ADVERTISEMENT

ನಗರಸಭೆಯಿಂದ ಕ್ಷೀಪ್ರ ಕಾರ್ಯಾಚರಣೆ

ಸ್ವಚ್ಛ ದಾಂಡೇಲಿ ಯೋಜನೆ....

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:49 IST
Last Updated 3 ಜುಲೈ 2013, 6:49 IST

ದಾಂಡೇಲಿ: ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ನಗರದ 31 ವಾರ್ಡ್‌ಗಳಲ್ಲಿ ನಗರಾಡಳಿತದಿಂದ ಕ್ಷೀಪ್ರ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.

ದಾಂಡೇಲಿಯನ್ನು ಪ್ರವಾಸೋದ್ಯಮದ ಆಕರ್ಷಕ ನಗರವನ್ನಾಗಿ ಮಾಡುವ ಯೋಜನೆಯ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳಿಂದ ನಗರದಾದ್ಯಂತ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ನಗರಸಭೆ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸುತ್ತಿದೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಡೆಂಗೆ ಪ್ರಕರಣಗಳ ನಿಯಂತ್ರಣದ ಕ್ರಮವಾಗಿ ನಗರದಾದ್ಯಂತ ಈಗಾಗಲೇ ಎಲ್ಲಾ ವಾರ್ಡ್‌ಗಳಲ್ಲಿ ಸೊಳ್ಳೆನಾಶಕ ಧೂಮೀಕರಣ ನಡೆಸಲಾಗುತ್ತಿದೆ.

ಸಾಂಕ್ರಾಮಿಕ ರೋಗಗಳ ಹರಡುವಿಕೆ ಕುರಿತು ನಗರಾಡಳಿತ ಕರಪತ್ರಗಳನ್ನು ವಿತರಿಸಿ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸಿದೆ.

ತ್ಯಾಜ್ಯನೀರು ಹೆಚ್ಚು ಕಾಲ ಒಂದೇ ಕಡೆ ನಿಲ್ಲದಂತೆ ಬಹುತೇಕ ಎಲ್ಲ ವಾರ್ಡ್‌ಗಳಲ್ಲಿ  ಶುಚಿತ್ವ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ತ್ಯಾಜ್ಯವನ್ನು ರಸ್ತೆಗೆ ಅಥವಾ ಉದ್ಯಾನವನಗಳಲ್ಲಿ ಚೆಲ್ಲದೇ ತ್ಯಾಜ್ಯ ಸಂಗ್ರಹಿಸುವ ಸ್ವಸಹಾಯ ಸಂಘದ ನೌಕರರಿಗೆ ಪ್ರತಿದಿನ ನೀಡಲು ಸಾರ್ವಜನಿಕರಿಗೆ ಸೂಚಿಸಲಾಗಿದೆ.

ಇನ್ನೂ ಅನೇಕ ತುರ್ತು ಸಂದರ್ಭಗಳಲ್ಲಿ ತ್ಯಾಜ್ಯವನ್ನು ದಾಂಡೇಲಿ ಹೊರವಲಯದ ಹೊಂಡಗಳಿಗೆ ಹಾಕಿ ರೋಗಗಳು ಹರಡದಂತೆ ಎಲ್ಲ ಕಡೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಸೆನೆಟರಿ ವಿಭಾಗದ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ನಿತ್ಯವೂ ನಗರದಲ್ಲಿ ಕಸ ಸಂಗ್ರಹವಾಗುವ ಸ್ಥಳಕ್ಕೆ ತೆರಳಿ ಸ್ವಚ್ಛತಾ ಕಾರ್ಯ ಕೈಗೊಂಡಿದೆ.   

ನಗರವನ್ನು ಸ್ವಚ್ಛವಾಗಿಡುವಲ್ಲಿ ಸಾರ್ವಜನಿಕರು ನಗರಾಡಳಿತದೊಂದಿಗೆ ಸಹಕರಿಸಬೇಕೆಂದು ಹಿರಿಯ ಆರೋಗ್ಯ ನಿರೀಕ್ಷಕ ಎಸ್.ಜಿ.ಗೋಸಾವಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.