ಶಿರಸಿ: ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಮಗ ಪ್ರಶಾಂತ ದೇಶಪಾಂಡೆ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿರುವ ಸುದ್ದಿ ಹೊರಬೀಳುತ್ತಿದ್ದಂತೆ ಬೂದಿ ಮುಚ್ಚಿದ ಕೆಂಡದಂತಿದ್ದ ನಾಮಧಾರಿ ಸಮುದಾಯದ ಅಸಮಾಧಾನ ಸ್ಫೋಟಗೊಂಡಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ, ನಾಮಧಾರಿ ಸಮುದಾಯದ ಭೀಮಣ್ಣ ನಾಯ್ಕ ಅವರಿಗೆ ಟಿಕೆಟ್ ಕೊಡಿಸುವಲ್ಲಿ ವಿಫಲರಾಗಿದ್ದ ದೇಶಪಾಂಡೆ ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಹೇಗೆ ಟಿಕೆಟ್ ಗಿಟ್ಟಿಸಿಕೊಂಡರು ಎಂಬುದು ಈ ಅಸಮಾಧಾನಕ್ಕೆ ಮೊದಲ ಕಾರಣ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ, ವಿಧಾನ ಪರಿಷತ್ ಸದಸ್ಯ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಲ್ಲ ಹುದ್ದೆಗಳೂ ಹಳಿಯಾಳಕ್ಕೆ ದೊರೆತಿವೆ. ಈಗ ಲೋಕಸಭೆ ಟಿಕೆಟ್ ಸಹ ಹಳಿಯಾಳದ ಪಾಲಾಗಿದ್ದು, ದೇಶಪಾಂಡೆ ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂಬುದು ಇನ್ನೊಂದು ಕಾರಣ.
‘ಜಿಲ್ಲೆಯಲ್ಲಿ ಪ್ರಬಲವಾಗಿರುವ ನಾಮಧಾರಿ, ಹಾಲಕ್ಕಿ, ದಲಿತ, ಮುಸ್ಲಿಮ್ ಸಮುದಾಯದ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಬಹುದಿತ್ತು. ಮುಸ್ಲಿಮರನ್ನು ಮೊದಲಿನಿಂದಲೂ ನಿರ್ಲಕ್ಷಿಸಿರುವ ಜಿಲ್ಲೆಯ ಹಿರಿಯ ನಾಯಕರು ನಾಮಧಾರಿ ಸಮುದಾಯಕ್ಕೆ ಕುರ್ಚಿ ಕೊಟ್ಟ ನಾಟಕವಾಡಿ ಅಧಿಕಾರ ಕೇಂದ್ರೀಕರಿಸಿಟ್ಟು ಕೊಂಡಿದ್ದಾರೆ. ನಾಮಧಾರಿಗಳಲ್ಲೇ ಒಡಕು ಸೃಷ್ಟಿಸಿ ಸಮುದಾಯ ಪ್ರಬಲವಾಗದಂತೆ ವ್ಯವಸ್ಥಿತ ತಂತ್ರ ರೂಪಿಸಿದ್ದಾರೆ’ ಎಂದು ಕಾರವಾರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
‘ನಾಮಧಾರಿ ಸಮುದಾಯದ ಬಲ ಗೊತ್ತಿರುವ ಮೂರು ಪ್ರಮುಖ ಪಕ್ಷಗಳು ನಾಮಧಾರಿ ಸಮುದಾಯಕ್ಕೆ ಜಿಲ್ಲಾ ಘಟಕದ ಅಧ್ಯಕ್ಷ ಹುದ್ದೆ ನೀಡಿ ಮಣೆ ಹಾಕಿವೆ. ಆದರೆ ಪಕ್ಷ ಸಂಘಟನೆಗೆ ನಾಮಧಾರಿಗಳನ್ನು ಬಳಸಿಕೊಂಡು ಅಧಿಕಾರದಿಂದ ಅವರನ್ನು ದೂರ ಇಡಲಾಗಿದೆ. ನಾಮಧಾರಿ ಸಮುದಾಯ ನಾಯಕರು ಇದನ್ನು ಅರಿತುಕೊಳ್ಳಬೇಕಾಗಿದೆ’ ಎಂದು ಅವರು ಅಸಮಾಧಾನ ಬಹಿರಂಗಗೊಳಿಸಿದರು.
ಆಗಿಲ್ಲದ ತಾಕತ್ತು ಈಗೆಲ್ಲಿಂದ ಬಂತು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಭೀಮಣ್ಣ ನಾಯ್ಕ ಶಿರಸಿ–ಸಿದ್ದಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಆಗಿದ್ದರು. ಅಂತಿಮ ಕ್ಷಣದವರೆಗೂ ನಿರೀಕ್ಷೆಯಲ್ಲಿದ್ದ ಭೀಮಣ್ಣ ಅವರಿಗೆ ಟಿಕೆಟ್ ಕೈತಪ್ಪಿತು. ಆಗ ಉಂಟಾಗಿದ್ದ ನಾಮಧಾರಿ ಸಮುದಾಯದ ಮುನಿಸು ಈಗ ಪ್ರಕಟಗೊಂಡಿದೆ.
