ಪ್ರಜಾವಾಣಿ ವಾರ್ತೆ
ಹೊನ್ನಾವರ: ತಾಲ್ಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗ್ವಾ ಗ್ರಾಮದ ಸುಬ್ರಹ್ಮಣ್ಯದ ಮಯೂರ ಮಂಟಪದಲ್ಲಿ ಇದೇ 8ರಂದು ನಡೆಯಲಿದೆ.
8ರಂದು ಬೆಳಿಗ್ಗೆ 8.30ಕ್ಕೆ ತಹಶೀಲ್ದಾರ್ ಸಿ.ಕೆ.ನಾಯ್ಕ ಹಾಗೂ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರೋಹಿದಾಸ ನಾಯಕ ಕ್ರಮವಾಗಿ ರಾಷ್ಟ್ರ ಧ್ವಜಾರೋಹಣ ಹಾಗೂ ಪರಿಷತ್ತಿನ ಧ್ವಜಾರೋಹಣ ನೆರವೇರಿಸುವರು.
9ಗಂಟೆಗೆ ಸಮ್ಮೇಳನಾಧ್ಯಕ್ಷ ಎಸ್.ಡಿ.ಶೆಟ್ಟಿ ಅವರ ಮೆರವಣಿಗೆ ಹಾಗೂ 9.30ಕ್ಕೆ ಸಮ್ಮೇಳನದ ಉದ್ಘಾಟನೆ ನಡೆಯುವುದು.
ರಾಗಶ್ರೀ ಸಂಗೀತ ವಿದ್ಯಾಲಯದಿಂದ ನಾಡಗೀತೆ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಎಸ್.ಡಿ.ಹೆಗಡೆ ಅವರಿಂದ ಸ್ವಾಗತ ಭಾಷಣ ನಡೆಯಲಿದ್ದು ಜಾನಪದ ವಿದ್ವಾಂಸ ಜಿ.ಎಸ್.ಭಟ್ಟ ಮೈಸೂರು ಸಮ್ಮೇಳನದ ಉದ್ಘಾಟನೆ ನೆರವೇರಿಸುವರು. ಸಾಹಿತಿ ಡಾ.ಮಳಲಿ ವಸಂತ ಕುಮಾರ ಆಶಯ ಭಾಷಣ ಮಾಡಲಿದ್ದು ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಡಾ.ಶ್ರೀಪಾದ ಶೆಟ್ಟಿ ನೂತನ ಅಧ್ಯಕ್ಷರಿಗೆ ಕನ್ನಡ ಬಾವುಟ ಹಸ್ತಾಂತರ ಮಾಡುವರು. ಪಿ.ಆರ್.ನಾಯ್ಕ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸುವರು.
ಸಮ್ಮೇಳನಾಧ್ಯಕ್ಷರಿಂದ ಮಾತು, ಡಾ.ಎನ್.ಆರ್.ನಾಯಕ ಅವರಿಂದ ಪುಸ್ತಕ ಬಿಡುಗಡೆ, ಪಿ.ಎಸ್.ಭಟ್ಟ ಅವರಿಂದ ಪುಸ್ತಕ ಮಳಿಗೆ ಉದ್ಘಾಟನೆ ನಡೆಯಲಿದ್ದು ಧರ್ಮದರ್ಶಿ ಡಾ.ಜಿ.ಜಿ.ಸಭಾಹಿತ ಭಾಗವಹಿಸುವರು.
ಸಾಹಿತಿ ಪಿ.ಐ.ಹೆಗಡೆ ‘ತಾಲ್ಲೂಕು ಸಾಹಿತ್ಯ ಅವಲೋಕನ’ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು ಪ್ರೊ.ಎನ್.ಜಿ.ಹೆಗಡೆ, ಶಿಕ್ಷಕ ಎಂ.ಡಿ.ಹರಿಕಾಂತ, ಉಪನ್ಯಾಸಕ ರಾಮ ಹೆಗಡೆ ಕೆರೆಮನೆ ವಿಷಯ ಮಂಡನೆ ಮಾಡುವರು. ಕವಿ ವೆಂಭ ವಂದೂರು ಕವಿ–ಕಾವ್ಯ ಸಮಯ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದು ರತ್ನಾ ಪಟಗಾರ,ಸಿದ್ಧಲಿಂಗ ಸ್ವಾಮಿ, ಎಂ.ಎಸ್.ಹೆಗಡೆ, ಪ್ರಶಾಂತ ಹೆಗಡೆ, ಗೋಪಾಲಕೃಷ್ಣ ಹೆಗಡೆ, ಅಣ್ಣಪ್ಪ ನಾಯ್ಕ, ತ್ರಿವೇಣಿ ಗೌಡ, ಕುಸುಮಾ ನಾಯ್ಕ, ಜ್ಯೋತಿ ಹೆಗಡೆ, ದಿವ್ಯಾ ಭಟ್ಟ, ವಿದ್ಯಾಧರ ನಾಯ್ಕ, ವಿನಾಯಕ ನಾಯ್ಕ, ಕೃಷ್ಣ ಭಟ್ಟ , ಜಿ.ಡಿ.ಭಟ್ಟ ಭಾಗವಹಿಸುವರು.
