ADVERTISEMENT

ಜೀವನದಲ್ಲಿ ಪರಿವಾರ, ಪರಿಸರ ಮುಖ್ಯ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2011, 10:10 IST
Last Updated 17 ಫೆಬ್ರುವರಿ 2011, 10:10 IST

ಮುಂಡರಗಿ: ‘ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರಿತ್ಯದಿಂದ ಪರಿಸರ ತನ್ನ ಸಮತೋಲನೆಯನ್ನು ಕಳೆದುಕೊಳ್ಳುತ್ತಿದ್ದು, ನೂತನ ದಂಪತಿಗಳು ಮರಗಳನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕು’ ಎಂದು ಡಾ.ಅನ್ನದಾನೀಶ್ವರ ಸ್ವಾಮೀಜಿ ಸಲಹೆ ನೀಡಿದರು.

ಸ್ಥಳೀಯ ಜಗದ್ಗುರು ಅನ್ನದಾನೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಶ್ರಿಮಠದಲ್ಲಿ ಏರ್ಪಡಿಸಿದ್ದ ಉಚಿತ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

‘ವೀರಶೈವ ಹಾಗೂ ಲಿಂಗಾಯತ ಪದಗಳು ಒಂದೇ ಆಗಿದ್ದು ಅವುಗಳಲ್ಲಿ ಯಾವುದೆ ವ್ಯತ್ಯಾಸಗಳಿಲ್ಲ. ಆದ್ದರಿಂದ ಪ್ರಸ್ತುತ ಜಾರಿಯಲ್ಲಿರುವ ಜನಗಣತಿಯಲ್ಲಿ ಲಿಂಗಾಯತರು ಧರ್ಮದ ಕಾಲಂನಲ್ಲಿ ವೀರಶೈವ ಅಥವಾ ಲಿಂಗಾಯತ ಎಂದು ಬರೆಯಿಸಬೇಕು. ಉಪಜಾತಿ ಕಾಲಂನಲ್ಲಿ ತಮ್ಮ ಜಾತಿಯನ್ನು ನೊಂದಾಯಿಸಬೇಕು’ ಎಂದು ಅವರು ಮನವಿ ಮಾಡಿಕೊಂಡರು.

‘ಜೀವನದಲ್ಲಿ ಪರಿವಾರ ಮತ್ತು ಪರಿಸರ ಬಹು ಮುಖ್ಯವಾಗಿದ್ದು ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ನೂತನ ದಂಪತಿ  ಹಿರಿಯರನ್ನು ಉಪೇಕ್ಷಿಸಿ ಅವರಿಂದ ದೂರವಾಗದೆ ಅವರ ಜೊತೆ ಪ್ರೀತಿ ವಿಶ್ವಾಸದಿಂದ ಕೂಡಿ ಬಾಳಬೇಕು’ ಎಂದು ಬನ್ನಿಕೊಪ್ಪದ ಸುಜ್ಞಾನದೇವ ಶಿವಾಚಾರ್ಯ ಸ್ವಾಮಿಜಿ ಹೇಳಿದರು.

 ಡಾ.ಚನ್ನಮಲ್ಲ ಸ್ವಾಮೀಜಿ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಶಾಸಕ ರಾಮಣ್ಣ ಲಮಾಣಿ, ಬೆಂಗಳೂರಿನ ಚಿದ್ಘನ ಸ್ವಾಮೀಜಿ, ಚನ್ನವೀರ ದೇವರು ಮೊದಲಾದವರು ಮಾತನಾಡಿದರು. ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ದುಧನಿಯ ಶಾಂತಲಿಂಗ ಸ್ವಾಮಿಜಿ, ಹಿರೇಸಿಂದೋಗಿಯ ಚಿದಾನಂದ ಸ್ವಾಮೀಜಿ, ಮರೆಗುದ್ದಿಯ ಗುರುಪಾದ ಸ್ವಾಮೀಜಿ ಮೊದಲಾದವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಡಾ.ಅನ್ನದಾನೀಶ್ವರ ಸ್ವಾಮೀಜಿ ಯವರ ಸಾಹಿತ್ಯದ ಮೇಲೆ ಡಾಕ್ಟರೇಟ್ ಪದವಿ ಪಡೆದ ಗುಲಬರ್ಗಾದ ಡಾ.ಸುನೀತಾ ಪುರಾಣಿಕ ಇವರಿಗೆ ಅನ್ನದಾನೀಶ್ವರ ಪ್ರತಿಷ್ಠಾನ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಉಪನ್ಯಾಸಕ ಆರ್.ಎಲ್.ಪೋಲೀಸಪಾಟೀಲ ಸರ್ವರನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 19 ಜೋಡಿ ವಧು-ವರರು ನೂತನ ಜೀವನಕ್ಕೆ ಕಾಲಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.