ADVERTISEMENT

ಭಟ್ಕಳ ಬಂದ್ ಶಾಂತಿಯುತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 8:30 IST
Last Updated 12 ಅಕ್ಟೋಬರ್ 2012, 8:30 IST

ಭಟ್ಕಳ: ಇಲ್ಲಿನ ಮಸೀದಿಗಳ ಹಾಗೂ ಮುಸ್ಲಿಮರ ಬಗ್ಗೆ ಪತ್ರಿಕೆಯೊಂದರಲ್ಲಿ ಕಪೋಲಕಲ್ಪಿತ ವರದಿ ಪ್ರಕಟವಾಗಿದ್ದು, ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಭಟ್ಕಳದ ಮುಸ್ಲಿಮರ ಪರಮೋಚ್ಚ ಸಂಸ್ಥೆ ಮಜ್ಲಿಸೆ ಇಸ್ಲಾಹ-ವ-ತಂಜೀಮ್ ಗುರುವಾರ ನೀಡಿದ್ದ ಭಟ್ಕಳ ಬಂದ್‌ಗೆ ಪಟ್ಟಣ ಸ್ಥಬ್ದಗೊಂಡಿತ್ತು.

ಪಟ್ಟಣದಲ್ಲಿರುವ ಬಹುತೇಕ ಅಂಗಡಿ ಮುಂಗಟ್ಟುಗಳು ಮುಸ್ಲಿಂ ಸಮಾಜಕ್ಕೆ ಸೇರಿದ್ದಾಗಿರುವುದರಿಂದ ಹೆಚ್ಚುಕಡಿಮೆ ಎಲ್ಲವೂ ಮುಚ್ಚಿದ್ದರಿಂದ ಒಂದು ರೀತಿಯಲ್ಲಿ ಇಡೀ ಭಟ್ಕಳವೇ ಬಿಕೋ ಎನ್ನುತ್ತಿತ್ತು. ತಂಜೀಮ್ ಕರೆ ನೀಡಿದ್ದ ಭಟ್ಕಳ ಬಂದ್‌ಗೆ ಕಾಂಗ್ರೆಸ್, ಜೆಡಿಎಸ್, ಸಿ.ಪಿ.ಎಂ ಪಕ್ಷಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸಹ ಬೆಂಬಲ ನೀಡಿದ್ದರಿಂದ ಹಿಂದೂ ಸಮಾಜಕ್ಕೆ ಸೇರಿದ ಅಂಗಡಿ ಮುಂಗಟ್ಟುಗಳು ಸಹ ಭಾಗಶಃ ಬಂದ್ ಆಗಿತ್ತು.

ಮುಸ್ಲಿಮ್ ಸಮಾಜಕ್ಕೆ ಸೇರಿದ ಶಾಲಾ-ಕಾಲೇಜುಗಳಿಗೆ ಮೊದಲೇ ರಜೆ ಘೋಷಣೆ ಮಾಡಲಾಗಿತ್ತು. ಬಂದ್‌ನಿಂದಾಗಿ ಸದಾ ಗಿಜಿಗುಡುತ್ತಿದ್ದ ಇಲ್ಲಿನ ಚೌಕ್‌ಬಜಾರ್‌ನಲ್ಲಿರುವ ಗಲ್ಪಬಜಾರ್ ಬಿಕೋ ಎನ್ನುತ್ತಿತ್ತು.

ಮುಸ್ಲಿಮ ಸಮಾಜಕ್ಕೆ ಸೇರಿದ ಎಲ್ಲಾ ವಾಹನಗಳ ಓಡಾಟ ಸಹ ಸ್ಥಗಿತೊಂಡಿತ್ತು. ಹಿಂದೂಗಳಿಗೆ ಸೇರಿದ ಬಹುತೇಕ ಅಂಗಡಿಗಳು, ಹೋಟೆಲ್‌ಗಳು ಎಂದಿನಂತೆ ತೆರೆದಿದ್ದರೂ, ವ್ಯಾಪಾರ- ವಹಿವಾಟು ಎಂದಿನಂತೆ ಇರಲಿಲ್ಲ. ಕೇವಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದ ಮುಸ್ಲಿಮ್ ಸಮಾಜದವರು ಪ್ರತಿಭಟನಾ ಮೆರವಣಿಗೆಯನ್ನಾಗಲಿ, ಮನವಿ ನೀಡುವುದಾಗಲಿ ಮಾಡದಿರುವುದು ವಿಶೇಷವಾಗಿತ್ತು.

ಕಲ್ಪಿತ ವರದಿ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಮುಸ್ಮಿಮ್ ಸಮಾಜದ ವತಿಯಿಂದ ತೀವ್ರವಾಗಿ ಪ್ರತಿಭಟನೆ ನಡೆಸಲಾಗುವುದು ಎಂದು ತಂಜೀಮ್‌ನ ಪದಾಧಿಕಾರಿಗಳು ತಿಳಿಸಿದ್ದಾರೆ.
ಎ.ಎಸ್.ಪಿ ಸುಧೀರಕುಮಾರ್ ರೆಡ್ಡಿ ಮಾರ್ಗದರ್ಶನದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.