‘ಅಂದು ವಿಧಾನಸಭೆಗೆ ಟಿಕೆಟ್ ಕೊಡಿಸುವಲ್ಲಿ ಸೋತಿದ್ದ ದೇಶಪಾಂಡೆ ಈಗ ತಮ್ಮ ಪುತ್ರನಿಗೆ ಲೋಕಸಭೆ ಟಿಕೆಟ್ ತರುವಲ್ಲಿ ಮಾಡಿದ ಗಿಮಿಕ್ ಏನು? ತೀವ್ರ ಲಾಬಿ ಮಾಡಿದ್ದ ರಾಜಸ್ತಾನದ ರಾಜ್ಯಪಾಲೆ ಮಾರ್ಗರೆಟ್ ಆಳ್ವ ಅವರಿಗೆ ತಮ್ಮ ಮಗನಿಗೆ ಟಿಕೆಟ್ ಕೊಡಿಸಲು ಸಾಧ್ಯವಾಗಲಿಲ್ಲ. ಹಾಗಿದ್ದರೆ ಆಳ್ವಗಿಂತ ದೇಶಪಾಂಡೆಗೆ ಹೈಕಮಾಂಡ್ ಮಟ್ಟದಲ್ಲಿ ಹೆಚ್ಚು ವಶೀಲಿ ಇದ್ದ ಹಾಗಾಯಿತು. ವಿಧಾನಸಭೆ ಚುನಾವಣೆ ಹೊತ್ತಿಗೆ ಇಲ್ಲದ ತಾಕತ್ತು ದೇಶಪಾಂಡೆಗೆ ಈಗ ಎಲ್ಲಿಂದ ಬಂತು’ ಎಂದು ಹೆಸರು ಹೇಳಲಿಚ್ಛಿಸದ ಸಿದ್ದಾಪುರದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಖಡಕ್ ಆಗಿ ಪ್ರಶ್ನಿಸಿದರು.
‘ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಜೆ.ಡಿ.ನಾಯ್ಕ ಸೋಲಿಸುವಲ್ಲಿ ದೇಶಪಾಂಡೆ ಬಣ ತೆರೆಮರೆಯಲ್ಲಿ ಕಾರ್ಯತಂತ್ರ ಹೆಣೆದಿದ್ದು ಗುಟ್ಟಾಗಿ ಉಳಿಯಲಿಲ್ಲ. ಶಿರಸಿ–ಸಿದ್ದಾಪುರದಲ್ಲಿ ಭೀಮಣ್ಣ ಅವರಿಗೆ ಟಿಕೆಟ್ ದೊರೆಯಲಿಲ್ಲ. ನಾಮಧಾರಿಗಳ ಬೆಳವಣಿಗೆಗೆ ಅವಕಾಶ ನೀಡದ ನಾಯಕರ ಕಣ್ಣಿಗೆ ಸುಣ್ಣ ಒರೆಸುವ ತಂತ್ರ ಸಹಿಸಲು ಸಾಧ್ಯವಿಲ್ಲ’ ಎಂದು ಶಿರಸಿಯ ನಾಮಧಾರಿ ಸಮುದಾಯದ ಕಾಂಗ್ರೆಸ್ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ ಜೊತೆ ಅಳಲು ಹೇಳಿಕೊಂಡರು.
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ 1.54 ಲಕ್ಷ ನಾಮಧಾರಿ ಮತಗಳಿದ್ದು, ನಿರ್ಣಾಯಕ ಮತ ಹೊಂದಿರುವ ಸಮುದಾಯಗಳಲ್ಲಿ ಒಂದಾಗಿರುವ ನಾಮಧಾರಿಗಳಲ್ಲಿ ಉಂಟಾಗಿರುವ ಅಸಮಾಧಾನ ಶಮನ ಮಾಡುವ ಸವಾಲು ದೇಶಪಾಂಡೆ ಮುಂದಿದೆ.
ಪಕ್ಷದ ತೀರ್ಮಾನಕ್ಕೆ ಬದ್ಧ
ನಾಮಧಾರಿಗಳಲ್ಲಿ ಭುಗಿಲೆದ್ದಿರುವ ಅಸಮಾಧಾನದ ಕುರಿತು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಭೀಮಣ್ಣ ನಾಯ್ಕ ಅವರನ್ನು ಪ್ರಶ್ನಿಸಿದಾಗ, ‘ಪಕ್ಷದ ತೀರ್ಮಾನಕ್ಕೆ ನಾವು ಬದ್ಧರಾಗಿದ್ದು, ಪಕ್ಷ ಆಯ್ಕೆ ಮಾಡಿರುವ ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಶ್ರಮಿಸುತ್ತೇವೆ. ಯಾವುದೇ ಭಿನ್ನಾಭಿಪ್ರಾಯ ಇಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.