ADVERTISEMENT

ಮುಂಗಾರು ಆಗಮನ: ಸುರಕ್ಷತೆಗೆ ಗಮನ

​ಪ್ರಜಾವಾಣಿ ವಾರ್ತೆ
Published 4 ಜೂನ್ 2011, 6:20 IST
Last Updated 4 ಜೂನ್ 2011, 6:20 IST

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಗುರುವಾರ ಮಧ್ಯರಾತ್ರಿಯಿಂದ ಭಾರಿ ಗಾಳಿಯೊಂದಿಗೆ ಮಳೆ ಸುರಿದಿದೆ. ಗುರುವಾರ ರಾತ್ರಿ ಪ್ರಾರಂಭವಾದ ಮಳೆ ಶುಕ್ರವಾರ ಬೆಳಿಗ್ಗಿನ ಜಾವದ ವರೆಗೂ ಸುರಿದಿದ್ದು ಒಟ್ಟು 1003. 37 ಮಿ.ಮೀ. ಮಳೆಯಾಗಿದೆ.

ಅರಬ್ಬಿ ಸಮುದ್ರದಲ್ಲಿ ಕೆಲವೊಮ್ಮೆ ಜೋರಾಗಿ ಗಾಳಿ ಬೀಸುತ್ತಿದ್ದು ಭಾರಿ ಗಾತ್ರದ ಅಲೆಗಳು ಏಳುತ್ತಿವೆ. ಸಮುದ್ರದಲ್ಲಿ ಅಲೆಗಳ ಆರ್ಭಟ ಹೆಚ್ಚಾಗಿರುವುದರಿಂದ ಮೀನುಗಾರರು ಕಡಲಿಗಿಳಿಯುವ ಧೈರ್ಯ ತೋರಲಿಲ್ಲ.

ನೈಋತ್ಯ ಮುಂಗಾರು ಕರಾವಳಿ ಪ್ರವೇಶ ಮಾಡಿದ್ದು ಮುಂದಿನ 24 ಗಂಟೆಯ ಅವಧಿಯಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಗಾಳಿ ಆಗಾಗ ಬೀಸುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಹಳ್ಳ-ಕೊಳ್ಳದಲ್ಲಿ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ಶರಾ ವತಿ, ಕಾಳಿ, ಗಂಗಾವಳಿ ಹಾಗೂ ಅಘನಾಶಿನಿ ನದಿಗಳಲ್ಲಿ ಹರಿಯುವ ನೀರಿನ ಮಟ್ಟದಲ್ಲೂ ಏರಿಕೆ ಕಂಡಿದೆ.

ಸನ್ನದ್ಧರಾಗಲು ಸಲಹೆ
ಯಲ್ಲಾಪುರ: ಮಳೆಗಾಲ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪ ಎದುರಿಸಲು ಎಲ್ಲ ಇಲಾಖೆಯ ಅಧಿಕಾರಿಗಳು ಸನ್ನದ್ಧರಾಗಿರಬೇಕೆಂದು ತಹಸೀಲ್ದಾರ ಮಂಜುನಾಥ ಬಳ್ಳಾರಿ ಸೂಚನೆ ನೀಡಿದರು.
ಅವರು ತಮ್ಮ ಕಚೇರಿಯಲ್ಲಿ ಪ್ರಕೃತಿ ವಿಕೋಪದ ಕುರಿತು ಶುಕ್ರವಾರ ನಡೆಸಿದ ಸಭೆಯಲ್ಲಿ ಮಾತನಾಡಿದರು. 

ಎಲ್ಲ ಇಲಾಖೆಯ ಅಧಿಕಾರಿಗಳು ಪ್ರಾಕೃತಿಕ ಆಪತ್ತಿನಿಂದಾದ ಹಾನಿಯ ಕುರಿತು 24 ಗಂಟೆಯೊಳಗಾಗಿ ತಮ್ಮ ಕಛೇರಿಗೆ ವರದಿಮಾಡಬೇಕು. ತಿಂಗಳಾಂತ್ಯದಲ್ಲಿ ಎಲ್ಲ ಮಾಹಿತಿಯನ್ನು ತಾಲ್ಲೂಕು ಆಡಳಿತಕ್ಕೆ ನೀಡಬೇಕು.

ಮಳೆಗಾಲದಲ್ಲಿ ನಡೆಯುವ ಯಾವುದೇ ಸಣ್ಣ ಬದಲಾವಣೆಯನ್ನೂ ತಾಲ್ಲೂಕು ಕಚೇರಿ ಗಮನಕ್ಕೆ ತರಬೇಕು. ಈ ಕಾರಣಕ್ಕಾಗಿ 24 ಗಂಟೆ ದೂರವಾಣಿ ಸ್ವೀಕರಿಸುವ ವ್ಯವಸ್ಥೆ ಮಾಡ ಲಾಗಿದೆ. ಮಾಹಿತಿ ನೀಡದ ಅಧಿಕಾರಿಗಳನ್ನು ಅವಘಡಗಳಿಗೆ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.

ಸರ್ಕಾರಿ ನೌಕರರು ಎರಡು ದಿನಕ್ಕಿಂತ ಹೆಚ್ಚು ರಜೆ ತೆರಳಬೇಕಾದರೆ ಉಪವಿಭಾಗಾಧಿಕಾರಿಗಳ ಒಪ್ಪಿಗೆ ಪಡೆಯಬೇಕು ಎಂದ ತಹಸೀಲ್ದಾರರು ತೋಟಗಾರಿಕೆ ಮತ್ತು ಕೃಷಿ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಾದ ಬೆಳೆ ಹಾನಿಯ ಕುರಿತು ವರದಿ ಒಪ್ಪಿಸಬೇಕು, ಗ್ರಾ. ಪಂ. ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗಟಾರಗಳನ್ನು ಸ್ವಚ್ಛಗೊಳಿಸಬೇಕು ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.