ಶಿರಸಿ: ಲೋಕಸಭೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಕರೆದಿದ್ದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನಾ ಸಭೆ 15 ನಿಮಿಷಗಳಲ್ಲಿ ಮುಕ್ತಾಯ ಗೊಂಡಿತು.
ಚುನಾವಣೆ ಘೋಷಣೆಯಾಗಬಹು ದೆಂಬ ಆತಂಕದಲ್ಲಿ ಸರಿಯಾಗಿ 11 ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಒಂದೆರಡು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸುವಷ್ಟರದಲ್ಲಿ ನೀತಿ ಸಂಹಿತೆ ಜಾರಿಯಾದ ಮಾಹಿತಿ ಲಭ್ಯವಾಯಿತು. ತಕ್ಷಣವೇ ಸಭೆಯನ್ನು ಮೊಟಕುಗೊಳಿಸಲಾಯಿತು.
‘ತಾಲ್ಲೂಕು ಪಂಚಾಯ್ತಿ ಯೋಜನೆ ಅಡಿಯಲ್ಲಿ ವಿವಿವಿಧ ಇಲಾಖೆಗಳು ಕೈಗೆತ್ತಿಕೊಂಡಿರುವ ಕಾಮಗಾರಿಗಳ ಬಿಲ್ ಅನ್ನು ಇದೇ 29ರ ಒಳಗಾಗಿ ಸಂಬಂಧಿಸಿದ ವಿಭಾಗಕ್ಕೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು’ ಎಂದು ಅಧ್ಯಕ್ಷ ಗುರುಪಾದ ಹೆಗಡೆ ಸೂಚಿಸಿದರು.
‘ತಾಲ್ಲೂಕಿನ ಗದ್ದೆಮನೆ ಸಮೀಪ ವಿದ್ಯುತ್ ವಿತರಕ ದಲ್ಲಿ ಸಮಸ್ಯೆ ಉಂಟಾಗಿದ್ದು, ತಕ್ಷಣ ಸರಿಪಡಿಸಬೇಕು. ಅಗತ್ಯವಿದ್ದಲ್ಲಿ ಹೊಸ ವಿತರಕ ಅಳವಡಿಸಬೇಕು’ ಎಂದು ಅವರು ಹೆಸ್ಕಾಂ ಅಧಿಕಾರಿಗೆ ತಿಳಿಸಿದರು.
‘ತಾಲ್ಲೂಕಿಗೆ ಮುದ್ರಾಂಕ ಶುಲ್ಕದಿಂದ ಬಂದಿರುವ ₨ 37 ಲಕ್ಷ ಮೊತ್ತ ಬಾಕಿ ಉಳಿದಿದ್ದು, ಸದ್ಯ ಈ ಹಣ ಬಳಕೆ ಸಾಧ್ಯವಿಲ್ಲ. ಲೋಕಸಭೆ ಚುನಾವಣೆ ನಂತರದಲ್ಲಿ ಇದನ್ನು ಸದ್ಬಳಕೆ ಮಾಡಿಕೊಳ್ಳಬಹುದು’ ಎಂದರು.
‘ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳ ಜಾತಿವಾರು ಮಾಹಿತಿ ಸಂಗ್ರಹ ಮಾಡುತ್ತಿರುವುದು ಯಾಕೆ’ ಎಂದು ಉಪಾಧ್ಯಕ್ಷ ಸಂತೋಷ ಗೌಡರ್ ಪ್ರಶ್ನಿಸಿದರು. ‘ತಹಶೀಲ್ದಾರ್ ಕಚೇರಿಯ ಸೂಚನೆ ಯಂತೆ ಮಕ್ಕಳ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅರ್ಜಿ ತುಂಬಿಸಿಕೊಳ್ಳಲಾಗುತ್ತಿದೆ’ ಎಂದು ಅಧಿಕಾರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.