ಕಾರವಾರ: ‘ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳ ಅನಾವರಣಕ್ಕೆ ಶಿಬಿರಗಳು ಸಹಕಾರಿಯಾಗಿವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಜೇಂದ್ರ ಬೇಕಲ್ ಹೇಳಿದರು.
ಸರ್ಕಾರಿ ಬಾಲಕಿಯರ ಬಾಲಮಂದಿರದ ಮಕ್ಕಳಿಗಾಗಿ ಇತ್ತೀಚಿಗೆ ಹಮ್ಮಿಕೊಂಡಿದ್ದ ವ್ಯಕ್ತಿತ್ವ ವಿಕಸನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಬಾಲವಿಕಾಸ ಅಕಾಡೆಮಿಯು 3 ವರ್ಷಗಳಿಂದ ಹಮ್ಮಿಕೊಳ್ಳುತ್ತಿರುವ ಇಂಥ ಶಿಬಿರಗಳು ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ’ ಎಂದರು.
ಬಂದರು ಅಧಿಕಾರಿ ಸುರೇಶ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಮನುಷ್ಯನಲ್ಲಿ ದೈವ ಪ್ರೀತಿ, ಪಾಪ ಪ್ರಜ್ಞೆ ಹಾಗೂ ಕಾರ್ಯ ಕ್ಷಮತೆ ಇರಬೇಕು. ಆಗ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ಸದೃಢವಾಗಿ, ಸಮಾಜಮುಖಿಯಾಗಿ ನಿಲ್ಲುತ್ತದೆ. ಪ್ರತಿಯೊಬ್ಬರಲ್ಲಿಯೂ ಕೌಶಲಗಳು ಇರುತ್ತವೆ. ಸಿಕ್ಕಿರುವ ಅವಕಾಶಗಳಿಂದ ತನ್ನನ್ನು ತಾನು ಹೇಗೆ ಅಭಿವ್ಯಕ್ತಗೊಳಿಸಿಕ್ಕೂಳ್ಳುತ್ತಾನೆ ಎಂಬುದರ ಮೇಲೆ ಆ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ ನಿಗದಿಯಾಗಿರುತ್ತದೆ. ಒದಗಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದು ಸಲಹೆ ನೀಡಿದರು.
ಶಿಬಿರದಲ್ಲಿ ಮಕ್ಕಳಿಂದ ಯೋಗ, ನೃತ್ಯ, ಸಮೂಹ ಗಾಯನಗಳ ಪ್ರದರ್ಶನ ನಡೆದವು. ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ‘ಹೆಣ್ಣು ಮಕ್ಕಳನ್ನು ರಕ್ಷಿಸಿ’ ಎಂಬ ಕಿರು ನಾಟಕದ ಪ್ರದರ್ಶನ ನಡೆಯಿತು. ಸರ್ಕಾರಿ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಸುಮಂಗಲಾ ನಾಯಕ ಸ್ವಾಗತಿಸಿದರು. ಆಪ್ತಸಮಾಲೋಚಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ರಾಜೇಶ್ವರಿ ಕೆ.ಬಿ., ಸದಸ್ಯರಾದ ಜ್ಯೋತಿ ಮಿರಾಶಿ, ಮಾರುತಿ ನಿಲೇಕಣಿ, ತರಬೇತುದಾರರಾದ ಯಮುನಾ ಶೇಟ್, ಗೀತಾ ಸಾಳಸ್ಕರ್, ವಿದ್ಯಾ ಭಟ್, ಪ್ರವೀಣಾ ದೊಡ್ಮನಿ, ಜಿ.ಕೆ. ಮಹಾಲೆ, ಅನೀಲ ಮಡಿವಾಳ, ಶುಭಾಂಗಿ ಶಿರೋಡ್ಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.