ಶಿರಸಿ: ‘ಬೇಸಿಗೆ ರಜೆ ಕಳೆಯುವಷ್ಟರಲ್ಲಿ ಮಕ್ಕಳು ಯಾವುದಾದರೂ ರಚನಾತ್ಮಕ ಚಟುವಟಿಕೆಯಲ್ಲಿ ಪರಿಪೂರ್ಣತೆ ಹೊಂದಲಿ. ಪಾಲಕರು ಮಕ್ಕಳಿಗೆ ಶಾಲೆಯ ಕಲಿಕೆಗಿಂತ ಭಿನ್ನವಾದ ಸಂಗೀತ, ಚಿತ್ರಕಲೆ, ಚೆಸ್, ಈಜು ಅಥವಾ ಕಾಲು-ಅರ್ಧ-ಮುಕ್ಕಾಲು ಹೇಳುವ ಪರಿಪಾಠ ಬೆಳೆಸಿ. ಇಲ್ಲವಾದಲ್ಲಿ ಟಿವಿ ನೋಡುವುದರಲ್ಲೇ ಮಕ್ಕಳ ರಜೆ ಕಳೆದು ಹೋಗುತ್ತದೆ’ ಹೀಗೆಂದು ಹೇಳಿದವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ.
ಅವರು ಶುಕ್ರವಾರ ಏರ್ಪಾಟಾಗಿದ್ದ ತಾಲ್ಲೂಕಿನ ಪಂಚಲಿಂಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಪಠ್ಯ-ಪುಸ್ತಕಗಳ ಕೊರತೆಯಾಗುವುದಿಲ್ಲ. ಶೇಕಡಾ 75ರಷ್ಟು ಪಠ್ಯ ಪುಸ್ತಕಗಳು ಸಿದ್ಧಗೊಂಡಿದ್ದು, ಈ ತಿಂಗಳ ಕೊನೆಯಲ್ಲಿ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಪುಸ್ತಕ ಪೂರೈಕೆಯಾಗಲಿದೆ. ಶಾಲೆ ಪ್ರಾರಂಭವಾಗುವ ಹೊತ್ತಿಗೆ ಶಾಲೆಗಳಿಗೆ ವಿತರಣೆ ಮಾಡಲಾಗುವುದು ಎಂದರು.
ಶತಮಾನ, ಅರ್ಧ ಶತಮಾನ, 75 ಕಂಡ ಶಾಲೆಗಳ ಮಾಹಿತಿ ಸಂಗ್ರಹಿಸುವ ಜೊತೆಯಲ್ಲಿ ಸ್ಮರಣೆ ಮಾಡುವಂತೆ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ. ಶಾಲೆಯ ಇತಿಹಾಸ, ಶಾಲೆ ಪ್ರಾರಂಭಕ್ಕೆ ಹಿಂದಿನ ತಲೆಮಾರಿನವರ ಪ್ರಯತ್ನ ಅರಿಯುವ ಮೂಲಕ ಶಾಲೆಯೊಂದಿಗೆ ಭಾವನಾತ್ಮಕ ಸಂಬಂಧ ಬೆಳೆಯುವಂತಾಬೇಕು. ಶಾಲೆಯ ವಾತಾವರಣ ಉತ್ತಮವಾಗಿದ್ದರೆ ಇಡೀ ಊರಿನ ವಾತಾವರಣ ಉತ್ತಮವಾಗಿರುತ್ತದೆ. ಪ್ರತಿ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ರಚನೆಗೆ ಸೂಚನೆ ನೀಡಲಾಗಿದೆ. ಆ ಮೂಲಕ ಹಳೆ ವಿದ್ಯಾರ್ಥಿಗಳು ಶಾಲೆ ದತ್ತು ತೆಗೆದುಕೊಳ್ಳುವ ಕಾರ್ಯಕ್ರಮಕ್ಕೆ ಪ್ರೇರೇಪಣೆ ದೊರಕಬೇಕು ಎಂದು ಹೇಳಿದರು.
ಸುವರ್ಣ ಮಹೋತ್ಸವ ಸಮಿತಿ ಗೌರವಾಧ್ಯಕ್ಷ ಸುಬ್ರಾಯ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಡಿ.ಹೆಗಡೆ ನೂತನ ರಂಗಮಂದಿರ ಉದ್ಘಾಟಿಸಿದರು. ಹೆಗಡೆಕಟ್ಟಾ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಂ.ಪಿ.ಹೆಗಡೆ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.
ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಊರಿನ ಹಿರಿಯನ್ನು ಸನ್ಮಾನಿಸಲಾಯಿತು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಸುಮಂಗಲಾ ಭಟ್ಟ, ಉಪಾಧ್ಯಕ್ಷೆ ಸೀತು ಮರಾಠಿ, ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಕೆ.ಶಿವಕುಮಾರ, ಪಿಯುಸಿ ಕಾಲೇಜ್ ಪ್ರಾಚಾರ್ಯ ರಾಜೇಂದ್ರ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಆರ್.ಟಿ.ಹೆಗಡೆ ಸ್ವಾಗತಿಸಿದರು. ಗ.ನಾ. ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಆಕರ್ಷಕ ಯಕ್ಷ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.