ADVERTISEMENT

ಮಾನವೀಯ ನೆಲೆಗಟ್ಟಿನ ಸಾಹಿತ್ಯ ಶಾಶ್ವತ

ವಿ.ಎಂ. ಭಟ್ಟರ ‘ಮತ್ತೆ ಸಂಭವಿಸು’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ಮತ್ತಿಹಳ್ಳಿ ಅಭಿಮತ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2016, 9:24 IST
Last Updated 12 ಅಕ್ಟೋಬರ್ 2016, 9:24 IST

ಶಿರಸಿ: 'ಶೋಕವೇ ಶ್ಲೋಕವಾದ ರಾಮಾಯಣ ಇಂದಿಗೂ ಪ್ರಸ್ತುತವಾಗಿದೆ. ಕಾರಣ ಅಗಲುವಿಕೆಯೇ ಮಾನವನೊಳಗಿನ ಸೃಜನಶೀಲತೆಗೆ ನಾಂದಿಯಾಗಬೇಕು’ ಎಂದು ವಿಮರ್ಶಕ ಸುಬ್ರಾಯ ಮತ್ತಿಹಳ್ಳಿ ಹೇಳಿದರು. ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಂಜಿನಿಯರ್ ವಿ.ಎಂ. ಭಟ್ಟ ಅವರ ‘ಮತ್ತೆ ಸಂಭವಿಸು’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕಾವ್ಯ ಅನುಸಂಧಾನ ಮಾಡಿಕೊಂಡವರು ಮಾನವೀಯತೆ ಸಂದೇಶಕ್ಕೆ ಕಾರಣ ವಾಗುತ್ತಾರೆ. ಕಾವ್ಯಕ್ಕೆ ಎಂದಿಗೂ ಅಕ್ಷರ ಅನಿವಾರ್ಯವಲ್ಲ. ಹೀಗಾಗಿ ಬದುಕಿನ ಎಲ್ಲ ಸಂಗತಿಗಳೂ ಕಾವ್ಯದ ಮೂಲ ವಾಗಿವೆ. ಮಾನವೀಯ ನೆಲೆಗಟ್ಟಿನ ಸಾಹಿತ್ಯ ಶಾಶ್ವತವಾಗುತ್ತದೆ. ವಿ.ಎಂ.ಭಟ್ಟರ ಕಾವ್ಯ ಕೂಡ ಇಂತಹ ಒಳ್ಳೆಯ ಪ್ರವಾಹದಲ್ಲಿ ಸಾಗುತ್ತಿರುವುದು ಶ್ಲಾಘನೀಯ ಎಂದರು.

ಎಂಇಎಸ್ ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ರವಿ ನಾಯಕ ಅವರು ಅಗಲಿದ ತಮ್ಮ ಪತ್ನಿ ಮಮತಾ ಹೆಸರಿನಲ್ಲಿ ಪ್ರಾರಂಭಿಸಿರುವ ಟ್ರಸ್ಟ್ ಅನ್ನು ಡಾ. ಕೆ.ಬಿ. ಪವಾರ ಉದ್ಘಾಟಿಸಿದರು. ಸಮಾಜ ಮಾನವೀಯ ನೆಲೆಯಲ್ಲಿ ಮುನ್ನಡೆಯಲು ಪ್ರಬುದ್ಧತೆ ಹಾಗೂ ಮಮತೆಗೆ ಅನ್ವರ್ಥವಾಗಿದ್ದ ಮಮತಾ ಅವರು ಮತ್ತೆ ಸಂಭವಿಸಬೇಕು.

ಸಾಧನೆಯ ಪಥದಲ್ಲಿ ಸಾಗುತ್ತಿರುವವರು ಏಕಾಏಕಿ ಕಣ್ಮರೆಯಾದರೆ ಆಘಾತ ಸಹಜವಾಗಿದೆ. ಆದರೆ ಅವರ ಆಶಯ, ಸಾಧನೆಯ ಗುರಿ ನಿಲ್ಲಬಾರದು. ಮಮತಾರ ಆಶಯ ಟ್ರಸ್ಟ್ ಮೂಲಕ ಈಡೇರಬೇಕು ಎಂದರು.

ಕೃತಿಕಾರ ವಿ.ಎಂ.ಭಟ್ಟ ಮಾತನಾಡಿ ‘ಕನಸಿನ ಭಾವನೆಗಳಿಗೆ ಅಕ್ಷರ ರೂಪ ನೀಡಿದ್ದೇನೆ. ಪುಸ್ತಕ ಬಿಡಗಡೆ ಸಂತಸ ಒಂದೆಡೆಯಾದರೆ ಸಹೋದರಿಯಂತಿದ್ದ ಮಮತಾ ಅಗಲಿಕೆ ನೋವು ಇನ್ನೊಂದೆಡೆ ಕಾಡುತ್ತಿದೆ’ ಎಂದರು.

ವಿದ್ವಾನ್ ಉಮಾಕಾಂತ ಭಟ್ಟ ಕೆರೇಕೈ, ಲಯನ್ಸ್ ಕ್ಲಬ್ ಅಧ್ಯಕ್ಷೆ ರಮಾ ಪಟವರ್ಧನ, ತ್ರಿವಿಕ್ರಮ ಪಟವರ್ಧನ, ಸುಮಾ ನಾಯ್ಕ, ಸೀತಾಲಕ್ಷ್ಮಿ ಭಟ್ಟ ಇದ್ದರು. ಎಂ.ಎಂ. ಭಟ್ಟ ಸ್ವಾಗತಿಸಿದರು. ಐ.ಎಂ. ಹೆಗಡೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.