ADVERTISEMENT

ದಾಸನಕಟ್ಟೆ ಕೆರೆ ಏರಿ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 8:51 IST
Last Updated 16 ಸೆಪ್ಟೆಂಬರ್ 2013, 8:51 IST

ಶಿರಸಿ: ತಾಲ್ಲೂಕಿನ ಬನವಾಸಿಯಿಂದ ಮಳಗಿಗೆ ತಲುಪುವ ರಸ್ತೆಯಲ್ಲಿ ನಡುವೆ ಇರುವ ದಾಸನಕಟ್ಟೆ ಕೆರೆ ಏರಿಯ ಮೇಲೆ ರಸ್ತೆ ಅಭದ್ರವಾಗಿದ್ದು, ಆದಷ್ಟು ಶೀಘ್ರ ದುರಸ್ತಿಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಕೆರೆಯ ಏರಿಯ ಮೇಲೆ ಹಾದು ಹೋಗುವ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ದಾಸನಕಟ್ಟೆ ಕೆರೆ ಏರಿಯ ಮೇಲೆ ಈ ರಸ್ತೆಗೆ ಯಾವುದೇ ಭದ್ರತೆ ಇಲ್ಲವಾಗಿದೆ. ಕೆರೆ ಏರಿಯ ಮೇಲೆ ನಿರ್ಮಾಣ ಮಾಡಿರುವ ರಸ್ತೆಯಲ್ಲಿ ಎರಡು ವಾಹನಗಳು ಸಾಗುವಾಗ ಬದಿಯಲ್ಲಿ ತುಸು ಎಚ್ಚರ ತಪ್ಪಿದರೂ ಅಪಾಯ ತಪ್ಪಿದ್ದಲ್ಲ. ಡಾಂಬರ್‌ ರಸ್ತೆಯಿಂದ ಕೆಳಗೆ ಮಣ್ಣು ಕುಸಿದಿದ್ದು, ವಿದ್ಯುತ್‌ ದೀಪದ ವ್ಯವಸ್ಥೆ ಇಲ್ಲದ ಇಂತಹ ಸ್ಥಳಗಳಲ್ಲಿ ರಾತ್ರಿ ವೇಳೆ ಅವಘಡ ಸಂಭವಿಸುವ ಮೊದಲು ಸಂಬಂಧಿತ ಇಲಾಖೆ ಇದನ್ನು ದುರಸ್ತಿಗೊಳಿಸಬೇಕು ಎಂದು ಸ್ಥಳೀಯ ಈರಪ್ಪ ನಾಯ್ಕ ಆಗ್ರಹಿಸಿದ್ದಾರೆ.

ಈ ಭಾಗದ ಕಾಳಂಗಿ–ಸಂತೊಳ್ಳಿ ರಸ್ತೆಯಲ್ಲಿ ಮಳೆಗಾಲದ ವೇಳೆ ರಸ್ತೆಯ ಮೇಲೆ ಮರವೊಂದು ಮುರಿದು ಬಿದ್ದಿತ್ತು. ರಸ್ತೆ ತೆರವುಗೊಳಿಸುವಾಗ ವಾಹನ ಸಂಚಾರಕ್ಕೆ ಅಗತ್ಯವಿರುವಷ್ಟು ಮಾತ್ರ ಮರದ ರೆಂಬೆ ಕಟಾವು ಮಾಡಲಾಗಿದೆ.

ಇನ್ನುಳಿದ ಬುಡಚಿಯನ್ನು ರಸ್ತೆ ಬದಿಯಲ್ಲಿ ಹಾಗೇ ಉಳಿಸಿದ್ದು, ಅನೇಕ ತಿಂಗಳು ಕಳೆದರೂ ಇದು ಯಥಾಸ್ಥಿತಿಯಲ್ಲಿದೆ. ರಸ್ತೆ ಪಕ್ಕದಲ್ಲೇ ಇರುವ ಈ ಬುಡಚಿ ರಾತ್ರಿ ಹೊತ್ತಿನಲ್ಲಿ ವಾಹನದ ಬೆಳಕಿಗೆ ಕಾಣದಿದ್ದರೆ ನೇರವಾಗಿ ವಾಹನಕ್ಕೆ ಬಡಿದು ಅಪಾಯವಾಗುವ ಸಾಧ್ಯತೆಗಳಿವೆ. ಇಂತಹ ಅರೆಬರೆ ಕೆಲಸ ಪೂರ್ಣಗೊಳಿಸುವ ಹೊಣೆ ಯಾರದ್ದು ಎಂದು ಪ್ರಶ್ನಿಸುತ್ತಾರೆ ಭೈರಾ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT