ಗೋಕರ್ಣ: ಭಾನುವಾರ ರಥೋತ್ಸವದ ಸಮಯದಲ್ಲಿ ಆಕ್ಸೆಲ್ ತುಂಡಾಗಿ ನಿಂತ ರಥದ ಕುರಿತು ವರದಿ ನೀಡಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಶಿಕಾಂತ ಕೋಳೆಕರ್ ಸೋಮವಾರ ರಥದ ಚಕ್ರವನ್ನು ಪರಿಶೀಲಿಸಿದರು.
ಎರಡು ಚಕ್ರಗಳ ಮಧ್ಯದ ಬಿಮ್ ಬಿರುಕು ಬಿಟ್ಟು ಒಂದು ತುದಿ ಮುರಿದ ಕಾರಣ ಬಿಮ್ಗೆ ಮತ್ತು ಚಕ್ರಕ್ಕೆ ಇದ್ದ ಇಂಟರಲಾಕ್ ಕೀ ತುಂಡಾಗಿ ಮೇಲೆ ಸರಿದಿದೆ. ಇದೇ ಕಾರಣದಿಂದ ಚಕ್ರ ರಥಕ್ಕೆ ವಾಲಿದೆ ಎಂದು ತಿಳಿಸಿದರು.
‘ಫೆ.19ರಂದು ರಥ ಪರಿಶೀಲಿಸಿ ಕೆಲವು ಷರತ್ತುಗಳೊಂದಿಗೆ ರಥ ಎಳೆಯಬಹುದು ಎಂದು ತಿಳಿಸಿದ್ದೆ. ರಥಕ್ಕೆ ನಟ್ ಬೋಲ್ಟ್ ಗಳ ಸಿಸ್ಟಮ್ ಇಲ್ಲ. ಇಂಟರಲಾಕ್ ಇದ್ದು ಅದನ್ನು ತೆಗೆಯುವುದು ಅಸಾಧ್ಯದ ಮಾತು’ ಎಂದು ಅವರು ಹೇಳಿದರು.
ರಥೋತ್ಸವದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ರಥಬೀದಿಯ ಮಧ್ಯದಲ್ಲಿಯೇ ರಥ ನಿಂತಿರುವುದರಿಂದ ಯಾವುದೇ ವಾಹನ ಚಲಿಸದಂತೆ ಆಗಿದೆ. ರಥೋತ್ಸವ ಅಪೂರ್ಣಗೊಂಡಿರುವುದು ಅಸಂಖ್ಯಾತ ಶಿವ ಭಕ್ತರಿಗೆ ಬೇಸರ ಉಂಟುಮಾಡಿದೆ.
ಆಡಳಿತ ಮಂಡಳಿ ಹೇಳಿಕೆ
‘ಮಹಾರಥೋತ್ಸವದ ಮಧ್ಯೆ ರಥದ ಚಲನೆಗೆ ತೊಂದರೆಯಾದ್ದರಿಂದ ಮಧ್ಯಂತರದಲ್ಲಿ ನಿಲ್ಲಿಸಲಾಯಿತು. ಇದೊಂದು ಆಕಸ್ಮಿಕ ಘಟನೆ. ಆದರೆ ಈ ಘಟನೆ ನಡೆದರೂ ಯಾವುದೇ ಅವಘಡ ನಡೆಯದೇ ಭಗವಂತನೇ ರಕ್ಷಿಸಿದ ಎನ್ನುವುದು ಸಮಾಧಾನದ ಸಂಗತಿ.
ಈ ಮಹಾರಥೋತ್ಸವು ಒಂದು ಸಂಘಟಿತ ಕಾರ್ಯಕ್ರಮ. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಾಕಷ್ಟು ಎಚ್ಚರಿಕೆ ಯನ್ನು ವಹಿಸಿದಾಗಿಯೂ ಮಾನವನ ಶಕ್ತಿ ಮೀರಿ ಆದ ಅನಾನುಕೂಲದಿಂದ ಭಕ್ತರು ಗೊಂದಲಗೊಳ್ಳವ ಅಗತ್ಯವಿಲ್ಲ’ ಎಂದು ಆಡಳಿತ ಮಂಡಳಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.