ರಸ್ತೆಯು ಈಗ ನಿರ್ವಹಣೆಯ ಕೊರತೆ ಯಿಂದ ಬಳಲುತ್ತಿದೆ. ಶಾಸಕ ಎಂ.ಪಿ.ಕುಮಾರಸ್ವಾಮಿ ಅಥವಾ ಸಂಸದರಾಗಿದ್ದ ಸದಾನಂದಗೌಡ ಅವರು ರಸ್ತೆಯ ಅಭಿವೃದ್ಧಿಗೆ ಚಿಕ್ಕಾಸನ್ನೂ ನೀಡದಿರು ವುದ ರಿಂದ ರಸ್ತೆಯು ತೀರಾ ಹದಗೆಟ್ಟಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಪ್ರಭಾಕರ್ ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

ಕಳಕೋಡು ರಸ್ತೆಯಲ್ಲಿ ನಿತ್ಯವೂ ನೂರಾರು ಗ್ರಾಮಸ್ಥರು ಓಡಾಡುತ್ತಾರೆ. ಆದರೆ ವಾಹನಗಳ ಓಡಾಟ ಅಸಾಧ್ಯ ಎಂಬಷ್ಟರ ಮಟ್ಟಿಗೆ ರಸ್ತೆಯು ಕುಲಗೆಟ್ಟಿದೆ. ಕಳಸಕ್ಕೆ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಅನ್ನು ಕಳಕೋಡು ರಸ್ತೆಗೆ ಹೊಂದಿ ಕೊಂಡಂತೆಯೇ ತೆಗೆದಿದ್ದ ಚರಂಡಿಯಲ್ಲಿ ಹಾಕ ಲಾಗಿದೆ. ಇದರಿಂದಾಗಿ ರಸ್ತೆಗೆ ಮತ್ತಷ್ಟು ಹಾನಿ ಯಾಗಿದೆ ಎಂದು ಪ್ರಭಾಕರ್ ಗಮನ ಸೆಳೆದಿದ್ದಾರೆ.

ಮಳೆ ಹೆಚ್ಚಾಗಿರುವುದರಿಂದ ಕಳಕೋಡು ರಸ್ತೆಯು ಈ ಮಳೆಗಾಲದಲ್ಲಿ ಕಡಿತಗೊಳ್ಳುವುದು ಖಚಿತವಾಗಿದ್ದು ಬಸ್ ಸಂಚಾರ ಸ್ಥಗಿತಗೊಳ್ಳುವ ಭಯವೂ ಇದೆ. ಶಾಲಾ ಮಕ್ಕಳು ಮತ್ತು ಜನ ಸಾಮಾನ್ಯರ ಏಕೈಕ ಆಸರೆ ಆಗಿರುವ ಈ ರಸ್ತೆಯ ಬಗ್ಗೆ ಇದೇ 15ರ ಒಳಗೆ ನಿರ್ಧಾರ  ತೆಗೆದುಕೊಳ್ಳದಿದ್ದರೆ ಕಳಸದಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟಿಸಲಾಗುವುದು ಎಂದೂ ಪ್ರಭಾಕರ್ ತಿಳಿಸಿದ್ದಾರೆ.

ಎತ್ತಿನಟ್ಟಿ: ಕಾಲೊನಿಗೆ ರಸ್ತೆ ಇಲ್ಲ
ಕೊಪ್ಪ: ತಾಲ್ಲೂಕಿನ ಎತ್ತನಹಟ್ಟಿ, ಮೇಗಳು ಬೈಲು ರಸ್ತೆ ಕಳೆದ 20 ವರ್ಷಗಳಿಂದ ದುರಸ್ತಿ ಕಾಣದೆ ಬಗ್ಗೆ ಗಮನ ಹರಿಸದಿದ್ದಲ್ಲಿ ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುವ ಎಚ್ಚರಿಕೆ ಗ್ರಾಮಸ್ಥರು ನೀಡಿದ್ದಾರೆ. 

