ADVERTISEMENT

ಮಡಿವಂತಿಕೆ ಯಾವ ಕಾಲದಲ್ಲೂ ಇರಲಿಲ್ಲ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 8:45 IST
Last Updated 5 ಜನವರಿ 2012, 8:45 IST

ಕುಮಟಾ: `ಸರಸ್ವತಿ  ಸಮ್ಮಾನ~  ಗೌರವ ಪಡೆದ ಡಾ. ಎಸ್.ಎಲ್. ಭೈರಪ್ಪ ಅವರ ಕಾದಂಬರಿ `ಮಂದ್ರ~ವನ್ನು ಬದುಕಿಗೆ ಬೆನ್ನು ಹಾಕದೆ ಓದಬೇಕಾಗಿದೆ ಎಂದು ಶತಾವದಾನಿ ಡಾ. ಆರ್.ಗಣೇಶ ತಿಳಿಸಿದರು.

ಬುಧವಾರ ನಡೆದ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರ           `ಮಂದ್ರ~ ಕಾದಂಬರಿ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ಅವರು, ` ನಾವು ಮೆಚ್ಚುವ ವ್ಯಕ್ತಿಗಳ  ಕಾಮ ಜಗತ್ತಿನ ಬಗ್ಗೆ ನಾವು ತಲೆ ಕೆಡಿಸಿ ಕೊಳ್ಳಬೇಕಾದ ಅಗತ್ಯವಿಲ್ಲ.  ನಮ್ಮ ಸಮಾಜದ ವ್ಯಕ್ತಿಗಳ ಒಂದು ಸಂಕೇತ ವಾಗಿರುವ `ಮಂದ್ರ~ ಕಾದಂಬರಿಯ ಮೋಹನಲಾಲ್‌ನ `ಕಾಮ ಗುಣ~ ಕಾದಂಬರಿಯಲ್ಲಿ ಅಷ್ಟು ಪ್ರಸ್ತುತ ಅಲ್ಲ. ಹಾಗೆ ನೋಡಿದರೆ ತುಂಬಾ ಮಡಿವಂತಿಕೆ ಯಾವ ಕಾಲದಲ್ಲೂ ಇರಲಿಲ್ಲ~ ಎಂದರು.

ಇದಕ್ಕೂ ಮೊದಲು ಮಾತನಾಡಿದ ಕತೆಗಾರ ಡಾ. ಶ್ರೀಧರ ಬಳಗಾರ, ` ಕನ್ನಡ ಕಾದಂಬರಿ ಜಗತ್ತಿನ ಚರ್ಚಾಪಟು ಎಸ್.ಎಲ್. ಭೈರಪ್ಪ. ಒಬ್ಬ  ಸಂಗೀತಗಾರ ಹಾಗೂ ವಿಷಯ ಲಂಪಟ ಒಟ್ಟೊಟ್ಟಿಗೇ ಆಗಿರುವ `ಮಂದ್ರ~ ಕಾದಂಬರಿಯ  ಮೋಹನ್‌ಲಾಲ್ ವೈರುದ್ಯದ ಸಂಕೇತವಾಗಿ ಸಮಾಜದ ಎದುರು ನಿಲ್ಲುತ್ತಾನೆ. ಆತನ ಶಿಷ್ಯೆಯರ ಕೌಟುಂಬಿಕ ವ್ಯವಸ್ಥೆ ಆತನ ಸಂಗೀತ ಸೇವೆಗೆ ಒಂದು ಅಡಚಣೆಯಾಗಿ ಕಾಣುತ್ತದೆ. ಮೋಹನಲಾಲ್‌ನ ವಿಷಯ ಲಂಪಟತನದಿಂದಾಗಿ  ಸಂಗೀತ ಪರಂಪರೆಯಲ್ಲಿ ಯಾವ ಶಿಷ್ಯ  ವರ್ಗ ವನ್ನೂ ಆತನ ನಿರ್ಮಾಣ ಮಾಡಲು ಸಾಧ್ಯವಾಗುವುದಿಲ್ಲ. ಕಾದಂಬರಿಯಲ್ಲಿ ಸಂಗೀತದ ಮೂಲಕ ಬಲಿದಾನ ಬೇಡುವ ಮೋಹನ ಲಾಲ್‌ನ ಪಾತ್ರ  ಒಂದು ಪ್ರಶ್ನೆಯಗಿ ನಿಲ್ಲುತ್ತದೆ~ ಎಂದರು.

ಪತ್ರಕರ್ತ ರಘುಪತಿ ಯಾಜಿ, ` ಸಂಗೀತ  ಮತ್ತು ಲೈಂಗಿಕತೆ ಕಾದಂಬರಿ ಯಲ್ಲಿ ಕೊಡ-ಕೊಳ್ಳುವ ಸರಕಾಗಿ ಕಾಣುತ್ತದೆ~ ಎಂದರು.

ಪ್ರಿಯಂವದಾ ವೆಂಕಟರಾಜ,         ಕಲಿಕೆಯ ಪ್ರಕ್ರಿಯೆಯಲ್ಲಿ ಶಿಷ್ಯೆ ತನ್ನನ್ನು ಸಮರ್ಪಿಸಿಕೊಳ್ಳಬೇಕಾದದು ಕಲೆಗೋ ಅಥವಾ ಕಲಾವಿದನಿಗೋ ಎಂಬುದು ` ಮಂದ್ರ~ ಕಾದಂಬರಿಯುದ್ದಕ್ಕೂ ಕಾಡುವ ಪ್ರಶ್ನೆ~ ಎಂದರು.

ಡಾ. ಮಹೇಶ ಅಡಕೋಳಿ ನಿರೂ ಪಿಸಿದರು. ವೇದಿಕೆಯಲ್ಲಿ  ಹವ್ಯಕ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ಡಾ. ಟಿ.ಟಿ. ಹೆಗಡೆ ಸ್ವಾಗತಿಸಿದರು. ಕಾರ್ಯದರ್ಶಿ ಆರ್.ಜಿ. ಭಟ್ಟ ಇದ್ದರು. ಕಾರ್ಯಕ್ರಮ ದಲ್ಲಿ ಮಾಜಿ ಶಾಸಕ ಡಾ. ಎಂ.ಪಿ. ಕರ್ಕಿ,  ವಿನಯಾ ಶಾನಭಾಗ,  ಎಚ್.ವಿ. ಹೆಗಡೆ, ಡಾ. ಜ್ಯೊತ್ಸ್ನಾ ಕಾಮತ್, ಬಿ.ಎ. ಸನದಿ, ಪುಟ್ಟು ಕುಲಕರ್ಣಿ, ಅರವಿಂದ ಕರ್ಕಿಕೋಡಿ, ಪತ್ರಕರ್ತರಾದ ಕೃಷ್ಣ ಮೂರ್ತಿ ಹೆಬ್ಬಾರ, ವೆಂಕಟರಾಜ, ಪ್ರಾಧ್ಯಾಪಕ ಡಾ. ಜಿ ಎಲ್.ಹೆಗಡೆ,  ಡಾ ಜಿ.ಜಿ. ಹೆಗಡೆ, ಡಾ. ಕೆ. ಗಣಪತಿ ಭಟ್ಟ ಮೊದಲಾದವರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.