ಭಟ್ಕಳ: ‘ಮನುಷ್ಯತ್ವವನ್ನು ಹೂರಣವಾಗಿಸಿಕೊಂಡ ಅದ್ಭುತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಹೆಸರಿನಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರ ಸ್ಥಾಪಿಸಬೇಕು’ ಎಂದು ಕುಮಟಾದ ಯಕ್ಷಗಾನ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಿ.ಎಲ್. ಹೆಗಡೆ ಒತ್ತಾಯಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಯಕ್ಷರಕ್ಷೆ, ಲಯನ್ಸ್ಕ್ಲಬ್ ಹಾಗೂ ಗೋಳಿಕುಂಬ್ರಿಯ ಮಹಿಷಮರ್ಧಿನಿ ಯಕ್ಷಗಾನ ಮಂಡಳಿಯ ಸಹಯೋಗದಲ್ಲಿ ಇತ್ತೀಚೆಗೆ ನಡೆದ ‘ಚಿಟ್ಟಾಣಿ ನುಡಿನಮನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಹಿಮ್ಮೇಳ ಹಾಗೂ ಮುಮ್ಮೇಳದಲ್ಲಿ ಎಷ್ಟೇ ಕಿರಿಯ ಕಲಾವಿದನಿದ್ದರೂ ಚಿಟ್ಟಾಣಿ ಅವರು ಕೊಂಚವೂ ಬೇಸರಿಸಿಕೊಳ್ಳದೇ ಮುಕ್ತವಾಗಿ ಅಭಿನಯಿಸುತ್ತಿದ್ದ ಮೇರು ಕಲಾವಿದರಾಗಿದ್ದರು’ ಎಂದು ಸ್ಮರಿಸಿದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ, ‘ಚಿಟ್ಟಾಣಿಯವರ ಪರಿಣಾಮಕಾರಿ ಅಭಿನಯ, ಅವರಲ್ಲಿದ್ದ ಜಾತ್ಯತೀತ ಕಲೆಯಿಂದಾಗಿ ಪ್ರೇಕ್ಷಕವರ್ಗ ಅವರನ್ನು ಆರಾಧ್ಯ ದೇವರಂತೆ ಕಂಡರು. ಜನಮಾನಸದಲ್ಲಿ ನೆಲೆನಿಂತ ಅವರಿಗೆ ವಿಶ್ವವಿದ್ಯಾಲಯಗಳು ಮರಣೋತ್ತರ ಗೌರವ ಡಾಕ್ಟರೇಟ್ ನೀಡಲು ಚಿಂತನೆ ನಡೆಸಬೇಕು’ ಎಂದರು.
ಯಕ್ಷರಕ್ಷೆ ಅಧ್ಯಕ್ಷ ಡಾ.ಐ.ಆರ್ ಭಟ್, ಆರ್ಎನ್ಎಸ್ ಶಿಕ್ಷಣ ಸಂಸ್ಥೆ ನಿರ್ದೇಶಕ ಎಂ.ವಿ ಹೆಗಡೆ, ಮಹಿಷಮರ್ಧಿನಿ ಯಕ್ಷಗಾನ ಮಂಡಳಿ ಅಧ್ಯಕ್ಷ ನಾಗರಾಜ ಮಧ್ಯಸ್ಥ, ಶಾರದಾ ದುರ್ಗಪ್ಪ ಗುಡಿಗಾರ ಚಿಟ್ಟಾಣಿಗೆ ನುಡಿನಮನ ಸಲ್ಲಿಸಿದರು. ಸಾಹಿತಿ ಸುರೇಶ ನಾಯ್ಕ ಹಾಗೂ ಕವಿ ಶ್ರೀಧರ ಶೇಟ್ ಅವರು ಚಿಟ್ಟಾಣಿಯವರ ಕುರಿತು ತಮ್ಮ ಸ್ವರಚಿತ ಹಾಗೂ ಮಾನಾಸುತರ ಚುಟುಕು ಕವನ ವಾಚಿಸಿ ಕಾವ್ಯ ನಮನ ಸಲ್ಲಿಸಿದರು. ದಿ.ದುರ್ಗಪ್ಪ ಗುಡಿಗಾರರ ಪುತ್ರಿ ಉಮಾ ಚಂದ್ರಕಾಂತ್ ಯಕ್ಷಗಾನದ ಪದ್ಯವನ್ನು ಹಾಡಿ ಗಾನ ನಮನ ಸಲ್ಲಿಸಿದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಿಕಾ ಹೆಗಡೆ ಪ್ರಾರ್ಥಿಸಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಸ್ವಾಗತಿಸಿದರು. ಕಾರ್ಯದರ್ಶಿ ಗಣೇಶ ಯಾಜಿ ವಂದಿಸಿದರು. ಶಿಕ್ಷಕ ಪರಮೇಶ್ವರ ನಾಯ್ಕ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.