ADVERTISEMENT

ಭಾಗ್ಯಜ್ಯೋತಿ ಸ್ಥಗಿತಕ್ಕೆ ವಿರೋಧ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 11:00 IST
Last Updated 4 ಮಾರ್ಚ್ 2011, 11:00 IST

ಹಳಿಯಾಳ: ತಾಲ್ಲೂಕಿನಾದ್ಯಂತ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಯಾವುದೇ ಮುನ್ಸೂಚನೆ ಇಲ್ಲದೇ ಕಡಿತಗೊಳಿಸುತ್ತಿರುವುದು ಹಾಗೂ ಪಡಿತರ ಚೀಟಿ ನೀಡದೇ ವಿಳಂಬ ಮಾಡುತ್ತಿರುವುದನ್ನು ವಿರೋಧಿಸಿ ತಾಲ್ಲೂಕು ಜೆಡಿಎಸ್ ಘಟಕದ ವತಿಯಿಂದ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸ್ಥಳೀಯ ಹೆಸ್ಕಾಂ ಇಲಾಖೆಯಿಂದ ಪ್ರಾರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಜವಾಹರ ರಸ್ತೆಯ ಮಾರ್ಗವಾಗಿ ಮುಖ್ಯ ಬೀದಿಯಿಂದ ಸಾಗಿ ತಹಸೀಲ್ದಾರ ಅಜೀಜ್ ಆರ್.ದೇಸಾಯಿ ಅವರಿಗೆ ಮನವಿ ಸಲ್ಲಿಸಿತು. ವಿಧಾನ ಪರಿಷತ್ ಮಾಜಿ ಸದಸ್ಯ ವಿ.ಡಿ.ಹೆಗಡೆ ಮನವಿ ಸಲ್ಲಿಸಿದರು.

ಹಳಿಯಾಳ ತಾಲ್ಲೂಕಿನ ಬಡ ಕುಟುಂಬಗಳಿಗೆ ಅಳವಡಿಸಲಾದ ಭಾಗ್ಯಜ್ಯೋತಿ ವಿದ್ಯುತ್ ಸಂಪರ್ಕ ವನ್ನು ಹೆಸ್ಕಾಂ ಇಲಾಖೆ ಯಾವುದೇ ಮುನ್ಸೂಚನೆ ನಿಡದೇ ಸಂಪರ್ಕ ಕಡಿತಗೊಳಿಸುತ್ತಿದ್ದು ಸದ್ಯ ಪರೀಕ್ಷೆಯ ಸಮಯ ಇರುವುದರಿಂದ ಮಕ್ಕಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಕಾರಣ ಕೂಡಲೇ ಈ ವಿದ್ಯುತ್ ಸಂಕರ್ಪ ಕಡಿತ ಮಾಡುವುದನ್ನು ನಿಲ್ಲಿಸಿ ಬಾಕಿ ಹಣವನ್ನು ಕಂತಿನ ರೂಪದಲ್ಲಿ ತುಂಬಲು ಯೋಜನೆ ರೂಪಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ಬಗ್ಗೆ ಎಚ್ಚರಿಕೆ ನೀಡಿದ್ದರೂ ಸಚಿವರ ಮಾತಿಗೆ ಬೆಲೆಯೇ ನೀಡದ ಅಧಿಕಾರಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ.ತಾಲ್ಲೂಕಿನ ಹಳ್ಳಿಗಳಿಗೆ ಕೇವಲ 6 ಗಂಟೆ ಕಾಲ 3 ಫೇಸ್ ವಿದ್ಯುತ್‌ನ್ನು ನೀಡಿ ರೈತರಿಗೆ ಅನ್ಯಾಯ ಮಾಡು ತ್ತಿದ್ದಾರೆ. ಬೆಳೆಗಳಿಗೆ ನೀರುಣಿಸಲು ಕನಿಷ್ಠ 12 ಗಂಟೆಯಾದರೂ 3 ಫೇಸ್ ವಿದ್ಯುತ್ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಪ್ರತಿಭಟನಾ ಮೆರವಣಿಗೆಯ ನೇತೃತ್ವವನ್ನು ತಾಲ್ಲೂಕು ಆಧ್ಯಕ್ಷ ಆನಂದ ಶಿವನಗೌಡ, ಮುಖಂಡರಾದ ರಾಜು ಮುಲ್ಲಾ, ಗಣಪತಿ ಕರಂಜೇಕರ, ಗುರುನಾಥ ದಾನಪ್ಪನವರ, ಶಿವಾಜಿ ಪಾಟೀಲ, ವಿಲಾಸ ಯಡವಿ, ವಿಜಯ ಬೊಬಾಟಿ, ಜಯಲಕ್ಷ್ಮಿ ಚವ್ಹಾಣ, ಲಲಿತಾ ಕೋರ್ವೇಕರ, ಸಾವಿತ್ರಿ ಗೌಡ ಮತ್ತಿತರರು ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.