ADVERTISEMENT

ಚತುಷ್ಪಥ: 67ಕ್ಕೂ ಹೆಚ್ಚು ಆಕ್ಷೇಪಣೆಗಳು

ಕುಮಟಾದಲ್ಲಿ ಸಾರ್ವಜನಿಕ ಅಹವಾಲು ಸಭೆ ಇಂದು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:38 IST
Last Updated 15 ಡಿಸೆಂಬರ್ 2012, 8:38 IST
ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲ ತೀರ. ಉದ್ದೇಶಿತ ಚತುಷ್ಪಥ ಈ ಕಡಲತೀರದಿಂದ ಹಾದುಹೋಗಲಿದೆ.
ಕಾರವಾರದ ರವೀಂದ್ರನಾಥ ಟ್ಯಾಗೋರ ಕಡಲ ತೀರ. ಉದ್ದೇಶಿತ ಚತುಷ್ಪಥ ಈ ಕಡಲತೀರದಿಂದ ಹಾದುಹೋಗಲಿದೆ.   

ಕಾರವಾರ: ಉದ್ದೇಶಿತ ಚತುಷ್ಪತ ಹೆದ್ದಾರಿ ಯೋಜನೆಯ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ಕುಮಟಾ ಪಟ್ಟಣದ ನಾಗಶ್ರಿ ಕಲಾಕೇಂದ್ರದಲ್ಲಿ ಸಾರ್ವಜನಿಕ ಅಹವಾಲು ಸಭೆಯನ್ನು ಹಮ್ಮಿಕೊಂಡಿದೆ. ಉದ್ದೇಶಿತ ಯೋಜನೆಯಲ್ಲಿ ಕೆಲವೊಂದು ಬದಲಾವಣೆಗಳನ್ನು ಬಯಸಿ ಜಿಲ್ಲೆಯ ಕಾರವಾರ, ಹೊನ್ನಾವರ, ಕುಮಟಾ, ಹೊನ್ನಾವರ ಮತ್ತು ಭಟ್ಕಳದಿಂದ ಸುಮಾರು 67 ಆಕ್ಷೆಪಣೆಗಳು ಬಂದಿವೆ ಎಂದು ಗೊತ್ತಾಗಿದೆ.

ರಾಷ್ಟ್ರೀಯ ಹೆದ್ದಾರಿ-17ರಲ್ಲಿ ಚತುಷ್ಪಥ ನಿರ್ಮಾಣವಾದ ನಂತರ ರಾ.ಹೆ. 66 ಎಂದು ಪರಿವರ್ತನೆ ಆಗಲಿದೆ. ತಾಲ್ಲೂಕಿನ ಮಾಜಾಳಿಯಿಂದ ಉಡುಪಿ ಜಿಲ್ಲೆಯ ಕುಂದಾಪುರದ ವರೆಗೆ ಒಟ್ಟು 189. 600 ಕಿಲೋ ಮೀಟರ್ (ಜಿಲ್ಲೆಯಲ್ಲಿ 147. 300 ಹಾಗೂ ಉಡುಪಿ ಜಿಲ್ಲೆಯಲ್ಲಿ 42.300 ಕಿ.ಮೀ) ಚತುಷ್ಪಥ ನಿರ್ಮಾಣ ಆಗಲಿದೆ.

ಚತುಷ್ಪಥ ಯೋಜನೆಗೆ 1146 ಹೆಕ್ಟೇರ್ ಭೂಮಿ ಅವಶ್ಯಕತೆ ಇದೆ. ಹೆದ್ದಾರಿ ಪ್ರಾಧಿಕಾರದ ಬಳಿ 626 ಹೆಕ್ಟೇರ್ ಭೂಮಿ ಇದೆ. 520 ಹೆಕ್ಟೇರ್ ಭೂ ಮಿಯ ಅವಶ್ಯಕತೆ ಇದೆ. ಈ ಪೈಕಿ 112 ಹೆಕ್ಟೇರ್ ಅರಣ್ಯ ಭೂಮಿ ಮತ್ತು 24 ಹೆಕ್ಟೇರ್ ಭೂಮಿ ಸಿಆರ್‌ಝ ವಲಯದಲ್ಲಿದೆ.

