ADVERTISEMENT

ದೀಪಾವಳಿ: ಗೋವುಗಳಿಗೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2017, 7:12 IST
Last Updated 21 ಅಕ್ಟೋಬರ್ 2017, 7:12 IST

ಸಿದ್ದಾಪುರ: ‘ದೊಡ್ಡ ಹಬ್ಬ’ ಎಂದು ಕರೆಯುವ ದೀಪಾವಳಿಯನ್ನು ಶುಕ್ರವಾರ ತಾಲ್ಲೂಕಿನಾದ್ಯಂತ ಸಂಭ್ರಮ ಮತ್ತು ಸಡಗರದೊಂದಿಗೆ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಗೋವುಗಳಿಗೆ ವಿಶೇಷ ಪೂಜೆ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ಗ್ರಾಮೀಣ ಭಾಗದಲ್ಲಿ ಗೋಪೂಜೆಯ ಸಡಗರ ಗರಿಗೆದರಿತು. ದನ–ಕರುಗಳ ಕೊರಳ ಘಂಟೆಗಳ ಕಿಣಿ, ಕಿಣಿ ನಾದ ಎಲ್ಲೆಡೆ ಮಾರ್ದನಿಸಿತು.
ಬಾಸಿಂಗ ಕಟ್ಟಿದ ಎತ್ತುಗಳು ಗಮನ ಸೆಳೆದವು. ರೈತರು ತಮ್ಮ ಹಸು–ಕರು, ಎತ್ತು, ಎಮ್ಮೆಗಳನ್ನು ಬಣ್ಣ–ಬೇಗಡೆಯೊಂದಿಗೆ ವಿಶೇಷವಾಗಿ ಸಿಂಗರಿಸಿದರು.

ಅವುಗಳಿಗೆ ಸಿಹಿ ತಿನಿಸು ನೀಡಿ, ಕುಟುಂಬ ಸಮೇತವಾಗಿ ಪೂಜಿಸಿದರು. ನಂತರ ಭೂತನ ಕಟ್ಟೆ ಅಥವಾ ದೇವಾಲಯದ ಬಯಲಿಗೆ ಹಸು–ಕರುಗಳೊಂದಿಗೆ ಬಂದು, ಅವುಗಳನ್ನು ಬೆದರಿಸುವ ಸಂಪ್ರದಾಯ ನಡೆಯಿತು.

ADVERTISEMENT

ಇದರೊಂದಿಗೆ ರೈತರು ತಮ್ಮ ಕೃಷಿ ಪರಿಕರ, ವಾಹನ, ಭತ್ತದ ಕಣಜ, ತುಳಸಿಗೆ ಹಾಗೂ ಊರು ಕಾಯುವ ಹಲವು ದೈವಗಳಿಗೆ (ಭೂತ, ಚೌಡಿ ಎಂಬ ಹೆಸರಿನ ಕಲ್ಲುಗಳಿಗೆ) ಪೂಜೆ ಸಲ್ಲಿಸಿದರು. ಕೆಲ ಹಳ್ಳಿಗಳಲ್ಲಿ ಐದು ಹೊಸ ಭತ್ತದ ತೆನೆಗಳನ್ನು ತಂದು ಸುಲಿದು ಅಕ್ಕಿ ಮಾಡಿ, ಅನ್ನಕ್ಕೆ ಸೇರಿಸುವ ಸಂಪ್ರದಾಯ ಕೂಡ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.