ಮುಂಡಗೋಡ: ಸರ್ಕಾರದ ಸಹಾಯಧನದಲ್ಲಿ ತಾಲ್ಲೂಕಿನ ರೈತರಿಗೆ ವಿತರಿಸಬೇಕಾಗಿದ್ದ ಬಿತ್ತನೆ ಬೀಜಗಳನ್ನು ಬೇರೆ ತಾಲ್ಲೂಕಿನ ರೈತರಿಗೆ ಮಾರಾಟ ಮಾಡಿದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿರಸಿಯ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಇಲ್ಲಿನ ಕೃಷಿ ಇಲಾಖೆಗೆ ಭೇಟಿ ನೀಡಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬುಧವಾರ ಜರುಗಿದೆ.
ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಬೇರೆ ತಾಲ್ಲೂಕಿನ ರೈತರೊಬ್ಬರಿಗೆ 75 ಕೆ.ಜಿ. ಅಭಿಲಾಷ ಭತ್ತದ ಬೀಜಗಳನ್ನು ವಿತರಿಸಿದ್ದ ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಅವರನ್ನು ಉಪವಿಭಾಗಾಧಿಕಾರಿ ತರಾಟೆಗೆ ತೆಗೆದುಕೊಂಡರು.`ಇಲ್ಲಿನ ರೈತರ ಹೆಸರಿನಲ್ಲಿ ಬಿಲ್ ಮಾಡಿ ಬೀಜಗಳನ್ನು ಮಾರಿದರೆ ರೈತರಿಗೆ ಅನ್ಯಾಯ ಮಾಡಿದಂತಾಗುತ್ತದೆ' ಎಂದರು.
ಕೃಷಿ ಇಲಾಖೆಯ ಸಿಬ್ಬಂದಿ ಮಲ್ಲಿಕಾರ್ಜುನ ದೇವಿಕೊಪ್ಪ ಮಾತನಾಡಿ, `ನಮ್ಮ ಇಲಾಖೆಯ ಸಿಬ್ಬಂದಿಯೊಬ್ಬರ ಸಂಬಂಧಿಕ ರೈತರೊಬ್ಬರು ಬಂದು ಬಿತ್ತನೆ ಬೀಜಗಳನ್ನು ಕೇಳಿದ್ದರಿಂದ ಮುಂಡಗೋಡ ತಾಲ್ಲೂಕಿನ ರೈತನ ಹೆಸರಿನಲ್ಲಿ ಬಿಲ್ ಮಾಡಿ ಮಾರಾಟ ಮಾಡಲಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ. ಇದೊಂದು ಸಲ ಕ್ಷಮಿಸಬೇಕು' ಎಂದರು.
ನಂತರ ಕೃಷಿ ಇಲಾಖೆಯಲ್ಲಿ ಸಂಗ್ರಹವಿರುವ ಬಿತ್ತನೆ ಬೀಜಗಳನ್ನು ಪರಿಶೀಲಿಸಿದ ಉಪವಿಭಾಗಾಧಿಕಾರಿ ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳನ್ನು ವಿತರಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.