ಮಧ್ಯಾಹ್ನ 3ಕ್ಕೆ ಸಮ್ಮೇಳನಾಧ್ಯಕ್ಷರೊಡನೆ ನಡೆಯುವ ಸಂವಾದದಲ್ಲಿ ಸಾಹಿತಿ ವಿಡಂಬಾರಿ ಆಶಯ ನುಡಿಗಳನ್ನಾಡುವರು. ಡಾ.ಜಿ.ಎಸ್.ಹೆಗಡೆ, ಡಾ.ಜಿ.ಕೆ.ಹೆಗಡೆ, ಸುರೇಶ ನಾಯ್ಕ, ಸಾಧನಾ ಬರ್ಗಿ, ಮಾಸ್ತಿ ಗೌಡ, ಸುಧಾ ಭಂಡಾರಿ ಭಾಗವಹಿಸುವರು.
ಸಾಹಿತಿ ಗಂಗಾಧರ ಶಾಸ್ತ್ರಿ ಮಧ್ಯಾಹ್ನ 4ಕ್ಕೆ ನಡೆಯುವ ಸನ್ಮಾನ ಹಾಗೂ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು ಲೇಖಕ ಎಸ್.ಎನ್.ಹೆಗಡೆ ಮೈಸೂರು, ಸಮ್ಮೇಳನಾಧ್ಯಕ್ಷ ಎಸ್.ಡಿ.ಶೆಟ್ಟಿ, ಸಂಪಾದಕ ನಾರಾಯಣ ಹೆಗಡೆ, ಸಾಹಿತಿ ಎಲ್.ಎಸ್.ಶಾಸ್ತ್ರಿ ಭಾಗವಹಿಸುವರು.
ಶಂಭು ಹೆಗಡೆ, ವಾಸುದೇವ ಶೆಟ್ಟಿ, ಹನುಮಿ ಗೌಡ, ಗೀತಾಲಕ್ಷ್ಮಿ ಹೆಗಡೆ, ಡಾ.ಇಸ್ಮಾಯಿಲ್ ತಲಖಣಿ, ಶಂಭು ಹೆಗಡೆ ಅವರನ್ನು ಸನ್ಮಾನಿಸಲಾಗುವುದು ಎಂದು ಸಮಿತಿ ತಿಳಿಸಿದೆ.
ಸಮ್ಮೇಳನಾಧ್ಯಕ್ಷರ ಪರಿಚಯ: ಹೊನ್ನಾವರ ತಾಲ್ಲೂಕು 5ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ.ಎಸ್.ಡಿ.ಶೆಟ್ಟಿ ಮೂಲತಃ ತಾಲ್ಲೂಕಿನ ಹಳದೀಪುರ ಗ್ರಾಮದ ಸಾಲಿಕೇರಿಯವರಾಗಿದ್ದು ಉಜರೆಯ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಪ್ರಸ್ತುತ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕರಾಗಿ, ಧರ್ಮಸ್ಥಳದ ಶ್ರೀ ಮಂಜುಷಾ ವಸ್ತು ಸಂಗ್ರಹಾಲಯದ ಕ್ಯುರೇಟರ್ ಆಗಿ, ಉಜರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಡಾ.ಹಾ.ಮಾ.ನಾ ಸಂಶೋಧನಾ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವ ಇವರ 15 ಕೃತಿಗಳು,9 ಸಂಪಾದನ ಗ್ರಂಥಗಳು, 56ಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ.
ಶೋಧ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿರುವ ಡಾ.ಎಸ್.ಡಿ.ಶೆಟ್ಟಿ ಎಂ.ಫಿಲ್. ಮತ್ತು ಪಿಎಚ್.ಡಿ.ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.