ADVERTISEMENT

ಜನರಲ್ಲಿ ಹೆಚ್ಚಿದ ಪರ ಪರಿಸರ ಕಾಳಜಿ

ನಾಗೇಂದ್ರ ಖಾರ್ವಿ
Published 20 ಫೆಬ್ರುವರಿ 2012, 8:25 IST
Last Updated 20 ಫೆಬ್ರುವರಿ 2012, 8:25 IST

ಕಾರವಾರ: ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಪ್ರಕರಣಗಳನ್ನು ನ್ಯಾಯಾಂಗ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ರಾಷ್ಟ್ರದ ಪ್ರಥಮ `ಹಸಿರು ನ್ಯಾಯ ಮಂಡಳಿ~ಯು ಪುಣೆಯಲ್ಲಿ ಇಚೆಗಷ್ಟೇ ಉದ್ಘಾಟನೆಗೊಂಡಿದ್ದು ಮುಂಬರುವ ದಿನಗಳಲ್ಲಿ ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಗಂಭೀರ ಸ್ವರೂಪ ಪಡೆಯಲಿದೆ ಎಂದು ಹಸಿರು ವಕೀಲ ಎಂದೇ ಖ್ಯಾತಿ ಪಡೆದಿರುವ ರಿಕ್ವಿತ್ ದತ್ತಾ ತಿಳಿಸಿದರು.

ದಾಂಡೇಲಿ ತಾಲ್ಲೂಕಿನ ಕುಳಗಿ ನೇಚರ್ ಕ್ಯಾಂಪ್‌ನಲ್ಲಿ ಈಚೆಗೆ ನಡೆದ `ವನ್ಯಜೀವಿ ಕಾನೂನು, ಅನುಷ್ಠಾನ ಬಲವರ್ಧನೆ ಹಾಗೂ ವನ್ಯಜೀವಿ ವಿಧಿ ವಿಜ್ಞಾನ ಕಾರ್ಯಗಾರ~ಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪರಿಸರ ಪ್ರಕರಣಗಳು ಹೆಚ್ಚುತ್ತಿದ್ದು, ರಾಷ್ಟ್ರದ ವಿವಿಧ ಕಡೆ ಅರಣ್ಯ ಹಾಗೂ ಪರಿಸರ ಸಚಿವಾಲಯದ ಆರು ವಿಭಾಗೀಯ ಕಚೇರಿ ಸ್ಥಾಪಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.

ತಾಲ್ಲೂಕಿನ ಹಣಕೋಣ ಉಷ್ಣ ವಿದ್ಯುತ್ ಸ್ಥಾವರ, ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ, ಮಹ ದಾಯಿ ಅರಣ್ಯ ಕಣಿವೆ ಸಂರಕ್ಷಣೆ, ರಕ್ಷಿತ ಅರಣ್ಯ ಪ್ರದೇಶದಲ್ಲಿ ತುಮಕೂರು ವಿಶ್ವವಿದ್ಯಾಲಯ ಸ್ಥಾಪನೆ, ಬಳ್ಳಾರಿ ಗಣಿ ಪ್ರಕರಣ, ಉಡುಪಿ ಹಾಸನ ವಿದ್ಯುತ್ ಮಾರ್ಗ, ಚಾಮರಾಜ ನಗರ ರೈಲುಮಾರ್ಗ ಸೇರಿದಂತೆ ಕರ್ನಾಟಕದ ಪ್ರಮುಖ ಪ್ರಕರಣಗಳ ಬಗ್ಗೆ ವಕಾಲತ್ತು ನಡೆಸುತ್ತಿದ್ದೇನೆ ಎಂದರು.

ಟ್ರಾಫಿಕ್ ಇಂಡಿಯಾದ ಮುಖ್ಯಸ್ಥ ಸಮೀರ್ ಸಿನ್ಹಾ ವನ್ಯಜೀವಿ ಕಳ್ಳ ಸಾಗಾ ಣಿಕೆ ಕುರಿತು ಉಪನ್ಯಾಸ ನೀಡಿ, ದೇಶ ದಲ್ಲಿ ಸದ್ಯ 1800 ಹುಲಿ ಹಾಗೂ ಸುಮಾರು 10 ಸಾವಿರ ಚಿರತೆಗಳು ಮಾತ್ರ ಉಳಿದಿವೆ. ಇವುಗಳ ಸಂರಕ್ಷಣೆ ಯನ್ನು ಅರಣ್ಯ ಇಲಾಖೆ ಹಾಗೂ ಪರಿಸರ ಪರ ಸಂಘಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ ಎಂದರು.