 ಸದ್ಯ ಜಿ.ಪಂ.ಅಧ್ಯಕ್ಷರ ಕ್ಷೇತ್ರದಲ್ಲಿರುವ ಕೆಳಕೊಪ್ಪ ಪರಿಶಿಷ್ಟ ಕಾಲೊನಿ, ಕುಳುಗಾರು ಗಿರಿಜನ ಕಾಲೊನಿ, ಹುರುಳಿಹಕ್ಲು, ಊರುಗುಡಿಗೆ ಪರಿಶಿಷ್ಟ ಕಾಲೊನಿ ,ಮೇಗಳುಬೈಲು ಗಿರಿಜನ ಕಾಲೊನಿಗಳ ಮೂಲಕ ಹಾದು ಶೃಂಗೇರಿ ತಾಲ್ಲೂಕು ಶಿಡ್ಲೆ ಸಂಪರ್ಕಿಸುವ ರಸ್ತೆಗೆ  ಜಿ.ಪಂ. ಮಾಝಿ ಸದಸ್ಯ ಚಿದಂಬರಗೌಡ ಜಲ್ಲಿ ಹಾಕಿಸಿದ್ದರು. ನಂತರ ಈ ರಸ್ತೆಯತ್ತ ಜನ ಪ್ರತಿನಿಧಿ ಗಳು ತಿರುಗಿ ನೋಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ರಸ್ತೆ ದುರಸ್ತಿಗೆ ಶಾಸಕ ಜೀವರಾಜ್ ಅವರನ್ನು ಗ್ರಾಮಸ್ಥರು ಕೋರಿದ್ದು, ಅವರು ಅಕ್ಕನ ಮದುವೆ ನಂತರ ತಂಗಿ ಬಗ್ಗೆ ಚಿಂತೆ ಎಂಬ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಎತ್ತಿನಹಟ್ಟಿ ಸಂತೋಷ್ ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರಾ.ಪಂ.ಸದಸ್ಯ ಸುಧೀರ್ ಕುಮಾರ್ ಗ್ರಾಮಸ್ಥ ರಾದ ನವೀನ್, ಸುಬ್ರಹ್ಮಣ್ಯ, ಕೆ.ವಿ.ವೆಂಕ ಟೇಶ್, ದೂಜಪ್ಪ, ಶಿವರಾಮ, ವೆಂಕಟೇಶ, ಕರುಣಕರ, ಸೂರಯ್ಯ, ಮಂಜುನಾಥ್, ಕೆಳಕುಡಿಗೆ ಪುಟ್ಟರಾಯ ಮೊದಲಾದವರು ಈ ರಸ್ತೆಯ ದುರ್ಗತಿ ಬಗ್ಗೆ ಪದೇ ಪದೇ ಜನಪ್ರತಿನಿಧಿಗಳ ಗಮನ ಸೆಳೆದರೂ ಫಲಿತಾಂಶ ಶೂನ್ಯ. ಶೃಂಗೇರಿ ತಾಲ್ಲೂಕಿನ ಮೇಗಳಬೈಲುವರೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆಅಭಿವೃದ್ಧಿಪಡಿಸಲಾಗಿದೆ.

ಮೇಗಳಬೈಲಿನಿಂದ ಎತ್ತಿನಹಟ್ಟಿವರೆಗೆ 5 ಕಿ.ಮಿ. ರಸ್ತೆಯಲ್ಲಿ ಜಲ್ಲಿ ಕಿತ್ತು ಹೋಗಿದೆ. 2 ಕಿ.ಮೀ. ಹಾಕಿದ್ದ ಡಾಂಬರ್ ಮಾಯ ವಾಗಿದೆ. ಮೋರಿಗಳು ಜಖಂಗೊಂಡಿವೆ. ರಸ್ತೆಯಲ್ಲಿ ಹೊಂಡಗಳನ್ನು ದಾಟಿ ವಾಹನಗಳು ಸಂಚರಿ ಸಲಾ ರದ ಸ್ಥಿತಿ ಇದೆ. ಜಿ.ಪಂ. ಅಧ್ಯಕ್ಷೆ ಸುಚಿತಾ ನರೇಂದ್ರ ತಮ್ಮ ಕ್ಷೇತ್ರದ ರಸ್ತೆ ದುರ್ಗತಿ ಬಗ್ಗೆ ಗಮನ ಹರಿಸಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.