ಅರಣ್ಯ ಪ್ರದೇಶದ, ನದಿಗಳು, ಸೀಬರ್ಡ್ ನೌಕಾನೆಲೆ ಯೋಜನೆಯ ಸರಹದ್ದಿನಲ್ಲಿ ಚತುಷ್ಪಥ ಹಾದುಹೋಗಲಿದೆ. ತಾಲ್ಲೂಕಿನ ಮುದಗಾ, ಅಂಕೋಲಾ ತಾಲ್ಲೂಕಿನ ಅವರ್ಸಾ, ಹಿರೇಗುತ್ತಿ, ಕುಮಟಾ ಪಟ್ಟಣ, ಮಿರ್ಜಾಣ ಮತ್ತು ಸಾವನಾಥ ಗುಡ್ಡ ಸೇರಿದಂತೆ ಒಟ್ಟು ಆರು ಕಡೆಗಳಲ್ಲಿ ರೈಲು ಸೇತುವೆಗಳು ನಿರ್ಮಾಣವಾಗಲಿದೆ. ಯೋಜನೆಯಲ್ಲಿ 13 ದೊಡ್ಡ ಸೇತುವೆಗಳು, 41 ಸಣ್ಣ ಸೇತುವೆಗಳು, ಕಲ್ಲು, ಸಿಮೆಂಟ್ ಮತ್ತು ಪೈಪ್ ಸೇರಿದಂತೆ 602 ಕಾಲುವೆಗಳು ಸೇರಿವೆ, ಕಾಳಿ, ಮಾನವಿಹೊಳೆ, ಗಂಗಾವಳಿ, ಅಘನಾಶಿನಿ, ಬಡಗಣಿ, ಶರಾವತಿ, ವೆಂಕಟಾಪುರ ನದಿಗಳಿಗೆ ಅಡ್ಡಲಾಗಿ ಸೇತುವೆಗಳು ನಿರ್ಮಾಣ ಆಗಲಿದೆ. 60. 742 ಕಿಲೋ ಮೀಟರ್ ಸರ್ವಿಸ್ ರಸ್ತೆ ನಿರ್ಮಾಣ ಯೋಜನೆಯಲ್ಲಿ ಸೇರಿದೆ.

ತಾಲ್ಲೂಕಿನ ಬಿಣಗಾ, ಮುದಗಾ ಮತ್ತು ಭಟ್ಕಳದಲ್ಲಿ ತಾಲ್ಲೂಕಿನ ಸುರಂಗ ನಿರ್ಮಿಸುವುದು ಉದ್ದೇಶಿತ ಯೋಜನೆ ಒಳಗೊಂಡಿದೆ. ಚತುಷ್ಪಥದ ವ್ಯಾಪ್ತಿಯಲ್ಲಿ ದೇವಸ್ಥಾನ, ಚರ್ಚ್ ಮತ್ತು ಮಸೀದಿ ಸೇರಿದಂತೆ 139 ಧಾರ್ಮಿಕ ಕಟ್ಟಡಗಳು ಬರುತ್ತದೆ ಎನ್ನುವುದನ್ನು ಗುರುತಿಸಲಾಗಿದೆ.

ಚತುಷ್ಪಥ ಯೋಜನೆಯ ಪರಿಣಾಮ...
ಶಿರಸಿ: ಕುಂದಾಪುರದಿಂದ ಗೋವಾ ರಾಜ್ಯದ ಗಡಿ ಪ್ರದೇಶ ಮಾಜಾಳಿವರೆಗೆ ಉದ್ದೇಶಿತ 189 ಕಿ.ಮೀ. ಚತುಷ್ಪಥ ಹೆದ್ದಾರಿ ಯೋಜನೆಯಿಂದ ಜಿಲ್ಲೆಯ ಪರಿಸರದ ಮೇಲಾಗುವ ಪರಿಣಾಮದ ಕುರಿತು ಕುಮಟಾದ್ಲ್ಲಲಿ ಇದೇ 15ರಂದು ನಡೆಯಲಿರುವ ಸಾರ್ವಜನಿಕ ಅಹವಾಲು ಸಭೆಯಲ್ಲಿ ಹೆಚ್ಚಿನ ಜನ ಭಾಗವಹಿಸಿ ವಿರೋಧ ವ್ಯಕ್ತಪಡಿಸಬೇಕು ಎಂದು ಇಲ್ಲಿನ ಪರಿಸರ ಸಂರಕ್ಷಣಾ ಕೇಂದ್ರ ವಿನಂತಿಸಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕೇಂದ್ರ, `ಕರಾವಳಿ ತೀರದಲ್ಲಿ ಹಾದು ಬರುವ ಈ ಯೋಜನೆಯಿಂದ ಪಶ್ಚಿಮ ಕರಾವಳಿಯಲ್ಲಿನ ನದಿ ಮುಖಜ ಪ್ರದೇಶ, ಕಾಂಡ್ಲಾ ವನಗಳು ಹಾಗೂ ಜೀವ ವೈವಿಧ್ಯತೆಗೆ ಹೆಸರಾಗಿರುವ ಅರಣ್ಯ ಸಂಪತ್ತು ನಾಶವಾಗಲಿದೆ. ಕರಾವಳಿ ತೀರದಲ್ಲಿ ವಾಸಿಸುವ ಜನರ ಸಂಸ್ಕೃತಿಯನ್ನೇ ನಾಶಪಡಿಸಬಲ್ಲ ಎಲ್ಲ ಸೂಚನೆಗಳು ಈ ಯೋಜನೆಯ ಪರಿಣಾಮದಿಂದ ಸ್ಪಷ್ಟವಾಗುತ್ತದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT