ಹೊನ್ನಾವರ: ಮೂರು ತಿಂಗಳ ಹಿಂದೆ ತಾಲ್ಲೂಕಿನಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಲ್ಲಿನ ಪೊಲೀಸರು ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಭಾನುವಾರ ಸಂಜೆ ಬಂಧಿಸಿದ್ದಾರೆ.ಮಾಗೋಡು ಗ್ರಾಮದ ಗಣೇಶ ಈಶ್ವರ ನಾಯ್ಕ (28) ಬಂಧಿತ ಎಂದು ಗುರುತಿಸಲಾಗಿದೆ.
‘ಗಣೇಶ ನಾಯ್ಕ ಕಿರುಕುಳ ನೀಡುತ್ತಿದ್ದ ಕಾರಣಕ್ಕೆ ತಾನು ಆತ್ಮಹತ್ಯೆಗೆ ಪ್ರಯತ್ನಿಸಿದೆ’ ಎಂದು ಬಾಲಕಿ ನೀಡಿದ್ದ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ‘ಪೋಕ್ಸೊ’ ಕಾಯ್ದೆಯಡಿ ಬಂಧಿಸಲಾಗಿದ್ದು, ಕಾರವಾರದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ಇದೇ 24ರವರೆಗೆ ಪೊಲೀಸರ ವಶಕ್ಕೆ ನೀಡಿದೆ.
‘ಇಬ್ಬರು ಅಪರಿಚಿತ ಯುವಕರು ಮಾನಭಂಗಕ್ಕೆ ಯತ್ನಿಸಿದಾಗ ಪ್ರತಿಭಟಿಸಿದ ನನಗೆ ಚಾಕುವಿನಿಂದ ಇರಿದರು’ ಎಂದು ಬಾಲಕಿ ಮೊದಲು ಹೇಳಿಕೆ ನೀಡಿದ್ದಳು. ನಂತರ ತನ್ನ ಹೇಳಿಕೆ ಬದಲಿಸಿ, ‘ಯುವಕನೊಬ್ಬನ ಕಿರುಕುಳದ ಕಾರಣಕ್ಕೆ ತಾನೇ ಮುಳ್ಳಿನಿಂದ ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ಹೇಳಿದ್ದಳು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.