ADVERTISEMENT

ನೀರಾವರಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2011, 10:00 IST
Last Updated 10 ಫೆಬ್ರುವರಿ 2011, 10:00 IST

ಮುಂಡಗೋಡ:  ಚಿಗಳ್ಳಿ ಜಲಾಶಯದ ಎಡದಂಡೆ ಕಾಲುವೆಯಿಂದ ತಮ್ಮ ಗ್ರಾಮದ ಹೊಲಗಳಿಗೆ ನೀರು ಬಿಡುತ್ತಿಲ್ಲ ಎಂದು ಆರೋಪಿಸಿ ತಾಲ್ಲೂಕಿನ ಮುಡಸಾಲಿ ರೈತರು ಬುಧವಾರ ಸಣ್ಣ ನೀರಾವರಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿದು ಪ್ರತಿಭಟಿಸಿದರು.400 ಎಕರೆ ಪ್ರದೇಶಕ್ಕೆ ನೀರುಣಿಸುವ ಚಿಗಳ್ಳಿ ಜಲಾಶಯದ ಎಡದಂಡೆ ಕಾಲುವೆಯಿಂದ ಕಳೆದ 15ದಿನಗಳಿಂದ ಹಗಲಿನಲ್ಲಿ ಮಾತ್ರ ನೀರು ಬಿಟ್ಟು ರಾತ್ರಿ ಸಮಯದಲ್ಲಿ ಬಂದ್ ಮಾಡುತ್ತಾರೆ. ಇದರಿಂದ ಇದುವರೆಗೆ ಕೇವಲ 10ಎಕರೆಗೆ ಮಾತ್ರ ನೀರು ಹಾಯಿಸಲ್ಪಟ್ಟಿದೆ. ಆದರೆ ಬಲದಂಡೆ ಕಾಲುವೆಯಿಂದ ಚಿಗಳ್ಳಿ ಭಾಗದ ರೈತರಿಗೆ ಸಂಪೂರ್ಣವಾಗಿ ನೀರು ಹಾಯಿಸುತ್ತಿದ್ದು ಮುಡಸಾಲಿ ರೈತರಿಗೆ ಈ ರೀತಿ ಅನ್ಯಾಯ ಮಾಡಲಾಗುತ್ತಿದೆ ಎಂದು ರೈತರು ಆರೋಪಿಸಿದರು.

 ಕೆಲವು ವ್ಯಕ್ತಿಗಳ ಪ್ರಚೋದನೆಯಿಂದ ಅಧಿಕಾರಿಗಳು ಈ ರೀತಿ ಅನ್ಯಾಯ ಮಾಡುತ್ತಿದ್ದು ಇಂತಹ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವರೆಗೂ ಪ್ರತಿಭಟನೆ ನಡೆಸುವುದಾಗಿ ರೈತರು ಪಟ್ಟು ಹಿಡಿದರು. ಸಣ್ಣ ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್ ಎ.ಎಸ್. ಕಾನಳ್ಳಿ ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಚರ್ಚಿಸಿದರು. ಇದುವರೆಗೂ ಗೇಟ್ ಬಂದ್ ಮಾಡುವಂತೆ ಸೂಚನೆ ನೀಡಿಲ್ಲ. ಜಲಾಶಯದ ಗೇಟ್ ಯಾರು ಬಂದ್ ಮಾಡುತ್ತಾರೋ ಅವರ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.

ಜಲಾಶಯದ ಗೇಟ್‌ನ ಬೀಗವನ್ನು ಊರ ಪ್ರಮುಖರ ಬಳಿ ನೀಡುವದಾಗಿ ಅವರು  ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಮಂಜುನಾಥ ಜಾಧವ, ಪರುಶುರಾಮ ತಡಸದ, ಮಂಜುನಾಥ ಕಳಸಾಪುರ, ಜಗನ್ನಾಥ ಟೋಪೋಜಿ, ಪರುಶುರಾಮ ಹನಕನಳ್ಳಿ, ಶಿವಪ್ಪ ಹನಮಾಪುರ ಇತರರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.