ADVERTISEMENT

ಮುಠ್ಠಳ್ಳಿ ಗ್ರಾ.ಪಂ.ಕಟ್ಟಡ ಕಾಮಗಾರಿ ನೆನೆಗುದಿಗೆ:ಪುರಾತತ್ವ ಇಲಾಖೆ ಕಾನೂನು ಅಡ್ಡಿ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2012, 8:20 IST
Last Updated 20 ಅಕ್ಟೋಬರ್ 2012, 8:20 IST

ಭಟ್ಕಳ: ಪುರಾತತ್ವ ಇಲಾಖೆಯ ಕಾನೂನು ಅಡ್ಡಿಯ ಹಿನ್ನೆಲೆಯಲ್ಲಿ ತಾಲ್ಲೂಕಿನ ಮುಠ್ಠಳ್ಳಿ ಗ್ರಾ.ಪಂ.ನ ನೂತನ ಕಟ್ಟಡ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿರುವ ವಿದ್ಯಮಾನ ಬೆಳಕಿಗೆ ಬಂದಿದೆ.

ಎರಡು ವರ್ಷಗಳ ಹಿಂದೆ ಮುಠ್ಠಳ್ಳಿ ಗ್ರಾ.ಪಂ.ನ ನೂತನ ಕಟ್ಟಡಕ್ಕೆ ನಬಾರ್ಡ್‌ನಿಂದ 20 ಲಕ್ಷ ರೂಪಾಯಿ ಮಂಜೂರಾಗಿ ಭೂಸೇನಾ ನಿಗಮ ಕಟ್ಟಡ ಕಾಮಗಾರಿಯನ್ನು ನಿರ್ವಹಿಸುತ್ತಿತ್ತು. ಈ ಹಿಂದೆ ಮನೆ ನಿರ್ಮಾಣ,ಕಟ್ಟಡ ಕಾಮಗಾರಿಗೆ ಗ್ರಾಮೀಣ ಭಾಗದಲ್ಲಿ ಆಯಾ ಗ್ರಾ.ಪಂ.ಪರವಾನಗಿ ಮಾತ್ರ ಸಾಕಾಗುತ್ತಿತ್ತು.
ಆದರೆ ಪುರಾತತ್ವ ಇಲಾಖೆಯ ಹೊಸ ಕಾನೂನಿನನ್ವಯ, ಇಲಾಖೆಯ ಅಡಿಯಲ್ಲಿರುವ ಐತಿಹಾಸಿಕ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ 300 ಮೀಟರ್ ಸುತ್ತಮುತ್ತಲಿನ ಪ್ರದೇಶ ನಿಷೇಧಿತ ಪ್ರದೇಶವಾಗಿದೆ.
ಈ ಹಿನ್ನೆಲೆಯಲ್ಲಿ ಮುಠ್ಠಳ್ಳಿ ಗ್ರಾ.ಪಂ.ನ ನೂತನ ಕಟ್ಟಡ ಕಾಮಗಾರಿ ದೇವಸ್ಥಾನದ 215 ಮೀಟರ್ ದೂರದಲ್ಲಿ ನಡೆಯುತ್ತಿರುವುದರಿಂದ, ಕಟ್ಟಡಕ್ಕೆ ಪುರಾತತ್ವ ಇಲಾಖೆಯ ಪರವಾನಗಿ ಅಗತ್ಯವಾಗಿದೆ.

ಭೂಸೇನಾ ನಿಗಮಕ್ಕೆ ಇಲಾಖೆಯು ಕಟ್ಟಡ ಕಾಮಗಾರಿ ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಇನ್ನೊಂದೆಡೆ ಕೊಂಕಣ ರೈಲ್ವೆ ಮುಠ್ಠಳ್ಳಿ ಮೂಲಕ ಹಾದು ಹೋಗಿರುವುದರಿಂದ, ರೈಲ್ವೆ ಹಳಿಯಿಂದ 34 ಮೀಟರ್ ವ್ಯಾಪ್ತಿಯಲ್ಲಿ ಕಟ್ಟಡಗಳಿಗೆ ಪರವಾನಗಿ ನೀಡಬಾರದೆಂದು ರೈಲ್ವೆ ಇಲಾಖೆ ಮುಠ್ಠಳ್ಳಿ ಗ್ರಾ.ಪಂ.ಗೆ ನಿರ್ದೇಶನ ನೀಡಿದೆ.

`ಈಗಾಗಲೇ ಕಟ್ಟಡಕ್ಕೆ ಸುಮಾರು 9ಲಕ್ಷ ರೂಪಾಯಿ ವ್ಯಯವಾಗಿದ್ದು, ಉಳಿದ ಹಣ ಹಿಂತಿರುಗಿ ಹೋಗುವ ಸಾಧ್ಯತೆಯೂ ಇದೆ. ಭಟ್ಕಳದಲ್ಲಿ ಸುಮಾರು 18ಕ್ಕೂ ಹೆಚ್ಚು ಸ್ಮಾರಕಗಳಿದ್ದು, ಎಲ್ಲವೂ ಪುರಾತತ್ವ ಇಲಾಖೆಯ ಅಧೀನಕ್ಕೊಳಪಟ್ಟಿದೆ. ಪುರಾತತ್ವ ಇಲಾಖೆ ಕಾನೂನು ಸಡಿಲಗೊಳ್ಳದಿದ್ದರೆ, ಇದರ 300 ಮೀಟರ್ ವ್ಯಾಪ್ತಿಯ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿ ಅಸಾಧ್ಯ~ ಎಂದು ಮುಠ್ಠಳ್ಳಿ ಗ್ರಾಮಸ್ಥರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.