ADVERTISEMENT

ಪುತ್ಥಳಿ ನಿರ್ಮಾಣಕ್ಕೆ ಆಗ್ರಹ

ದಾಂಡೇಲಿ: ಮರಾಠ ಮುಖಂಡರಿಂದ ಧರಣಿ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2018, 11:07 IST
Last Updated 22 ಮಾರ್ಚ್ 2018, 11:07 IST

ದಾಂಡೇಲಿ: ನಗರದ ಸೋಮಾನಿ ವೃತ್ತದ ಬಳಿ ಶಿವಾಜಿ ಪುತ್ಥಳಿ ನಿರ್ಮಾಣಕ್ಕೆ ಅನುಮತಿ ನೀಡಬೇಕೆಂದು ನಗರದಲ್ಲಿ ಮರಾಠ ಮುಖಂಡರು ಧರಣಿ ನಡೆಸಿದರು.

ಸೋಮಾನಿ ವೃತ್ತದ ಬದಿಯ ಖಾಲಿ ಜಾಗದಲ್ಲಿ ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ಒಪ್ಪಿಗೆ ನೀಡಿ, ಅನುಮತಿಗಾಗಿ ಜಿಲ್ಲಾಧಿಕಾರಿಗೆ ಕೋರಿಕೆ ಸಲ್ಲಿಸಿದ್ದರು. ಆದರೆ, ಇದುವರೆಗೆ ಜಿಲ್ಲಾಧಿಕಾರಿ ಅನುಮತಿ ನೀಡದೇ ಇರುವುದಕ್ಕೆ ಮರಾಠ ಮುಖಂಡ ವಿಶ್ವನಾಥ ಜಾಧವ ಆಕ್ಷೇಪಿಸಿದರು. ಸ್ಥಳೀಯ ಮರಾಠ ಸಮಾಜದ ಉಪಾಧ್ಯಕ್ಷರಾದ ವಿಠ್ಠಲ ಬೈಲೂಕರ್, ಮುಖಂಡರಾದ ನಗರಸಭೆಯ ಸದಸ್ಯ ರವಿ ಸುತಾರ, ನಮಿತಾ ಹಳದನಕರ್, ಜಿ.ಆರ್ ಪಾಟೀಲ, ಸುನಿಲ ಸೋಮನಾಚೆ, ಚಂದನ್ ಮೊರೆ, ಮಂಜುಳಾ ನಾಕಾಡೆ ಇದ್ದರು.

ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ತಂಗಳ, ನಗರಸಭೆಯ ಸದಸ್ಯೆ ಯಾಸ್ಮಿನ್ ಕಿತ್ತೂರ, ಮುಸ್ತಾಕ್ ಮಿಶ್ರಿಕೋಟಿ, ಮರಾಠ ಮುಖಂಡರನ್ನು  ಭೇಟಿಯಾಗಿ, ಸಚಿವ ಆರ್.ವಿ. ದೇಶಪಾಂಡೆಯವರು ಕೇವಲ ಶಿವಾಜಿ ಪುತ್ಥಳಿ ಅಷ್ಟೇ ಅಲ್ಲ ಇತರೆ ಧರ್ಮಗಳ ಮಹಾಪುರುಷರ ಕೆಲ ಮೂರ್ತಿಗಳ ನಿರ್ಮಾಣಕ್ಕೂ ಸರ್ಕಾರದ ನಿಯಮಾನುಸಾರ ಪ್ರಯತ್ನಿಸುವ ಭರವಸೆಯನ್ನು ನೀಡಿದ್ದಾರೆ. ಈ ಕುರಿತು ಕಾಲಾ
ವಕಾಶ ನೀಡಬೇಕೆಂದು ಕೋರಿದರು.

ADVERTISEMENT

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವಿ.ವಿ ನಕುಲ ಮಾತನಾಡಿ, ಪುತ್ಥಳಿ ಪ್ರತಿಷ್ಠಾಪನೆಗೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪದೇ-ಪದೇ ಪ್ರತಿಭಟನೆ ನಡೆಸುವುದು ಸರಿಯಲ್ಲ. ಸರ್ಕಾರದ ಮೇಲಧಿಕಾರಿಗಳ ಆದೇಶ ಪಾಲಿಸಬೇಕಾಗುತ್ತದೆ. ಆದ್ದರಿಂದ ಧರಣಿಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು. ನಗರಸಭಯೆ ಆಯುಕ್ತ ಆರ್.ವಿ ಜತ್ತಣ್ಣ, ತಹಶೀಲ್ದಾರ ಶೈಲೇಂದ್ರ ಪರವಾರ ಉಪಸ್ಥಿತರಿದ್ದರು. ಸಂಜೆ ವೇಳೆಗೆ ಧರಣಿಯನ್ನು ಕೈಬಿಡಲಾಯಿತು.

ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಲಾಗುವುದು. ಶಿವಾಜಿ ಪುತ್ಥಳಿ ಪ್ರತಿಷ್ಠಾಪನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು. ಈ ಬಗ್ಗೆ ಯಾವುದೇ ಗೊಂದಲ ಬೇಡ, ಎಲ್ಸರೂ ಸಹಕರಿಸಬೇಕೆಂದು ಸಚಿವ ದೇಶಪಾಂಡೆಯವರು ದೂರವಾಣಿ ಮೂಲಕ ಮನವಿ ಮಾಡಿದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಹಿಂದೂ ಧರ್ಮ ರಕ್ಷಕ ಶಿವಾಜಿ ಪುತ್ಥಳಿಯ ಸ್ಥಾಪನೆಗೆ ವಿನಾಕಾರಣ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ಬಸವರಾಜ ಕಲಶೆಟ್ಟಿ ಪತ್ರಿಕಾ ಗೋಷ್ಠಿಯಲ್ಲಿ ಆರೋಪಿಸಿದರು. ಶಿವಾಜಿಯ ಪುತ್ಥಳಿ ಪ್ರತಿಷ್ಠಾಪನೆಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು. ಸಚಿವರು ಮೂರ್ತಿ ಪ್ರತಿಷ್ಠಾಪನೆಗೆ ಅನುವು ಮಾಡಿ ಕೊಡದಿದ್ದರೆ ಬರುವ ಚುನಾವಣೆಯಲ್ಲಿ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.