ADVERTISEMENT

ಮುರುಡೇಶ್ವರದಲ್ಲಿ ಕ್ಯಾಬಿನೆಟ್ ಸಭೆ: ಅಸ್ನೋಟಿಕರ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2011, 7:15 IST
Last Updated 8 ಜೂನ್ 2011, 7:15 IST

ಕಾರವಾರ: ಅಧಿವೇಶನ ಮುಗಿದ ಬಳಿಕ ಮುರುಡೇಶ್ವರದಲ್ಲಿ ಸಂಪುಟ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತುಕೊಟ್ಟಿದ್ದಾರೆ ಎಂದು ಶಾಸಕ ಆನಂದ ಅಸ್ನೋಟಿಕರ್ ಹೇಳಿದರು.ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆ ನಡೆಸುವ ಕುರಿತು ನಿಖರವಾದ ದಿನಾಂಕ ಗೊತ್ತಾಗಿಲ್ಲ  ಎಂದರು.

ಮುರುಡೇಶ್ವರದಲ್ಲಿ ಸಚಿವ ಸಂಪುಟ ಸಭೆ ನಡೆದರೆ ಇಡೀ ಜಿಲ್ಲೆಯ ಸಮಸ್ಯೆಗಳ ಹಾಗೂ ಇಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಚರ್ಚೆ ನಡೆಸಬಹುದಾಗಿದೆ ಎಂದರು.

ಕಾರವಾರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಜಿಲ್ಲಾ ಆಸ್ಪತ್ರೆಯಲ್ಲಿ ಅಂದಾಜು 25 ಎಕರೆಯಷ್ಟು ಜಾಗದಲ್ಲಿದೆ. ಜಾಗ ಕಡಿಮೆ ಬಿದ್ದರೆ ಜಿಲ್ಲಾ ಕೇಂದ್ರ ಕಾರಾಗೃಹದ ಭೂಮಿಯನ್ನು ಪಡೆದುಕೊಳ್ಳಲಾಗುವುದು ಎಂದರು.

ಕಲ್ಲುಕ್ವಾರಿ, ಕೃಷರ್ ಹಾಗೂ ಉಸುಕಿಗೆ ಸಂಬಂಧಪಟ್ಟಂತೆ ಈಗಾಗಲೇ ಮುಖ್ಯಮಂತ್ರಿಯವ ರೊಂದಿಗೆ ಚರ್ಚೆ ನಡೆಸಿದ್ದೇನೆ. ಅಧಿವೇಶನ ಮುಗಿದ ಬಳಿಕ ವಿವರವಾಗಿ ಈ ಬಗ್ಗೆ ಚರ್ಚೆ ನಡೆಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅಧಿವೇಶನ ಮುಗಿದ ನಂತರ ಅವರನ್ನು ಭೇಟಿ ಮಾಡಲಾಗುವುದು ಎಂದರು.

ಅಂಕೋಲಾ ತಾಲ್ಲೂಕಿನ ಹೊನ್ನಳ್ಳಿಯಲ್ಲಿ ಅಂದಾಜು 200 ಎಕರೆ ಕಂದಾಯ ಜಮೀನು ಇದ್ದು ಅದರಲ್ಲಿ 50 ಎಕರೆ ಜಮೀನು ಪಡೆದು ಅಂಕೋಲಾ ಹಾಗೂ ಕಾರವಾರ ತಾಲ್ಲೂಕಿನಲ್ಲಿರುವ ಎಲ್ಲ ಕೃಷರ್‌ಗಳನ್ನು ಅಲ್ಲಿ ಸ್ಥಾಪಿಸಿ ಅದನ್ನು ಕೃಷರ್ ಎಸ್ಟೆಟ್‌ನ್ನಾಗಿ ಮಾಡಬಹುದಾಗಿದೆ ಎಂದು ಆಸ್ನೋಟಿಕರ್ ಹೇಳಿದರು.

ಅರಣ್ಯ ಇಲಾಖೆ ಮತ್ತು ಗಣಿ ಇಲಾಖೆಗಳ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಾರ್ವಜನಿಕರಿಗೆ ಸಮಸ್ಯೆಯಾಗದ ಪ್ರದೇಶದಲ್ಲಿ ಕಲ್ಲು ಕ್ವಾರಿ ನಡೆಸಲು ಲೀಸ್ ಮೇಲೆ ಅನುಮತಿ ಪಡೆಯಲಾಗುವುದು.ಮರಳು ಸಮಸ್ಯೆ ಕುರಿತು ನೆರೆಯ ಗೋವಾ ರಾಜ್ಯದ ಮಾಜಿ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ಪರಿಹಾರ ಕಂಡುಕೊಳ್ಳುವುದಾಗಿ ಅವರು ತಿಳಿಸಿದರು.

ಕಾರವಾರ-ಅಂಕೋಲಾ ಕ್ಷೇತ್ರದ ಸಮಸ್ಯೆ ಮತ್ತು ಕುಂದು ಕೊರತೆ ಬಗ್ಗೆ ಸಿಮ್ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಮುಖ್ಯಮಂತ್ರಿಗಳೇ ಕ್ಷೇತ್ರಕ್ಕೆ ಬರುವುದಾಗಿ ತಿಳಿಸಿದ್ದಾರೆ. ಅಧಿವೇಶನ ಮುಗಿದ ನಂತರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಗಮನ ಹರಿಸುವುದಾಗಿ ಅಸ್ನೋಟಿಕರ ನುಡಿದರು.

ಜಿ.ಪಂ. ಎಂಜಿನಿಯರಿಂಗ್ ವಿಭಾಗ ಕಚೇರಿ ಸ್ಥಳಾಂತರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಸಚಿವ ಜಗದೀಶ ಶೆಟ್ಟರ ಅವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಕಚೇರಿಯನ್ನು ಮರಳಿ ಕಾರವಾರ ಕೇಂದ್ರ ಸ್ಥಾನಕ್ಕೆ ಬರುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.