ದೇಶದಲ್ಲಿ 1925 ಪೂರ್ವ 80 ಸಾವಿರ ಹುಲಿ, 1.5 ಲಕ್ಷ ಚಿರತೆ ಹಾಗೂ ಎರಡು ನರಿಗಳನ್ನು ಬೇಟೆ ಯಾಡಿ ಕೊಲ್ಲಲಾಗಿದೆ. ಪ್ರತಿ ಹುಲಿ ಬೇಟೆಗೆ ಬ್ರಿಟೀಷರು ರೂ. 150 ಬಹುಮಾನ ನೀಡುತ್ತಿದ್ದರು. 1950 ರಿಂದ 70 ರ ದಶಕಗಳ ವರೆಗೆ ಬೇಟೆ ನಿರಾತಂಕವಾಗಿ ಮುಂದುವರೆದಿತ್ತು ಎಂದರು. 

 1971ರಿಂದ ವನ್ಯ ಪ್ರಾಣಿಗಳ ಬೇಟೆ ನಿಷೇಧಿಸಲಾಯಿತು. 1972 ಲ್ಲಿ ವನ್ಯ ಜೀವಿ ಕಾಯಿದೆ ಹಾಗೂ 1973ರಲ್ಲಿ ಹುಲಿ ಯೋಜನೆ ಅನುಷ್ಟಾನ ಗೊಂಡಿತು. ಕಾನೂನುಗಳಿದ್ದರೂ ವನ್ಯ ಜೀವಿ ಬೇಟೆ ಹಾಗೂ ಕಳ್ಳ ಸಾಗಾಣಿಕೆ ಮುಂದುವರೆದಿದೆ. ಪ್ರಸಕ್ತ ವರ್ಷ 23 ಸಾವಿರ ಕೆ.ಜಿ .ಆನೆದಂತ ವಶಪಡಿಸಿ ಕೊಳ್ಳಲಾಗಿದೆ. 2011ರಲ್ಲಿ 2500 ಆನೆಗಳನ್ನು ದಂತಕ್ಕಾಗಿ ಕೊಲ್ಲಲಾಗಿದೆ. ಕಳೆದ 20 ವರ್ಷಗಳಲ್ಲಿ ಒಟ್ಟೂ 1.24 ಲಕ್ಷ ಕೆ.ಜಿಗಳಷ್ಟು ಆನೆದಂತ ವಶಪಡಿ ಕೊಳ್ಳಲಾಗಿದೆ ಎಂದು ಸಿನ್ಹಾ ನುಡಿದರು.

ಭಾರತೀಯ ವನ್ಯಜೀವಿ ತರಬೇತಿ ಕೇಂದ್ರದ ಮುಖ್ಯಸ್ಥ ಡಾ. ಎಸ್.ಪಿ ಗೋಯಲ್ ಮಾತನಾಡಿ, ದೇಶಾದ್ಯಂತ ಎಲ್ಲ ಅಭಯಾರಣ್ಯಗಳಲ್ಲಿರುವ ಹುಲಿ ಸಂತತಿಯ ಡಿಎನ್‌ಎ ಡಾಟಾಬೇಸ್ ಸಿದ್ದಗೊಳಿಸಲಾಗುತ್ತಿದ್ದು, ಈ ಪ್ರಕ್ರಿಯೆ ಉತ್ತರ ಭಾರತದಲ್ಲಿ ಬಹುತೇಕವಾಗಿ ಮುಗಿದಿದೆ. ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲೂ ಆರಂಭಿಸಲಾಗು ವುದು. ಈ ಯೋಜನೆಯಿಂದಾಗಿ ಬೇಟೆಗೆ ಕಡಿವಾಣ ಹಾಕಬಹುದಾಗಿದೆ ಎಂದರು.

ವಕೀಲ ಸೌರಭ ಶರ್ಮಾ ವನ್ಯಜೀವಿ ಪ್ರಕರಣಗಳ ಪ್ರಮುಖ ಹಂತಗಳನ್ನು ಅಧಿಕಾರಿಗಳಿಗೆ ವಿವರಿಸಿದರು. ರಾಜ್ಯದ ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಕೆ ಸಿಂಗ್ ಮಾತನಾಡಿ, ರಾಜ್ಯದಲ್ಲಿ ಈ ವರ್ಷ 12 ಆನೆಗಳು ವಿದ್ಯುತ್ ತಂತಿ ಸ್ಪರ್ಶ ದಿಂದಾಗಿ ಮರಣಹೊಂದಿವೆ. ಆನೆ ದಾಳಿಯಿಂದಾಗಿ ಒಟ್ಟೂ 17 ಜನರು ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದರು.

ಕೆನರಾ ವೃತ್ತದ ಸಂರಕ್ಷಣಾಧಿಕಾರಿ ಶಾಂತಕುಮಾರ, ದಾಂಡೇಲಿ-ಅಣಶಿ ವನ್ಯಜೀವಿ ವಿಭಾಗದ ಉಪಸಂರಕ್ಷಣಾ ಧಿಕಾರಿ ಡಾ. ಸುನೀಲ್ ಪನ್ವಾರ್ ಉಪ ಸಂರಕ್ಷಣಾಧಿಕಾರಿ ಕೆ. ಡಿ. ಉದುಪುಡಿ, ಡಿ. ವಿ. ಮಲ್ಲೇಶ್, ನಾಗರಾಜ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.