ADVERTISEMENT

ಭಾರಿ ಮಳೆ: ಮನೆಯೊಳಗೆಲ್ಲ ನೀರು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 10:01 IST
Last Updated 13 ಸೆಪ್ಟೆಂಬರ್ 2013, 10:01 IST

ಹಳಿಯಾಳ: ಪಟ್ಟಣದಲ್ಲಿ ಗುರುವಾರ ಸಂಜೆ  ಸುರಿದ ಭಾರಿ ಮಳೆಗೆ  ಸ್ಥಳೀಯ ಮಾರುತಿ ಬಡಾವಣೆ ಹಾಗೂ ಮತ್ತಿತರರ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ, ನೀರನ್ನು ಹೊರ ಹಾಕಲು ಬಡಾವಣೆಯ ರಹವಾಸಿಗಳು ಹರ ಸಾಹಸ ಪಡುವಂತಾಯಿತು.

ಸ್ಥಳೀಯ ಮೋತಿಕೆರೆ ಹಾಗೂ ಪೇಟೆ ಬಸವೇಶ್ವರ ದೇವಸ್ಥಾನದ ಹತ್ತಿರ ಇರುವ ಬಸಪ್ಪಾಹೊಂಡ ಮಳೆ ನೀರಿನಿಂದ ತುಂಬಿ ನೀರು ಹೊರ ಹರಿಯಿತು. ರಸ್ತೆಯ ಬದಿಗೆ ವ್ಯಾಪಾರ  ನಡೆಸುತ್ತಿದ್ದ ತರಕಾರಿ ವ್ಯಾಪಾರಸ್ಥರ ತರಕಾರಿಗಳು ಸಹ ಮಳೆ ನೀರಿಗೆ ಕೊಚ್ಚಿಕೊಂಡು ಹೋಗಿ ಬಹಳಷ್ಟು ಹಾನಿಗೊಳಗಾಯಿತು.ತಾಲ್ಲೂಕಿನ ಗ್ರಾಮಾಂತರ ಭಾಗಗಳಲ್ಲಿಯೂ ಸಹ ಮಳೆ ಸಾಕಷ್ಟು ಪ್ರಮಾಣದಲ್ಲಿ ಸುರಿದು ಅಲ್ಲಲ್ಲಿ ಸಣ್ಣಪುಟ್ಟ ಗಿಡ ಮರಗಳು ಸಹ ಉರುಳಿ ಬಿದ್ದ ಬಗ್ಗೆ ವರದಿಯಾಗಿದೆ.

ಪಟ್ಟಣದ ಅರ್ಬನ ಬ್ಯಾಂಕ್‌  ಹತ್ತಿರ ಇರುವ ಅಬ್ದುಲ್‌ ಸವಣೂರ ರವರ ಮನೆಯ ಗೋಡೆ ಹಾಗೂ ಮೇಲ್ಛಾವಣಿ ಕುಸಿದು ಬಿದ್ದು ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿತು ಎನ್ನಲಾಗಿದೆ.

ಮುರಿದ ವಿದ್ಯುತ್‌ ಕಂಬ
ಹಳಿಯಾಳ
: ಪಟ್ಟಣದ ಜವಾಹರ ರಸ್ತೆಯ ತಿರುವಿನಲ್ಲಿ ಬುಧವಾರ ಗೂಡ್ಸ್‌ ರಿಕ್ಷಾ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಿದ್ಯುತ್‌ ಕಂಬ ತುಂಡಾಗಿ  ಬುಧವಾರ ರಾತ್ರಿಯಿಂದ ಗುರುವಾರದ ಮಧ್ಯಾಹ್ನದ ವರೆಗೆ ವಿದ್ಯುತ್‌ ಸಂಪರ್ಕವಿಲ್ಲದೆ ಜನರು ಪರದಾಡುವಂತಾಯಿತು.

ಘಟನೆಯಲ್ಲಿ  ಯಾವುದೇ ಪ್ರಾಣ ಹಾನಿ ಹಾಗೂ ಆಸ್ತಿ  ಹಾನಿಯಾಗಿಲ್ಲ.  ವಿದ್ಯುತ್‌ ತಂತಿ ಹರಿದು ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಹೆಸ್ಕಾಂ ಇಲಾಖೆಯ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ  ಬಡಾವಣೆಯ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಿದರು. ಪಟ್ಟಣದ ಬೇರೆ ಬಡಾವಣೆಗಳಿಗೆ ಬೇರೆ ಮಾರ್ಗದಿಂದ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.